
ಉಳ್ಳಾಲ: ಯುವತಿಯೋರ್ವಳು ನೇಣುಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿರುವ ಘಟನೆ ಕುಂಪಲ ಆಶ್ರಯಕಾಲನಿಯಲ್ಲಿ ನಡೆದಿದೆ.
ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(20) ಶವವಾಗಿ ಪತ್ತೆಯಾದಾಕೆ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ಈಕೆ ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು. ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದು, ಪ್ರೇಕ್ಷಾ ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ ವೇಳೆ ತಾಯಿ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಮನೆಯೊಳಗಿನ ಕೋಣೆಯೊಳಗೆ ಪ್ರೇಕ್ಷಾ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಕೊಲೆಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಪ್ರೇಕ್ಷಾ ನಿಗೂಢ ಸಾವು ಪ್ರಕರಣ
ಗಾಂಜಾ ತಂಡದಿಂದ ಆರೋಪಿಸಿದ ವ್ಯಕ್ತಿ ಮನೆಗೆ ಕಲ್ಲು, ಹಲವರು ಪೊಲೀಸ್ ವಶಕ್ಕೆ
ಉಳ್ಳಾಲ: ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ(17) ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಗಾಂಜಾ ವ್ಯಸನಿಗಳ ಮೇಲೆ ಆರೋಪಿಸಿರುವ ಮೋಹನ್ ಶೆಟ್ಟಿ ಎಂಬವರ ಮನೆಗೆ ಗುರುವಾರ ತಡರಾತ್ರಿ ದುಷ್ಕರ್ಮಿಗಳು ಕಿಟಕಿ ಗಾಜುಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು 13 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 11 ಮಂದಿ ಗಾಂಜಾ ಸೇವಿಸಿರುವ ವರದಿ ಪಾಸಿಟಿವ್ ಆಗಿದೆ.
ಶುಕ್ರವಾರ ಮನೆಯಲ್ಲಿ ಮೋಹನ್ ಮತ್ತು ಪತ್ನಿ ಇಬ್ಬರೇ ಇದ್ದ ಸಂದರ್ಭ 12ರ ವೇಳೆಗೆ ಮನೆಯ ಕಿಟಕಿ ಗಾಜಿಗೆ ಕಲ್ಲೆಸೆಯಲಾಗಿದೆ. ಗಾಜು ಒಡೆದು ಕಲ್ಲು ಮನೆಯೊಳಕ್ಕೆ ಬಿದ್ದಿದೆ. ಪ್ರೇಕ್ಷಾ ಸಾವು ಸಂಭವಿಸಿದ ಸಂದರ್ಭ ಮೋಹನ್ ಶೆಟ್ಟಿ ಗಾಂಜಾ ವ್ಯಸನಿಗಳ ಕೃತ್ಯ ಎಂದು ಆರೋಪಿಸಿದ್ದರು. ಅಲ್ಲದೆ ಪ್ರೇಕ್ಷಾ ಮನೆಗೆ ಬಂದಿದ್ದ ಮೂವರು ಯುವಕರ ಕುರಿತು ಹೇಳಿರುವ ಸ್ಥಳೀಯ ಅಂಗಡಿ ಮಾಲೀಕರಿಗೂ ಗಾಂಜಾ ಗ್ಯಾಂಗ್ ಜೀವಬೆದರಿಕೆಯೊಡ್ಡಿದೆ.
ಸಚಿವ ಅಂಗಾರ ಭೇಟಿ : ವಿದ್ಯಾರ್ಥಿನಿ ಪ್ರೇಕ್ಷಾ ಮನೆಗೆ ಶುಕ್ರವಾರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಭೇಟಿ ನೀಡಿದರು. ಪ್ರೇಕ್ಷಾಳ ಹೆತ್ತವರನ್ನು ಸಮಾಧಾನಿಸಿದ ಸಚಿವರು, ಪ್ರಕರಣದ ಹಿಂದೆ ಇರುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಕಮೀಷನರ್ ಅವರಲ್ಲಿ ಆಗ್ರಹಿಸುತ್ತೇನೆ. ಯಾವ ಗಾಂಜಾದವರಿಗೂ ಹೆದರಬೇಕಾದ ಅವಶ್ಯಕತೆಯಿಲ್ಲ. ಪ್ರಸ್ತುತ ಕಾನೂನು ಕಠಿಣವಾಗಿರುವುದರಿಂದ ಚಿಂತಿಸದಿರಿ ಎಂದರು.
