Site icon Ullalavani

ತೊಕ್ಕೊಟ್ಟು: ಸುಟ್ಟ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ

UN NETWORKS

ತೊಕ್ಕೊಟ್ಟು : ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ದಂಪತಿ ಶವ ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪದ ಮನೆಯೊಂದರಲ್ಲಿ ಬುಧವಾರ ಪತ್ತೆಯಾಗಿದೆ. ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ನಡೆದ ಘಟನೆ ಕುರಿತು ಶವಮಹಜರಿನಿಂದ ತಿಳಿದುಬರಬೇಕಿದೆ.

ಚೆಂಬುಗುಡ್ಡೆ ನಿವಾಸಿ ಪದ್ಮನಾಭ (75) ಮತ್ತು ವಿಮಲ (60) ಮೃತ ದಂಪತಿ. ಬುಧವಾರ ಮಧ್ಯಾಹ್ನ ಅಳಿಯ ಉಮಾನಾಥ್ ಎಂಬವರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಎಲ್ಲಾ ಬಾಗಿಲುಗಳು ಮುಚ್ಚಿದ ರೀತಿಯಲ್ಲಿತ್ತು. ಉಳ್ಳಾಲ ಪೊಲೀಸರು, ಇಬ್ಬರು ಪುತ್ರರು, ಮಗಳ ಸಮ್ಮುಖದಲ್ಲಿ ಬಾಗಿಲು ಒಡೆದು ಒಳನೋಡಿದಾಗ ಅಡುಗೆ ಕೋಣೆಯಲ್ಲಿ ದಂಪತಿ ಶವ ಸುಟ್ಟುಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಸೀಮೆಎಣ್ಣೆ ದೀಪ ಕಳಗೆ ಬಿದ್ದಿರುವುದು ಕಂಡುಬಂದಿದೆ. ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಅನ್ನುವುದು ಶವಮಹಜರು ಬಳಿಕ ತಿಳಿದುಬರಬೇಕಿದೆ. ಪದ್ಮನಾಭ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ದಿನಾ ಮಗಳ ಜತೆಗೆ ಮೊಬೈಲ್ ಮೂಲಕ ಮಾತನಾಡುತ್ತಿದ್ದರೂ, ಸಂತಸದಿಂದಲೇ ಇದ್ದರೆಂದು ಪುತ್ರಿ ತಿಳಿಸಿದ್ದಾರೆ.

ಮೊಬೈಲ್ ಸ್ವೀಕರಿಸಿರಲಿಲ್ಲ : ವಿಟ್ಲದ ಕನ್ಯಾನದಲ್ಲಿರುವ ಮಗಳು ಮೊಬೈಲಿನಲ್ಲಿ ತಾಯಿ ಜತೆಗೆ ಸೋಮವಾರದಂದು ಮಧ್ಯಾಹ್ನ ವೇಳೆ ಮಾತನಾಡಿದ್ದರು. ಅಲ್ಲದೆ ಇಬ್ಬರಲ್ಲಿಯೂ ವಿಟ್ಲಕ್ಕೆ ಬರಲು ಕಾರು ಕಳುಹಿಸುತ್ತೇವೆ ಎಂದು ಕರೆದಿದ್ದರೂ, ಸದ್ಯ ಬರುವುದಿಲ್ಲವೆಂದೂ ಹೇಳಿದ್ದರು. ಮಂಗಳವಾರ ಸಂಜೆ ಮತ್ತೆ ಪುತ್ರಿ ಮೊಬೈಲಿಗೆ ಕರೆ ಮಾಡಿದಾಗ ಯಾರೂ ಸ್ವೀಕರಿಸಿರಲಿಲ್ಲ. ಈ ಹಿಂದೆ ಪದ್ಮನಾಭ ಅವರು ಅನಾರೋಗ್ಯದಿಂದ ಇದ್ದ ಸಂದರ್ಭ ದಂಪತಿ ಮಕ್ಕಳಿಗೆ ತಿಳಿಸದೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಈ ಸಂದರ್ಭ ಕೂಡಾ ಮೊಬೈಲ್ ಸ್ವೀಕರಿಸಿರಲಿಲ್ಲ. ಇದರಿಂದ ಪುತ್ರಿ , ಹೆತ್ತವರು ಆಸ್ಪತ್ರೆಗೆ ದಾಖಲಾಗಿರಬಹುದು ಅದಕ್ಕಾಗಿ ಕರೆ ಸ್ವೀಕರಿಸುತ್ತಿಲ್ಲ ಎಂದು ಸುಮ್ಮನಾಗಿದ್ದರು. ಆದರೂ ಸಂಶಯಗೊಂಡು ಬುಧವಾರ ಅಳಿಯ ಉಮಾನಾಥ ಅವರು ಚೆಂಬುಗುಡ್ಡೆಗೆ ಬಂದಿದ್ದರು. ಈ ವೇಳೆ ಬಾಗಿಲು ಮುಚ್ಚಿದ್ದು, ನೊಣಗಳು ಹೊರಬರುವುದನ್ನು ಗಮನಿಸಿ ದಂಪತಿಯ ಇಬ್ಬರು ಪುತ್ರರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸುಟ್ಟ ಸ್ಥಿತಿಯಲ್ಲಿದ್ದ ದಂಪತಿ ಶವ ಕೊಳೆತು ದುರ್ನಾತ ಬೀರುತಿತ್ತು. ಸೋಮವಾರ ರಾತ್ರಿ ವೇಳೆ ಘಟನೆ ನಡೆದಿರುವ ಸಾಧ್ಯತೆಗಳಿವೆ. ಮೃತದೇಹವಿರುವ ಸ್ಥಳದಲ್ಲೇ ಚಿಮಿಣಿ ದೀಪ ಬಿದ್ದಿರುವುದು ಕಂಡುಬಂದಿದೆ. ವಿದ್ಯುತ್ ಹೋದಾಗ ಚಿಮಿಣಿ ಉರಿಸಲು ವಿಮಲ ಮುಂದಾದಾಗ ಆಕಸ್ಮಿಕವಾಗಿ ಮೈಮೇಲೆ ಬಿದ್ದು, ಸೀರೆಗೆ ಬೆಂಕಿ ತಗಲಿರುವ ಸಾಧ್ಯತೆಗಳಿವೆ. ಅದನ್ನು ಆರಿಸಲೆಂದು ತೆರಳಿದ ಪದ್ಮನಾಭ ತಲೆತಿರುಗಿ ಬಿದ್ದು, ಇಬ್ಬರೂ ಬೆಂಕಿಯಿಂದ ಸುಟ್ಟುಹೋಗಿ ಸಾವನ್ನಪ್ಪಿರುವ ಶಂಕೆ ಇದೆ. ಸಂಬಂಧಿಕರ ಪ್ರಕಾರ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಿ, ಕಿಟಕಿಗೂ ಪರದೆಗಳನ್ನು ಅಡ್ಡವಾಗಿ ಕಟ್ಟಿರುವುದರಿಂದ ವಿಷ ಸೇವಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ದಂಪತಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದು, ಎಲ್ಲರೂ ಮದುವೆಯಾಗಿ ಬೇರೆ ಮನೆ ಮಾಡಿಕೊಂಡಿದ್ದಾರೆ. ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಶವಮಹಜರು ಪರೀಕ್ಷೆ ನಡೆದಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸಿಪಿ ರಾಮರಾವ್, ಠಾಣಾಧಿಕಾರಿ ಗೋಪಿಕೃಷ್ಣ , ಎಸ್.ಐ ಗುರುವಪ್ಪ ಕಾಂತಿ, ಎಎಸ್ ಐ ಶಾಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

