Site icon Ullalavani

ಇರಿತಕ್ಕೊಳಗಾಗಿರುವ ದೀಕ್ಷಾ ಚೇತರಿಕೆ; ಮಾತಿಗೆ ಸ್ಪಂದನೆ

UN NETWORKS

ಉಳ್ಳಾಲ : ಬಗಂಬಿಲದಲ್ಲಿ ಚೂರಿ ಇರಿತಕ್ಕೊಳಗಾಗಿರುವ ದೀಕ್ಷಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಸೋಮ ವಾರ ಹೊರಗಿನವರ ಮಾತಿಗೆ ಸಣ್ಣ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾಳೆ. ಆರೋಪಿ ಸುಶಾಂತ್‌ ಚೇತರಿಕೆಯಾಗಿದ್ದು, ಆತನ ಮಾನಸಿಕ ಸ್ಥಿತಿ ಅನುಸರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ತುರ್ತು ನಿಗಾದಲ್ಲಿರುವ ದೀಕ್ಷಾಳ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರ ತಂಡ ವಿಶೇಷ ನಿಗಾ ಇರಿಸಿದೆ. ಸಿಟಿ ಸ್ಕ್ಯಾನಿಂಗ್‌ ನಡೆಸಿದ್ದು, ಹೆಚ್ಚಿನ ತೊಂದರೆಗಳು ಕಂಡು ಬಂದಿಲ್ಲ. ಕಿಡ್ನಿ ಬಳಿ ಹೆಪ್ಪುಗಟ್ಟಿರುವ ರಕ್ತವನ್ನು ಹೊರತೆಗೆಯುವ ಕಾರ್ಯ ನಡೆದಿದೆ. ಉಳಿದಂತೆ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಮಾನಸಿಕ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ
ಆರೋಪಿ ಸುಶಾಂತ್‌ ಚೇತರಿಸುತ್ತಿದ್ದು, ಆರೋಗ್ಯ ಸುಧಾರಿಸಿದೆ. 2 ದಿನಗಳಲ್ಲಿ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಪೊಲೀಸರ ಕಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಶಾಂತ್‌ನ ಜತೆಯಲ್ಲಿ ತಾಯಿ ಇದ್ದಾರೆ.

ರಕ್ಷಿಸಿದ ದಾದಿಗೆ ನಿಟ್ಟೆ ವಿವಿಯಿಂದ ಗೌರವ
ಈ ನಡುವೆ ದೀಕ್ಷಾಳ ರಕ್ಷಣೆಗೆ ಮುಂದಾಗಿದ್ದ ದಾದಿಯ ಧೈರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ನಿಟ್ಟೆ ವಿಶ್ವವಿದ್ಯಾನಿಲಯವೂ ಗುರುತಿಸಿ ಆಕೆಯನ್ನು ಗೌರವಿಸಿದೆ.

ರಕ್ಷಣೆಗೆ ಧಾವಿಸದ ಸ್ಕೂಟರ್‌ ಸವಾರ
ಘಟನೆ ಸಂದರ್ಭ ಸ್ಕೂಟರೊಂದು ಇದೇ ರಸ್ತೆಯಲ್ಲಿ ಸಂಚರಿಸಿದ್ದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆದರೆ ಆತ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದ.

Exit mobile version