ಗಾಂಜಾ ವ್ಯಸನಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ : ಪ್ರೇಕ್ಷಾ ತಂದೆ ಚಿತ್ತಪ್ರಸಾದ್
ಮಗಳ ಅಂತಿಮ ಸಂಸ್ಕಾರದ ಸಂದರ್ಭದಲ್ಲೂ ಗಾಂಜಾ ಗ್ಯಾಂಗ್ ಬೆದರಿಕೆಯನ್ನೊಡ್ಡಿತ್ತು. ಗಾಂಜಾ ವ್ಯಸನಿಗಳ ಕುರಿತು ಮಾತನಾಡದಂತೆ ಎಚ್ಚರಿಕೆಯನ್ನು ನೀಡಿದೆ. ಬಳಿಕ ಅಂಗಡಿಯವರಿಗೆ, ಸ್ಥಳೀಯರಿಗೆ ಜೀವಬೆದರಿಕೆಯನ್ನು ಒಡ್ಡಿದೆ. ಅವರಿಗೆ ಇಷ್ಟು ಕಿರುಕುಳ ನೀಡಿದವರು ಮಗಳಿಗೆ ಎಷ್ಟು ಕಿರುಕುಳ ನೀಡಿರಬಹುದು?. ಅವರ ಮಾನಸಿಕ ಕಿರುಕುಳದಿಂದಲೇ ಬೇಸತ್ತು ಪ್ರೇಕ್ಷಾ ಸಾವನ್ನಪ್ಪಿದ್ದಾಳೆ ಎಂದು ಚಿತ್ತಪ್ರಸಾದ್ ಸಚಿವ ಅಂಗಾರರವರಲ್ಲಿ ತಿಳಿಸಿದರು.
ಬೆಳಿಗ್ಗೆ ಕರೆ ಮಾಡಿದ್ದಳು : ಪ್ರೇಕ್ಷಾ ಬೆಂಗಳೂರಿನಲ್ಲಿ ನಡೆಯುವ ಫೋಟೋ ಶೂಟ್ ನಿಂದ ಭವಿಷ್ಯವಿದೆ. ಪರಿಚಿತ ಯುವಕನೇ ಕರೆದುಕೊಂಡು ಹೋಗುವ ಭರವಸೆ ನೀಡಿದ ಕಾರಣಕ್ಕೆ ಬೆಂಗಳೂರಿಗೆ ತೆರಳಲು ಹೇಳಿದ್ದೆವು. ಅದಕ್ಕಾಗಿ ಸಾವನ್ನಪ್ಪುವ ಹಿಂದಿನ ದಿನ ಬ್ಯೂಟಿಪಾರ್ಲರ್ ಹೋಗಿ ಫೇಷಿಯಲ್ ಕೂಡಾ ಮಾಡಿಸಿದ್ದಳು. ಆದರೆ ಈ ನಡುವೆ ಗಾಂಜಾ ವ್ಯಸನಿ ಗೆಳೆಯ ಯತೀನ್ ರಾಜ್ ಬೆಂಗಳೂರು ತೆರಳದಂತೆ ಬೆದರಿಕೆ ಒಡ್ಡಿರುವ ಕುರಿತು ಪ್ರೇಕ್ಷಾ ಸಹೋದರಿಯಲ್ಲಿ ತಿಳಿಸಿದ್ದಳು. ವಿಚಾರ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆತ್ಮಹತ್ಯೆ ನಡೆಸಿದ ದಿನದಂದು ಬೆಳಿಗ್ಗೆ 10.30ಕ್ಕೆ ತಂದೆಗೆ ಕರೆ ಮಾಡಿರುವ ಪ್ರೇಕ್ಷಾ ಮಧ್ಯಾಹ್ನ ಹೊರಡುವುದಾಗಿಯೂ ತಿಳಿಸಿದ್ದಳು. ಆ ಬಳಿಕ ನಡೆದ ಘಟನೆಯೇ ಬೇರೆಯಾಗಿದೆ. ಪ್ರೇಕ್ಷಾ ಆತ್ಮಹತ್ಯೆ ನಡೆಸುವ ವಿಚಾರವನ್ನು ಬೆದರಿಕೆ ಒಡ್ಡಿದವರಿಗೆ ಹೇಳಿರುತ್ತಾಳೆ. ಅವರು ಮನೆ ಸಮೀಪದ ಮಹಿಳೆಯೊಬ್ಬರಿಗೆ ಸೂಚನೆಯನ್ನು ನೀಡಿದ್ದರು. ಮಹಿಳೆ ಮನೆಗೆ ಬಂದು ಬಾಗಿಲು ಬಡಿದಾಗ ತೆಗೆದಿರಲಿಲ್ಲ. ಬಳಿಕ ಬೆದರಿಕೆಯೊಡ್ಡಿದ ತಂಡವೇ ಹಿಂಬಾಗಿಲನ್ನು ಮುರಿದು ಒಳನುಗ್ಗಿದಾಗ ಪ್ರೇಕ್ಷಾ ನೇತಾಡುವುದನ್ನು ಕಂಡು ವಾಪಸ್ಸಾಗಿದ್ದರು. ಪ್ರೇಕ್ಷಾ ಆತ್ಮಹತ್ಯೆ ನಡೆಸುವಾಗಲೂ ರ್ಯಾಕ್ ನಲ್ಲಿ ಮೊಬೈಲ್ ಇಟ್ಟಿದ್ದು, ಅದರಲ್ಲಿ ಸಾಯುವ ಮುನ್ನ ವೀಡಿಯೋ ಮಾಡಿರುವ ಸಾಧ್ಯತೆಗಳೂ ಇವೆ ಎಂದು ಚಿತ್ತಪ್ರಸಾದ್ ಸಚಿವರಲ್ಲಿ ತಿಳಿಸಿದ್ದಾರೆ.
