UN NETWORKS
ಪಾನೀರ್ : ಕೆಥೊಲಿಕ್ ಸಭಾ ಪಾನೀರ್ ಘಟಕ ಹಾಗೂ ದಯಾಮಾತೆ ಇಗರ್ಜಿಯ ಜಂಟಿ ಆಶ್ರಯದಲ್ಲಿ ಪಾನೀರ್ ಡೆನ್ಝಿಲ್ ಡೇಸಾ ಅವರ ಗದ್ದೆಯಲ್ಲಿ ಭಾನುವಾರ ಮಸ್ತಿ-ಕುಸ್ತಿ ಕ್ರೀಡಾಕೂಟ ನಡೆದಿದ್ದು, ಕೆಥೋಲಿಕ್ ಸಮುದಾಯ ದಿನವಿಡೀ ಗದ್ದೆಯಲ್ಲೇ ಕಳೆದರು.
ನಾಸಿಕ್ ಬ್ಯಾಂಡ್ ಜಲಕ್
ಕೆಥೋಲಿಕ್ ಸಭಾ 30ನೇ ವರ್ಷಾಚರಣೆ ಪ್ರಯುಕ್ತ ಮೂವತ್ತು ಕಾರ್ಯಕ್ರಮದಲ್ಲಿ ಒಂದಾಗಿ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅತಿಥಿಗಳನ್ನು ನಾಸಿಕ್ ಬ್ಯಾಂಡ್ ಮೆರವಣಿಗೆ ಮೂಲಕ ಕರೆ ತರಲಾಯಿತು. ಪ್ರತೀ ಪಂದ್ಯದ ಸಂದರ್ಭ ಬ್ಯಾಂಡ್ ಮೂಲಕ ಹುರಿದುಂಬಿಸಲಾಯಿತು. ಬಂದವರಿಗೆಲ್ಲರಿಗೂ ಮಾಂಸಾಹಾರಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.
ನಡೆದ ಪಂದ್ಯಾಟಗಳು
ನಿಧಿಶೋಧ, ಲಿಂಬೆ ಚಮಚ, ಓಟ, ಮೂರು ಕಾಲಿನ ಓಟ, ವಾಲಿಬಾಲ್, ಬಾಸ್ಕೆಟ್ಬಾಲ್ ಥ್ರೋ, ಹಾಡುವ ಸ್ಪರ್ಧೆ, ಮಡಕೆ ಒಡೆಯುವ ಸ್ಪರ್ಧೆ, ಹಿಂದಕ್ಕೆ ಓಡುವುದು, ಪತಿ ಪತ್ನಿಯನ್ನು ಎತ್ತಿಕೊಂಡು ಹಿಂದಕ್ಕೆ ಹೋಗುವುದು, ಹಾಳೆಯಲ್ಲಿ ಎಳೆಯುವುದು ಸಹಿತ ಇನ್ನಿತರ ಸ್ಪರ್ಧೆಗಳು ದಂಪತಿಗೆ, ಮಹಿಳೆಯರು, ಪುರುಷರಿಗೆ, ಹುಡುಗ, ಹುಡುಗಿಯರಿಗಾಗಿ ನಡೆಯಿತು.
ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯದ ಉಪನಿರ್ದೇಶಕ ಪ್ರದೀಪ್ ಡಿಸೋಜ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ದಯಾಮಾತೆ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕ್ಷೇತ್ರ ಶಾಸಕ ಯು.ಟಿ.ಖಾದರ್, ಮಂಗಳೂರು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಗದ್ದೆಯಲ್ಲಿ ಕ್ರೀಡಾಕೂಟ ಉದ್ಘಾಟಿಸಿದರು. ಮೊಗನಾರ್ಸಡು ಚರ್ಚ್ನ ಸಹಾಯಕ ಧರ್ಮಗುರು ದೀಪಕ್ ಡೇಸಾ, ಪಾನೀರ್ ಇಗರ್ಜಿಯ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯಕ್ರಮ ಪ್ರಯೋಜಕರಾದ ಜ್ಯೋತಿ ಲೋಬೋ, ಐವನ್ ಮೊಂತೆರೋ, ಉದ್ಯಮಿ ಓಲ್ವೆಟ್ ಡಿಸೋಜ, ಕೆಥೋಲಿಕ್ ಸಭಾ ಮಂಗಳೂರು ಅಧ್ಯಕ್ಷ ಫೆಲಿಕ್ಸ್ ಡಿಸೋಜ, ಕೃಷಿಕ ಡೆನ್ಝಿಲ್ ಡೇಸಾ, ವಾರ್ಡ್ ಗುರಿಕಾರ ಅಲ್ಫೋನ್ಸ್ ಫೆರಾವೊ ಮುಖ್ಯ ಅತಿಥಿಗಳಾಗಿದ್ದರು. ಕೆಥೋಲಿಕ್ ಸಭಾ ಮಂಗಳೂರು ದಕ್ಷಿಣ ವಲಯ ಕೋಶಾಧಿಕಾರಿ ಸ್ಟೀವನ್ ವಾಸ್, ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ರೋಡ್ರಿಗಸ್ ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಸ್ವಾಗತಿಸಿದರು. ಕಾರ್ಯದರ್ಶಿ ರುವಿತಾ ಮಿನೇಜಸ್ ವಂದಿಸಿದರು. ಅಶ್ವಿನ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.
`ಜಿಲ್ಲೆಯ ಸಂಸ್ಕೃತಿ, ಆಚಾರ-ವಿಚಾರ ತಿಳಿಸುವ ಕೆಲಸ ಕಾರ್ಯಕ್ರಮದ ಮೂಲಕ ನಡೆದಿದೆ, ಶಿಕ್ಷಣದ ಯೋಜನೆ 2050 ಆಗಿರಬೇಕು. ಆಧುನಿಕ ಕಾಲದಲ್ಲಿ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆ ಸಂದರ್ಭದಲ್ಲೂ ಹಿಂದಿನ ಸಂಸ್ಕೃತಿಯನ್ನು ನೆನಪಿಸುವ ಕೆಲಸ ನಡೆಯಬೇಕು’
ಯು.ಟಿ.ಖಾದರ್, ಮಂಗಳೂರು ಕ್ಷೇತ್ರ ಶಾಸಕ
`ಕೃಷಿಯ ವಿಚಾರದಲ್ಲಿ ನಾವು ಹೆಚ್ಚು ಮಹತ್ವ ನೀಡಬೇಕು, ಕೃಷಿ ಕಾರ್ಯದಲ್ಲಿ ನುರತರಾದವರೂ ಇನ್ನೂ ಹೆಚ್ಚಿನ ಜ್ಞಾನ ಪಡೆಯಬೇಕು. ನಮ್ಮಲ್ಲಿರುವ ಜ್ಞಾನ ಯುವಪೀಳಿಗೆಗೆ ಹಂಚುವ ಕೆಲಸ ನಿರಂತರ ನಡೆಯಬೇಕು’
ಪ್ರದೀಪ್ ಡಿಸೋಜ, ಉಪನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯ
`ಕರಾವಳಿ ಭಾಗದ ಮಣ್ಣಿನಲ್ಲಿ ಅದರದ್ದೇ ಆದ ಗುಣ, ಮಹತ್ವ ಇದೆ. ಈ ವಿಚಾರ ಇಂದಿನ ಯುವಪೀಳಿಗೆಗೆ ಗೊತ್ತಿಲ್ಲ, ಈ ನಿಟ್ಟಿನಲ್ಲಿ ಗದ್ದೆಯಲ್ಲಿ ಕಾರ್ಯಕ್ರಮ ಅಯೋಜಿಸಿದಾಗ ಮಣ್ಣಿನ ಗುಣದೊಂದಿಗೂ ಎಲ್ಲರೂ ಒಂದೆಡೆ ಬೆರೆಯುವ ಅವಕಾಶ ಸಿಗುತ್ತದೆ’
ಫಾ.ಡೆನ್ನಿಸ್ ಸುವಾರಿಸ್, ಪಾನೀರ್ ಚರ್ಚ್ ಧರ್ಮಗುರು