
ಉಳ್ಳಾಲ: ಊರವರ ಬೇಡಿಕೆಗೆ ಅನುಸಾರವಾಗಿ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಂಚಾಯಿತಿನಿಂದ ಬರುವ ಯೋಜನೆಯಿಂದ ಕುಡಿಯುವ ನೀರಿನ ಯೋಜನೆ ಮುಂದಿನ ದಿನಗಳಲ್ಲಿ ಆಗಲಿದೆ. ಯಾತ್ರಿ ನಿವಾಸ ಕಾಮಗಾರಿ ಸಂದರ್ಭ ಸ್ಥಳೀಯರ ಸಹಕಾರ ಅಗತ್ಯ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಮಂಜನಾಡಿ ಜಮಾಅತಿನ ಮಸೀದಿ ವಠಾರದಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಡಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸದ ಶೌಚಾಲಯಕ್ಕೆ ಶನಿವಾರ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಮಂಜನಾಡಿ ಗ್ರಾಮ ಹಂತಹಂತವಾಗಿ ಅಭಿವೃದ್ಧಿಯಾಗುತ್ತಿದೆ. ಮಂಜನಾಡಿ ಮಸೀದಿಯೂ ಪ್ರದೇಶದ ಕೇಂದ್ರಬಿಂದುವಿನಲ್ಲಿರುವುದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶನಕ್ಕೆ ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಯಾತ್ರಿ ನಿವಾಸದ ಕಾಮಗಾರಿ ಆರಂಭವಾಗಲಿದೆ. ಅದಕ್ಕೆ ಪೂರಕವಾಗಿ ಶೌಚಾಲಯದ ನಿರ್ಮಾಣವೂ ಶೀಘ್ರವೇ ಆಗಲಿದೆ. ಈಗಾಗಲೇ ಕಂಪೌಂಡ್ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದೆ. ಗ್ರಾಮದ ಅಭಿವೃದ್ಧಿಗೆ ಹಚ್ಚಿನ ಗಮನ ಹರಿಸಲಾಗಿದೆ. ಹಂತಹಂತವಾಗಿ ನಡೆಸಲಾಗುವುದು ಎಂದರು.ಮಂಜನಾಡಿ ಮಸೀದಿಯ ಉಸ್ತಾದ್ ಅಹಮ್ಮದ್ ಬಾಖವಿ ದುಆ ನೆರವೇರಿಸಿದರು.ಮಂಜನಾಡಿ ಜಮಾಅತ್ ಅಧ್ಯಕ್ಷ ಮೈಸೂರ್ ಬಾವಾ , ಕಾರ್ಯದರ್ಶಿ ಅಝೀಜ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಎನ್. ಎಸ್ ಕರೀಂ , ಕೋಶಾಧಿಕಾರಿ ನೆಕ್ಕರೆ ಬಾವ, ಮಂಜನಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಅಸೈ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಂಜನಾಡಿ ಮಸೀದಿ ಅಭಿವೃದ್ಧಿಗೆ ಶ್ರಮಿಸಿದ ಶಾಸಕ ಯು.ಟಿ ಖಾದರ್ ಅವರನ್ನು ಮಸೀದಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.