ತನ್ನ ಮೇಲೂ ಅಟ್ಯಾಕ್ ಆಗಿತ್ತು : ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ
ಈ ಹಿಂದೆ ಗಾಂಜಾ ತಂಡ ತನ್ನ ಮೇಲೆಯೂ ಗಂಭೀರವಾಗಿ ದಾಳಿ ನಡೆಸಿತ್ತು. ಆದರೆ ಎಲ್ಲಿಯೂ ಅದನ್ನು ಪ್ರಚಾರ ಮಾಡಿರಲಿಲ್ಲ. ಈ ಭಾಗದಲ್ಲಿ ಇಂತಹ ದುಷ್ಕøತ್ಯಗಳು ಮುಂದುವರಿಯುತ್ತಲೇ ಇದೆ. ಆಶ್ರಯಕಾಲನಿ ನಿವಾಸಿಗಳು ಎಲ್ಲರೂ ಒಳ್ಳೆಯವರು. ಹೊರಗಿನಿಂದ ಬರುವ ಬೆರಳೆಣಿಕೆ ಮಂದಿ ಇಲ್ಲಿ ದುಷ್ಕøತ್ಯ ಎಸಗಿ, ಮನೆಯವರ ಮರ್ಯಾದೆಯನ್ನು ಬಲಿ ಪಡೆದಯುವುದರ ಜೊತೆಗೆ ಊರಿನ ಮರ್ಯಾದೆ ಹರಣ ಮಾಡುತ್ತಿದ್ದಾರೆ. ರಾಜಕೀಯ ರಹಿತವಾಗಿ ಎಲ್ಲರೂ ಗಂಭೀರ ಸಮಸ್ಯೆ ವಿರುದ್ಧ ಹೋರಾಡಬೇಕಿದೆ ಎಂದರು.
ಮನೆಗೆ ಕಲ್ಲೆಸೆದ ಘಟನೆಯ ಬಳಿಕ ಸುಮಾರು 13 ಮಂದಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ 11 ಮಂದಿಯ ಗಾಂಜಾ ವರದಿ ಪಾಸಿಟಿವ್ ಆಗಿದೆ. ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ಪೈಕಿ ಪ್ರಮುಖ ಗಾಂಜಾ ಸಾಗಾಟಗಾರ ತಲೆಮರೆಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದೆ
ಪ್ರೇಕ್ಷಾ ಪ್ರಕರಣ , ಗೆಳೆಯನ ಬಂಧನ : ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಗೆಳೆಯ ಮುಂಡೋಳಿ ನಿವಾಸಿ ಯತೀನ್ ರಾಜ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಹಿನ್ನೆಲೆಯಲ್ಲಿ ಸೆಕ್ಷನ್ 306ರ ಅಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಗಾಂಜಾ ಗ್ಯಾಂಗ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು ಶನಿವಾರವೂ ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮಾ.10 ರಂದು ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ(17) ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರಕರಣ ನಿಗೂಢತೆ ಸೃಷ್ಟಿಸಿದ್ದು, ಗೆಳೆಯ ಗಾಂಜಾ ವ್ಯಸನಿ ನೇತೃತ್ವದ ತಂಡದಿಂದಲೇ ಕೊಲೆ ನಡೆದಿದೆ ಅನ್ನುವ ಆರೋಪ ಸ್ಥಳೀಯರಿಂದ ವ್ಯಕ್ತವಾಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರೇಕ್ಷಾಳ ಗೆಳೆಯ ಯತೀನ್ ರಾಜ್ ಸೇರಿದಂತೆ ನೆರೆಮನೆಯ ಇತರೆ ಇಬ್ಬರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ನಡೆಸಿದ ಪೊಲೀಸರು ಪ್ರೇಕ್ಷಾ ಳ ಮೊಬೈಲಿನಲ್ಲಿ ಸಿಕ್ಕಿರುವ ಸಾಕ್ಷ್ಯಗಳ ಆಧಾರದಲ್ಲಿ ಯತೀನ್ ರಾಜ್ ವಿರುದ್ಧ ಆತ್ಮಹತ್ಯೆ ಪ್ರಚೋದನೆ ನೀಡಿರುವ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಶಾಸಕ ಖಾದರ್ ಭೇಟಿ : ಶಾಸಕ ಯು.