UN NETWORKS
ಮುಡಿಪು : ಇಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಿರುವವರು 1 ರಿಂದ 7 ನೇ ತರಗತಿವರೆಗಿನ ವಿದ್ಯಾರ್ಥಿಗಳು. ಯಾರೂ ಮಳೆಯಲ್ಲಿ ನಿಲ್ಲುವಂತೆ ಗದರಿಸಿಲ್ಲ, ಬದಲಾಗಿ ಸ್ವಾತಂತ್ರ್ಯ ದಿನ ಆಚರಣೆಯ ಭಾಗವಾಗಿ ತಾವೇ ಖುದ್ದು ಮಳೆಯಲ್ಲೇ ನೆನೆದು ರಾಷ್ಟ್ರಗೀತೆಗೆ ಗೌರವ ಸೂಚಿಸಿದ ರೀತಿಯಿದು.
ಇತ್ತೀಚೆಗೆ ರಾಷ್ಟ್ರಧ್ವಜವೊಂದು ರಸ್ತೆಯಲ್ಲಿ ಬಿದ್ದಿರುವುದನ್ನು ಮಕ್ಕಳು ನೋಡಿಯೂ ನೋಡದ ಹಾಗೆ ತಮ್ಮ ಪಾಲಿಗೆ ತಾವು ಸಾಗುತ್ತಿದ್ದರು. ಈ ಕುರಿತು ವೀಡಿಯೋ ಸಾಕಷ್ಟು ವೈರಲ್ ಕೂಡಾ ಆಗಿತ್ತು. ಅಲ್ಲದೆ ವಿದ್ಯಾರ್ಥಿಗಳ ದೇಶಭಕ್ತಿಯ ಕುರಿತು ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಎಬ್ಬಿತ್ತು. ಆದರೆ ಇದಕ್ಕೆ ಸವಾಲೆಂಬಂತೆ ಮುಡಿಪು ಸಮೀಪದ ಸಾಂಬಾರುತೋಟ ದ.ಕ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 25 ರಷ್ಟು ಮಕ್ಕಳು ರಾಷ್ಟ್ರಗೀತೆಯನ್ನು ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ನಿಂತು ಹಾಡಿರುವುದು ಮಕ್ಕಳ ಮನದಲ್ಲಿರುವ ದೇಶಭಕ್ತಿಯ ಜಾಗೃತಿಯಾಯಿತು.
ಪಜೀರು ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಎಸ್ ಮೂಸಾ ಹಾಜಿ ಶಾಲೆಯಲ್ಲಿ ಧ್ವಜಾರೋಹಣಗೈದರು. ಮಳೆಯಲ್ಲೇ ಧ್ವಜಾರೋಹಣಗೈದ ಅತಿಥಿಗಳ ಜತೆಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬೂಬಕರ್, ಹಸನ್ ಹಾಜಿ ಸಾಂಬಾರುತೋಟ ಭಾಗವಹಿಸಿದ್ದರು. ಧ್ವಜಾರೋಹಣದ ಬಳಿಕವೂ ಮಳೆ ನಿಲ್ಲದೇ ಇದ್ದಾಗ ಶಾಲಾ ನಾಯಕ ರಾಷ್ಟ್ರಗೀತೆಗೆ ಸೂಚಿಸಿದ್ದರು. ಅದರಂತೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶೆಹನಾಝ್ ಪರ್ವಿನ್ ಅವರು ಖುದ್ದೂ ತಾವೇ ಮಳೆಯಲ್ಲಿ ನಿಂತು ಜೋರಾಗಿ ಬೀಳುತ್ತಿದ್ದ ಮಳೆಯ ನಡುವೆಯೂ ರಾಷ್ಟ್ರಗೀತೆಯನ್ನು ಕ್ರಮಬದ್ಧವಾಗಿ ಹಾಡಿ ಮುಗಿಸಿ ಬಳಿಕ ತರಗತಿಗೆ ತೆರಳಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ. ಅತಿಥಿಗಳು ಓಡಿಹೋದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯೂ ವ್ಯಕ್ತವಾಗುತ್ತಿದೆ.
ರಾಷ್ಟ್ರಗೀತೆ ನಡೆಯುತ್ತಿರುವ ಸಂದರ್ಭ ರಾಷ್ಷ್ಟಗೀತೆಗೆ ಮರ್ಯಾದೆ ಕೊಡಬೇಕು ಎಂಬುವುದನ್ನು ನಾವು ನಮ್ಮ ಶಿಕ್ಷಕರಿಂದ ಕಲಿತ್ತಿದ್ದೇವೆ. ಅದೇ ರೀತಿ ನಮ್ಮ ಮಕ್ಕಳಿಗೂ ಕಲಿಸುತ್ತಿದ್ದೇವೆ. ಧ್ವಜಾರೋಹಣದ ಮಾಡಿ ರಾಷ್ಟ್ರಗೀತೆಯ ಸಂದರ್ಭ ಮಳೆ ಬರುತ್ತದೆ ಎಂಬ ಯಾವ ನಿರೀಕ್ಷೆಯೂ ನಮಗಿರಲಿಲ್ಲ. ಮಕ್ಕಳನ್ನು ಮಳೆಯಲ್ಲಿ ನಿಲ್ಲಿಸಿ ಕಾರ್ಯಕ್ರಮ ನಡೆಸುವ ಯಾವ ಇರಾದೆಯು ನಮಗಿರಲಿಲ್ಲ. ಮಳೆ ಬಂತು ಎಂದು ಮಕ್ಕಳು ಓಡಲಿಲ್ಲ ಬದಲಿಗೆ ರಾಷ್ಟ್ರಗೀತೆಯನ್ನು ಸಂಪೂರ್ಣವಾಗಿ ಹಾಡಿ ಮುಗಿಸಿ ರಾಷ್ಟ್ರಕ್ಕೆ ಗೌರವವನ್ನು ನೀಡಿದ್ದಾರೆ.
ಶೆಹನಾಝ್ ಫರ್ವಿನ್
ಶಾಲಾ ಮುಖ್ಯೋಪಾಧ್ಯಾಯಿನಿ