ಉಳ್ಳಾಲ : ಆಶ್ರಮ ಶಾಲೆಗೆ ದಾನದ ಹಣ ನೀಡಲು ತೆರಳಿದ್ದ ಗರ್ಭಿಣಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುವಿನಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಸೋಮೇಶ್ವರ ಒಂಭತ್ತುಕೆರೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ಹಿನಾಝ್ (25) ನಾಪತ್ತೆಯಾದವರು. ವಿದೇಶದಲ್ಲಿರುವ ಪತಿಯ ಜತೆಗೆ ನೆಲೆಸಿದ್ದ ಹಿನಾಝ್ ವಾರಗಳ ಹಿಂದೆ ಮನೆಗೆ ಬಂದಿದ್ದರು. ಮಾ.2 ರ ಮಧ್ಯಾಹ್ನ 12ರ ಹೊತ್ತಿಗೆ ಕಲ್ಲಾಪು ಒಳರಸ್ತೆಯಲ್ಲಿರುವ ಆಶ್ರಮ ಸಹಿತ ಶಾಲೆಗೆ ತಾನು ಹರಕೆ ಹೊತ್ತಿದ್ದ ನಗದು ನೀಡಲೆಂದು ಹಿನಾಝ್ ಮನೆಯಿಂದ ಹೊರಟಿದ್ದರು. ಒಂಭತ್ತುಕೆರೆಯಿಂದ ಬಸ್ ಮೂಲಕ ಬಂದಿದ್ದ ಅವರು ಕಲ್ಲಾಪು ಬಳಿ ಇಳಿದು ರಿಕ್ಷಾದಲ್ಲಿ ತೆರಳಿರುವವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಹಿನಾಝ್ ಅವರಿಗೆ ಒಂದರ ಹರೆಯದ ಮಗುವೊಂದಿದ್ದು, ಇದೀಗ ತುಂಬು ಗರ್ಭಿಣಿಯಾಗಿದ್ದಾರೆ. ರಿಕ್ಷಾದಲ್ಲಿ ತೆರಳಿರುವ ಅವರು ಶಾಲೆಗೂ ತೆರಳದೆ ನಾಪತ್ತೆಯಾಗಿರುವ ಕುರಿತು ಮನೆಮಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಹಿನಾಝ್ ಅವರಲ್ಲಿ ರೂ.7,000 ನಗದು ಮತ್ತು ಚಿನ್ನದ ಆಭರಣಗಳನ್ನು ಧರಿಸಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇಬ್ರಾಹಿಂ ನೀಡಿರುವ ದೂರಿನ ಆಧಾರದಂತೆ ಪ್ರಕರಣ ದಾಖಲಾಗಿದೆ.