ಟಿ.ಖಾದರ್ ಪ್ರೇಕ್ಷಾಳ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವಾನ ಹೇಳಿ ಘಟನೆಯ ಕುರಿತು ಸೂಕ್ತ ತನಿಖೆಯಾಗಬೇಕು ಮತ್ತು ಇಲ್ಲಿನ ಗಾಂಜಾ ವಿಚಾರದಲ್ಲಿ ಸ್ಥಳೀಯರು ದೂರು ನೀಡಲು ಹಿಂಜರಿಯುತ್ತಿದ್ದು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಕಾಲನಿ ನಿವಾಸಿಗಳ ಜೊತೆ ಸಂವಾದ ನಡೆಸಿ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು ಈ ನಿಟ್ಟಿನಲ್ಲಿ ಕಮಿಷನರ್ ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ಜಾಗೃತಿ ಜಾಥಾ : ಕುಂಪಲ ಆಶ್ರಯ ಕಾಲನಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರಲ್ಲಿ ಗಾಗೃಇ ಮೂಡಿಸುವ ನಿಟ್ಟಿನಲ್ಲಿ ಆಶ್ರಯ ಕಾಲನಿಯಿಂದ ಕುಂಪಲ ಶಾಲೆಯವರೆಗೆ ಮಾ. 14ರಂದು ಬೆಳಗ್ಗೆ 7 ಗಂಟೆಗೆ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಪ್ರೇಕ್ಷಾ ಸಾವು ಪ್ರಕರಣ
ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ : ಉಳ್ಳಾಲ: ಪ್ರೇಕ್ಷಾ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ ಆಕೆಯ ಗೆಳೆಯ ಯತೀನ್ ರಾಜ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮಾ. 10 ರಂದು ಕುಂಪಲ ಆಶ್ರಯಕಾಲನಿ ನಿವಾಸಿ ಪ್ರೇಕ್ಷಾ(17) ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೆತ್ತವರು ಹಾಗೂ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿ ಗಾಂಜಾ ಗ್ಯಾಂಗ್ ಕೃತ್ಯ ಶಂಕಿಸಿದ್ದರು. ಅದರಂತೆ ಉಳ್ಳಾಲ ಪೊಲೀಸರು ಪ್ರೇಕ್ಷಾ ಆತ್ಮಹತ್ಯೆ ಸಂದರ್ಭ ಮನೆಗೆ ಬಂದಿದ್ದ ಗೆಳೆಯ ಸಹಿತ ಮೂವರು ಯುವಕರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ಕೈಗೊಂಡಿದ್ದರು. ಪ್ರಕರಣದಲ್ಲಿ ಸಿಕ್ಕ ಸಾಕ್ಷಿಯಂತೆ ಗೆಳೆಯ ಯತೀನ್ ರಾಜ್ ನನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ಬಿಡುಗಡೆ ಗೊಳಿಸಲಾಗಿದೆ. ಮಾಡೆಲಿಂಗ್ ಶೂಟ್ ಗೆ ಬೆಂಗಳೂರಿಗೆ ತೆರಳುವುದನ್ನು ಗೆಳೆಯ ಯತೀನ್ ವಿರೋಧಿಸಿದ ಹಿನ್ನೆಲೆಯಲ್ಲಿ ಪ್ರೇಕ್ಷಾ ಆತ್ಮಹತ್ಯೆ ನಡೆಸಿದ್ದಾಳೆ ಎಂಬ ವಿಚಾರ ಪೊಲೀಸರಿಂದ ತಿಳಿದುಬಂದಿದೆ. ಆಶ್ರಯಕಾಲನಿಯಲ್ಲಿ ಗಾಂಜಾ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಾಂಜಾ ಸೇವಿಸುವ ಮತ್ತೆ 15 ಮಂದಿಯ ಪಟ್ಟಿ ತಯಾರಿಸಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.