Site icon Ullalavani

ಶಿಕ್ಷಕ ವೃತ್ತಿ ಅಮೂಲ್ಯವಾದದ್ದು, ಶಿಕ್ಷಕರ ಲೇವಡಿ ಸಲ್ಲ : ಪ್ರೊ.ಹಂಪ ನಾಗರಾಜಯ್ಯ

UN NETWORKS

ಕೊಣಾಜೆ : ಶಿಕ್ಷಕ ವೃತ್ತಿ ಅಮೂಲ್ಯವಾದ್ದಾಗಿದೆ. ಅದೆಷ್ಟೋ ಜನರನ್ನು ಅಕ್ಷರಲೋಕಕ್ಕೆ ಅಥವಾ ಬೆಳಕಿನ ಲೋಕಕ್ಕೆ ಕೊಂಡೊಯ್ದು ಬದುಕನ್ನು ರೂಪಿಸುವ ಶಿಕ್ಷಕರ ಬಗ್ಗೆ ಇಂದು ದಾರಾವಾಹಿ, ಸಿನಿಮಾಗಳಲ್ಲಿ ಲೇವಡಿ ಮಾಡುವಂತಹದನ್ನು ಕಾಣುತ್ತಿದ್ದು ಇದು ಸಲ್ಲ. ಶಿಕ್ಷಕರನ್ನು ಅಪಮಾನ ಮಾಡದೆ ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳೋಣ ಎಂದು ಸಾಹಿತಿ ನಾಡೋಜ ಪ್ರೊ.ಹಂಪನಾಗರಾಜಯ್ಯ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗುರು-ಶಿಷ್ಯ ಸಂಬಂಧಗಳು ಯಾವತ್ತಿಗೂ ಸಿಹಿಯಾಗಿರಬೇಕು. ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ಎಂದಿಗೂ ಮರೆಯದೆ ಕೃತಜ್ಞರಾಗಿರಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಅದ್ಯಾಪಕನಿಗೆ ಬಹಳಷ್ಟು ಸವಾಲುಗಳು ಎದುರಾಗುತ್ತಿರುವುದನ್ನೂ ನಾವು ಗಮನಿಸಬೇಕು ಎಂದು ಹೇಳಿದರು. ನಮ್ಮಲ್ಲಿ ವಿವೇಕ ಎಂಬುದು ಅಗತ್ಯವಾಗಿ ಇರಬೇಕಿದೆ. ವಿವೇಕ ಇಲ್ಲದಿದ್ದರೆ ವಿದ್ಯೆ ಇದ್ದರೂ ಪ್ರಯೋಜನವಿಲ್ಲ. ಆದ್ದರಿಂದ ನಮ್ಮ ಜೀವನದಲ್ಲಿ ಜ್ಞಾನ ದೀಪವನ್ನು ಬೆಳಗಿಸಿ ಬದುಕನ್ನು ರೂಪಿಸುವ ಶಿಕ್ಷಕರನ್ನು ಗೌರವಿಸಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ಅರಿತುಕೊಂಡು ಈ ಪರಂಪರೆಯನ್ನು ಮುಂದುವರಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಶಿಕ್ಷಕ ವೃತ್ತಿಗೆ ನಿವೃತ್ತಿ ಎಂಬುದಿಲ್ಲ.ಅವರು ಬದುಕಿನುದ್ದಕ್ಕೂ ಶಿಕ್ಷಕರೇ ಆಗಿರುತ್ತಾರೆ. ಈ ವೃತ್ತಿ ಎಲ್ಲ ವೃತ್ತಿಗಳಿಗೂ ಮಾತೃ ಸ್ಥಾನವನ್ನು ಹೊಂದಿದೆ. ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಿಗೆ ವಿದೇಶ ವಿವಿಗಳಿಗೆ ತೆರಳಲು ಬಹಳಷ್ಟು ಅವಕಾಶವಿತ್ತು ನಂತರ ಹೆಚ್ಚು ಪ್ರೋತ್ಸಾಹ ಸಿಕ್ಕಿರಲಿಲ್ಲ. ಇದೀ ಮತ್ತೆ ಇಂತಹ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಅಲ್ಲದೆ ಮಂಗಳೂರು ವಿವಿಯಲ್ಲಿ ಡೀನ್‍ಗಳ ಪಾತ್ರ ಮಹತ್ವವಾದದ್ದು.ಆದ್ದರಿಂದ ಎಲ್ಲಾ ನಿಕಾಯದ ಡೀನ್‍ಗಳಿಗೂ ಅನುಕೂಲವಾಗುವಂತೆ ಒಂದು ಡೀನ್ಸ್ ಕಚೇರಿ ಆರಂಭಿಸಲಾಗುವುದು ಎಂದು ಹೇಳಿದರು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿವಿಯ ಹಿರಿಯ ಪ್ರಾಧ್ಯಾಪಕರುಗಳಾದ ಪ್ರೊ.ಶ್ರೀಪತಿ ಕಲ್ಲೂರಾಯ, ಪ್ರೊ.ಕೆ.ವಿ.ವಿಜಯ್ ಕುಮಾರ್, ಪ್ರೊ.ಹನುಮನಾಯಕ್, ಪ್ರೊ.ಶ್ರೀಧರ್ ಅವರನ್ನು ವಿವಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಡೀನ್ ಗಳಾದ ಪ್ರೊ.ಕಿಶೋರಿ ನಾಯಕ್, ಪ್ರೊ.ಶಿವಲಿಂಗಯ್ಯ, ಪ್ರೊ.ಟಿ.ಎನ್.ಶ್ರೀಧರ್, ಪ್ರೊ.ಕಿಶೋರ್ ಕುಮಾರ್, ಡಾ,ನಾಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿ, ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರಾಚಾರಿ ವಂದಿಸಿದರು. ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಸುಮಂಗಲಿ ಪ್ರಾರ್ಥಿಸಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದರೂ ಪೇಟೆಂಟ್ ಪಡೆಯುವ ವಿಷಯದಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ. ಈ ಬಗೆಗೆ ಸಂಶೋಧನಾತ್ಮಕ ಪ್ರಾಧ್ಯಾಪಕರು ಕಾರ್ಯಪ್ರವೃತರಾಗಬೇಕು. ಎಷ್ಟು ಖರ್ಚಾದರೂ ವಿವಿ ಭರಿಸಲಿದ್ದು, ಪೇಟೆಂಟ್ ಪಡೆದವರನ್ನು ವಿವಿ ವತಿಯಿಂದ ವೈಭವಪೂರ್ವಕವಾಗಿ ಸನ್ಮಾನಿಸಲಾಗುವುದು.
ಪ್ರೊ.ಪಿ.ಎಸ್.ಯಡಪಡಿತ್ತಾಯ
ಮಂಗಳೂರು ವಿವಿ ಕುಲಪತಿ

ಶಿಕ್ಷಕರ ವೃತ್ತಿಯು ಅತ್ಯಂತ ಪವಿತ್ರವಾದದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರೊಂದಿಗೆ ಅವರ ಸರ್ವತೋಮುಖ ಬೆಳವಣಿಗೆಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು.
ಪ್ರೊ.ಶ್ರೀಪತಿ ಕಲ್ಲೂರಾಯ
ಪ್ರಾಧ್ಯಾಪಕರು

Exit mobile version