UN NETWORKS
ಉಳ್ಳಾಲ : ನಾವು ಪ್ರಕೃತಿ ಮತ್ತು ಸಂಸ್ಕೃತಿಗೆ ಹತ್ತಿರವಾಗ ಬೇಕಿದೆ. ಪ್ರಕೃತಿಯಿಂದ ದೂರ ಸರಿದಿರುವುದೇ ಇಂದಿನ ಸಮಸ್ಯೆಗಳಿಗೆ ಕಾರಣವಾಗಿದೆ., ಘನತ್ಯಾಜ್ಯ ಮತ್ತು ಸ್ವಚ್ಚತೆಗೆ ಆದ್ಯತೆ ನೀಡುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಉಚ್ಚಿಲ ಬೋವಿ ಸಂಸ್ಥೆಗಳ ಶತಮಾನೋತ್ಸವ ಆಚರಣೆಯ ಸರಣಿ ಕಾರ್ಯಕ್ರಮವಾಗಿ ಜಿಲ್ಲಾಡಳಿತ, ಮಾತಾ ಅಮೃತಾನಂದಮಯಿ ಮಠ ,ಸೋಮೇಶ್ವರ ಪಟ್ಟಣ ಪಂಚಾಯತ್, ಎಂ.ಆರ್.ಪಿ.ಎಲ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೋಮೇಶ್ವರ ಉಚ್ಚಿಲ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪರಿಸರದಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಸ್ವಚ್ಚತಾ ಕಾರ್ಯ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಡೆಂಗ್ಯೂ ಹಾಗೂ ಸ್ವಚ್ಚತೆ ಬಗ್ಗೆ ಮುದ್ರಿಸಲಾದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಮುಖ್ಯಸ್ಥೆ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಭಾಗವಹಿಸಿ ಆಶೀರ್ವಚನ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್.ಯಡಪಡಿತ್ತಾಯ ಬೃಹತ್ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ ಕಂಡ ಕಂಡಲ್ಲಿ ಉಗುಳುವ ಪ್ರವೃತ್ತಿ ನಿಲ್ಲಬೇಕು, ಮಾತಾ ಅಮೃತಾನಂದಮಯಿ ದೇವಿಯವರ ಅಮಲ ಭಾರತ ಯೋಜನೆ ಹಾಗೂ ಸ್ವತಃ ಅಮ್ಮನವರೇ ಸ್ವಚ್ಚತಾ ಸೇವೆಯಲ್ಲಿ ಭಾಗವಹಿಸಿ ಇತರರಿಗೂ ಸ್ಪೂರ್ತಿ ತುಂಬುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಸರ ರಕ್ಷಣಾ ಕಾರ್ಯಮಾಡುತ್ತಿರುವ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.
ಅಮಲ ಭಾರತ ಅಭಿಯಾನದ ಅಧ್ಯಕ್ಷ ಡಾ| ಜೀವರಾಜ್ ಸೊರಕೆ ಮಾತನಾಡಿ ಕಳೆದ 9 ವರ್ಷಗಳ ಸ್ವಚ್ಚತಾ ಸೇವೆಯ ಅನುಭವ,ಅದರ ಉದ್ದೇಶ ಹಾಗೂ ಸಫಲತೆಯ ಬಗ್ಗೆ ತಿಳಿಸಿ ಇಂದು ಎಲ್ಲೆಡೆಯೂ ಸ್ವಚ್ಛ ಭಾರತದ ಬಗ್ಗೆ ಜನರು ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮುಖ್ಯ ಅತಿಥಿಗಳಾಗಿ ಸಿ. ಎ. ವಾಮನ್ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಮನ್ವಯಾಧಿಕಾರಿ ಪ್ರೊ| ವಿನೀತ ರೈ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಗಣಪತಿ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಮಹೇಶ್ ಬೊಂಡಾಲ, ಬೋವಿ ಮಹಾಸಭಾ ಅಧ್ಯಕ್ಷ ಚಿದಾನಂದ ಉಚ್ಚಿಲ್, ಬೋವಿ ವಿದ್ಯಾ ಸಂಸ್ಥೆಗಳ ಸಂಚಾಲಕ ದೇವದಾಸ್ ಟಿ. ಉಚ್ಚಿಲ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ ಉಪಸ್ಥಿತರಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಎನ್.