UN NETWORKS
ಅಸೈಗೋಳಿ : ಅಸೈಗೋಳಿ ಸಮೀಪ ಶುಕ್ರವಾರ ಮಧ್ಯಾಹ್ನದ ವೇಳೆ ಸರಣಿ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಪವಾಡ ಸದೃಶ್ಯವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಪಾವೂರು ಗ್ರಾಮದ ಇನೋಳಿ ಕಂಬಳಪದವು ನಿವಾಸಿ ನಝೀರ್ ಅಪಾಯದಿಂದ ಪಾರಾದವರು. ಅವರು ಎಂದಿನಂತೆ ಶುಕ್ರವಾರ ಮಧ್ಯಾಹ್ನದ ವೇಳೆ ತಮ್ಮ ಈಟಿಯೋಸ್ ಕಾರಿನಲ್ಲಿ ಮನೆಯಿಂದ ದೇರಳಕಟ್ಟೆಯಲ್ಲಿರುವ ತಮ್ಮ ಬಟ್ಟೆ ಅಂಗಡಿಗೆ ಹೋಗುತ್ತಿದ್ದರು. ಅಸೈಗೋಳಿ ದಾಟಿ ತಿಬ್ಲೆಪದವು ತಲುಪಿದಾಗ ಎದುರಿನಲ್ಲಿ ಜೆಸಿಬಿ ರಸ್ತೆಬದಿ ಕಾಮಗಾರಿಯಲ್ಲಿ ನಿರತವಾಗಿದ್ದರಿಂದ ಕಾರಿನ ಮುಂದಿನಿಂದ ಹೋಗುತ್ತಿದ್ದ ಸರಕಾರಿ ಬಸ್ಸು ನಿಲ್ಲಿಸಲಾಯಿತು. ಈ ಸಂದರ್ಭ ನಝೀರ್ ಕಾರನ್ನು ನಿಲ್ಲಿಸಿದ್ದಾರೆ. ಹಿಂದಿನಿಂದ ವೇಗವಾಗಿ ಬಂದ ಖಾಸಗಿ ಬಸ್ಸು ಕಾರಿನ ಹಿಂಭಾಗಕ್ಕೆ ಬಲವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಮುಂದಕ್ಕೆ ಚಲಿಸಿ ಸರಕಾರಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಅದರಿಂದಾಗಿ ಕಾರಿನ ಮುಂಭಾಗ ಮತ್ತು ಹಿಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಚಾಲನೆ ಮಾಡುತ್ತಿದ್ದ ನಝೀರ್ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಆ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.