` ಕರ್ನಾಟಕದವರಲ್ಲಿ ವಿಶ್ವಾಸವಿರಲಿಲ್ಲ’
ಮೂಲತ: ಕೇರಳದ ತಲಶ್ಶೇರಿ ಚಿಣ್ಣೇರಿ ನಿವಾಸಿಗಳಾದ ದಂಪತಿ ಹಲವು ವರ್ಷಗಳ ಹಿಂದೆ ತೊಕ್ಕೊಟ್ಟು ಚೆಂಬುಗುಡ್ಡೆಗೆ ಬಂದು ನೆಲೆಸಿದ್ದರು. ಕೇರಳೀಯರನ್ನೇ ಮೆಚ್ಚುತ್ತಿದ್ದ ಅವರು ಆಗಾಗ್ಗ ಕರ್ನಾಟಕದವರು ಸರಿಯಿಲ್ಲ, ಕೇರಳದವರಲ್ಲಿ ಮಾತ್ರ ತಮಗೆ ವಿಶ್ವಾಸ ಅನ್ನುವುದನ್ನು ಅಳಿಯ ಉಮಾನಾಥ್ ಅವರಲ್ಲಿ ಹೇಳಿಕೊಳ್ಳುತ್ತಿದ್ದರು. ತಾವಿಬ್ಬರೂ ಯಾರಿಗೂ ಹೊರೆಯಾಗಿ ಬಾಳುವುದಿಲ್ಲ. ಅನ್ನುತ್ತಾ ಮಗಳ ಮನೆಯಲ್ಲಿ ಕೆಲಕಾಲವಿದ್ದರೂ ಅಲ್ಲಿಂದಲೂ ಮತ್ತೆ ಮನೆಗೆ ವಾಪಸ್ಸಾಗಿದ್ದರು. ಸರಕಾರ ಮಾಸಿಕವಾಗಿ ನೀಡುವ ಪೆನ್ಶನ್ ಹಣವನ್ನೇ ಬಳಸುತ್ತಿದ್ದ ದಂಪತಿ, ಮಕ್ಕಳು ನೀಡುವ ಹಣ, ಅಕ್ಕಿಯನ್ನೂ ಪಡೆಯಲು ಹಿಂದೇಟು ಹಾಕುತ್ತಿದ್ದರು. ಸ್ವಾಭಿಮಾನದಿಂದಲೇ ಬಾಳಲು ದಂಪತಿ ಪ್ರಯತ್ನಿಸಿದ್ದರು.

Exit mobile version