ಜಿ.ಮೋಹನ್ ಸ್ವಾಗತಿಸಿದರು. ಶತಮಾನೋತ್ಸವ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪ್ರವೀಣ್ ಬಸ್ತಿ ವಂದಿಸಿದರು. ಡಾ|ದೇವದಾಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಈ ಸ್ವಚ್ಚತಾ ಆಂದೋಲನದಲ್ಲಿ ಅಮಲ ಭಾರತ ಅಭಿಯಾನ-ಸ್ವಚ್ಛತಾ ಜನ ಜಾಗರಣ ಯಜ್ಞ, ಮಾತಾ ಅಮೃತಾನಂದಮಯಿ ಮಠ ಮಂಗಳೂರು, ಬೋವಿ ವಿದ್ಯಾ ಸಂಸ್ಥೆಗಳ ಪದಾಧಿಕಾರಿಗಳು, ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಸೈಂಟ್ ಅಲೋಶಿಯಸ್ ಕಾಲೇಜು, ಸೈಂಟ್ ಆಗ್ನೆಸ್ ಕಾಲೇಜು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ, ಕೆನರಾ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಕೋಣಾಜೆಯ ವಿದ್ಯಾರ್ಥಿಗಳು,ಆನಂದಾಶ್ರಮ ಪ್ರೌಢಶಾಲೆ, ಪರಿಜ್ಞಾನ ಪಿ.ಯು.ಕಾಲೇಜು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸ್ಥಳೀಯ ವಿದ್ಯಾರ್ಥಿಗಳು, ಕೋಟೆ ಬಳಿಯ ಪೊನ್ನಂಬಲವಾಸ ಅಯ್ಯಪ್ಪ ಭಜನಾ ಮಂಡಳಿ, ಉಚ್ಚಿಲದ. ಓಂಕಾರ್ ಫ್ರೆಂಡ್ಸ್, ಮುಬಾರಕ್ ವೆಲ್ಪೇರ್ ಅಸೋಸಿಯೇಶನ್, ಸ್ನೇಹ ಸಂಗಮ, ಕೋಟೆಬಳಿ ಫ್ರೆಂಡ್ಸ್, ಸೋಮೇಶ್ವರದ ಶ್ರೀ ರಕ್ತೇಶ್ವರಿ ಬಳಗ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರೋಹಿತಾಕ್ಷ, ಅಮಲ ಭಾರತ ಅಭಿಯಾನದ ಪ್ರಧಾನ ಸಮನ್ವಯಾಧಿಕಾರಿ ಸುರೇಶ್ ಅಮಿನ್, ಕೃಷ್ಣ ಶೆಟ್ಟಿ, ಮೋಹನ್ ಬಂಗೇರ, ರವಿ ಉಚ್ಚಿಲ್, ಮಾಧವ ಸುವರ್ಣ, ಚಂದ್ರಹಾಸ್ ಸುವರ್ಣ, ಪ್ರಕಾಶ್ ಠಕ್ಕರ್, ಪ್ರಕಾಶ್ ಕರ್ಕೇರ, ಸಿ.ಎ.ರಾಮ್ನಾಥ್ ಮತ್ತಿತರರು ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸೇರಿ 500ಕ್ಕೂ ಅ„ಕ ಮಂದಿ ಸೋಮೇಶ್ವರ ಉಚ್ಚಿಲ ಪರಿಸರ ಹೆದ್ದಾರಿ, ಒಳರಸ್ತೆ ಬದಿ ಮತ್ತು ಸಮುದ್ರ ತೀರದಲ್ಲಿ ಹಲವು ತಂಡಗಳಲ್ಲಿ ಸೇವೆ ಸಲ್ಲಿಸಿದರು. ಅಧಿಕ ಪ್ರಮಾಣದ ತ್ಯಾಜ್ಯವನ್ನು ಸಂಗ್ರಹಿಸಿದರು ಹಾಗೂ 6 ಟ್ರಕ್ ಗಳಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಕಳುಹಿಸಲಾಯಿತು. ಸ್ಥಳೀಯರ ಮನೆಮನೆಗಳಿಗೆ ತೆರಳಿ ಸ್ವಚ್ಚತಾ ಜನಜಾಗೃತಿ ಮೂಡಿಸುವ ಸಲುವಾಗಿ ಮುದ್ರಿತ ಕರಪತ್ರಗಳನ್ನು ಹಂಚಲಾಯಿತು,ಸ್ವಚ್ಚ ಪರಿಸರ ಕಾಪಾಡಲು ವಿನಂತಿಸಲಾಯಿತು.