Site icon Ullalavani

ನಟ ರೂಪೇಶ್ ಶೆಟ್ಟಿ ನೇತೃತ್ವದಲ್ಲಿ ಶಿವಾಜಿ ಫ್ರೆಂಡ್ಸ್ ಕ್ಲಬ್ ನಲ್ಲಿ ಆಹಾರ ಕಿಟ್ ವಿತರಣೆ


ಉಳ್ಳಾಲ: ನಟರಾಗಿ ಸಮಾಜದ ಜವಾಬ್ದಾರಿ ವಹಿಸುತ್ತಾ ಜಿಲ್ಲೆಯಾದ್ಯಂತ ಪ್ರಚಾರದ ಹಂಗಿಲ್ಲದೆ ಜನರ ಸಂಕಷ್ಟದಲ್ಲಿ ಪಾಲ್ಗೊಳ್ಳುತ್ತಿರುವ ರೂಪೇಶ್ ಶೆಟ್ಟಿ ಕಾರ್ಯ ಶ್ಲಾಘನೀಯ ಎಂದು ರೀಚಲ್ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟೀ ಸಿರಿಲ್ ರಾಬರ್ಟ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ ನಲ್ಲಿ ಮಂಗಳವಾರ ರೂಪೇಶ್ ಶೆಟ್ಟಿ ನೇತೃತ್ವದಲ್ಲಿ 100 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಣೆ ನಡೆಸಿ ಮಾತನಾಡಿದರು.
ತೊಕ್ಕೊಟ್ಟು ಭಾಗದಲ್ಲಿ ಅಶಕ್ತರಿಗೆ ನೆರವಾಗುವ ಸಲುವಾಗಿ ನಟ ರೂಪೇಶ್ ಶೆಟ್ಟಿ ಅವರನ್ನು ಕೇಳಿಕೊಂಡಾಗ ಉತ್ತಮವಾಗಿ ಸ್ಪಂಧಿಸಿ ಆಹಾರ ಕಿಟ್ ಗಳನ್ನು ಶಿವಾಜಿ ಫ್ರೆಂಡ್ಸ್ ಮೂಲಕ ನೀಡಿದ್ದಾರೆ ಎಂದರು.
ನಟ ರೂಪೇಶ್ ಶೆಟ್ಟಿ ಮಾತನಾಡಿ , ಈವರೆಗೆ ಜಿಲ್ಲೆಯಾದ್ಯಂತ 3,000 ಕಿಟ್ ವಿತರಿಸಲಾಗಿದೆ. ಗಿರಗಿಟ್ ಚಲನಚಿತ್ರಕ್ಕೆ ಜಿಲ್ಲೆಯ ಜನ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಇದರಿಂದ ಚಲನಚಿತ್ರದ ತಂಡದ ಮೇಲೆ ಜವಾಬ್ದಾರಿಯಿದೆ ಅನ್ನುವುದನ್ನು ಅರಿತುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ . ಮುಂದರೆಯೂ 1,000ಕ್ಕಿಂತ ಅಧಿಕ ಕಿಟ್ ನೀಡಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿ ಚಂದ್ರಹಾಸ್ ಶೆಟ್ಟಿ, ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಸದಾನಂದ ಒಂಭತ್ತುಕೆರೆ, ಸಂತ ಸಎಬೆಸ್ತಿಯನ್ನರ ಚರ್ಚಿನ ಶತಮಾನೋತ್ಸವ ಸಮಿತಿ ಸಂಚಾಲಕ ಡೆಮಿಟ್ರಿಯಸ್ ಡಿಸೋಜ, ಕ್ಲಬ್ ನ ಗೌರವಾಧ್ಯಕ್ಷ ಹಮೀದ್, ಸದಸ್ಯ ಚಂದ್ರಶೇಖರ್ ಉಪಸ್ಥಿತರಿದ್ದರು.
ರವಿ ಪೂಜಾರಿ ಭಟ್ನಗರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಕಲಾ ಕ್ಷೇತ್ರದಲ್ಲಿ ಸಾಧನೆಗೈದು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಚಲನಚಿತ್ರ ನಟ ರೂಪೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

Exit mobile version