Site icon Ullalavani

ವಿದ್ಯಾರ್ಥಿಗಳು ಬಲಿಷ್ಠರಾದಾಗ ದೇಶ ಸಧೃಡ : ಖಾದರ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ : ಕಲಿಕಾ ಕೊಠಡಿಯಲ್ಲಿರುವ ವಿದ್ಯಾರ್ಥಿಗಳು ಬಲಿಷ್ಠರಾಗಿ ಅವರು ದೇಶದ ಸಂಪತ್ತಾದಾಗ ಭಾರತ ಸದೃಡವಾಗಿ ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೆ ಏರಲು ಸಾಧ್ಯವಿದ್ದು, ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ, ವಿಜ್ಞಾನ ಹೆಚ್ಚಿಸುವ ಓಪನ್‍ಹೌಸ್‍ಗಳಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳನ್ನು ಬಲಯುತರನ್ನಾಗಿ ಮಾಡಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರಿಚಯಿಸುವ ಉದ್ಧೇಶದಿಂದ ಕ್ಯಾಂಪಸ್ ನೋಡ ಬನ್ನಿ ಎನ್ನುವ `ಓಪನ್ ಹೌಸ್’ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 


ಮಂಗಳೂರು ವಿಶ್ವವಿದ್ಯಾನಿಲಯ ದೇಶದಲ್ಲಿ ಉತ್ತಮ ವಿ.ವಿ. ಎನ್ನುವ ಹೆಸರು ಗಳಿಸುತ್ತಿದ್ದು, ಸಂಶೋಧನೆ ವಿಚಾರದಲ್ಲಿ ದೇಶದ ಟಾಪ್ 50 ವಿ.ವಿ.ಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ದೇಶದ 25 ವಿವಿಗಳ ಪಟ್ಟಿಯಲ್ಲಿ ಮಂಗಳೂರು ವಿ.ವಿ.ಬರಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಭೈರಪ್ಪ ಮಾತನಾಡಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ವೈಫೈ ಮೂಲಕ ವಾಣಿಜ್ಯ ಪದವಿ ಮತ್ತು ಬಿಬಿಎಂ ಫಲಿತಾಂಶ ಪ್ರಕಟಿಸಲಾಗಿದೆ. ಇಂದಿನಿಂದ ವೆಬ್ ಪೋರ್ಟಲ್ ಗೆ ಪ್ರಾಯೋಗಿಕ ಚಾಲನೆ ನೀಡಲಾಗುವುದು. ವಿವಿಯ ಗ್ರಂಥಾಲಯ, ವಿಜ್ಞಾನ ಕೇಂದ್ರ ಮತ್ತು ಆಡಳಿತ ಕಚೇರಿ ಬಳಿ ವಿವಿಯ ಬಗ್ಗೆ ಸಮಗ್ರ ಮಾಹಿತಿಯ ಕಿಯೋಸ್ಕ್ ಸ್ಥಾಪಿಸಲಾಗುವುದು ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಯಡಪಡಿತ್ತಾಯ ಸ್ವಾಗತಿಸಿದರು. ಪ್ರೊ. ಎ.ಎಂ.ಖಾನ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಸಂಯೋಜಕ ಪ್ರೊ. ಕೆ.ಆರ್ ಚಂದ್ರಶೇಖರ್ ವಂದಿಸಿದರು.

ಶುಕ್ರವಾರ ವಿ.ವಿ.ಯಲ್ಲಿ ಕಂಡು ಬಂದ ವಿಚಾರಗಳು

೧.ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸುವ ಎರಡು ಬಸ್ಸು ತಂಗುದಾಣದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಹೆಲ್ಪ್ ಡೆಸ್ಕ್‍ಗಳು ಸಹಕಾರಿಯಾಗಿತ್ತು.
ಮಂಗಳೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಮಂಗಳೂರು ವಿವಿ, ವಿ.ವಿ.ಘಟಕ ಕಾಲೇಜುಗಳು ಹಾಗೂ ಕೊಡಗಿನ ಚಿಕ್ಕಅಳುವಾರದಲ್ಲಿರುವ ಪ್ರಾದೇಶಿಕ ಕೇಂದ್ರದಲ್ಲಿರುವ ವಿವಿಧ ಕೋರ್ಸ್, ಸೌಲಭ್ಯಗಳ ಬಗ್ಗೆ ಸಮಗ್ರ ವಿವರವನ್ನು ಕೊಡುವ ಕೌಂಟರ್ ತೆರೆಯಲಾಗಿತ್ತು. ಗ್ರಂಥಾಲಯಕ್ಕೆ ಪ್ರವೇಶಿಸುತ್ತಿದ್ದಂತೆ ಇಂಟರ್‍ನೆಟ್ ಮೂಲಕ ಪಲಿತಾಂಶ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದ್ದು ಕಾರ್ಯಕ್ರಮ ನಡೆಯುವ ಎರಡು ದಿನ ಮುಕ್ತವಾಗಿ ವೈಫೈ ಪ್ರಯೋಜನವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಆವಕಾಶ ಮಾಡಿಕೊಡಲಾಗಿತ್ತು.
೨. ವಿಶ್ವಿದ್ಯಾನಿಲಯ ಕ್ಯಾಂಪಸ್‍ನಲ್ಲಿರುವ ಆಯಾಯ ವಿಭಾಗಗಳಲ್ಲಿ ಕೋರ್ಸುಗಳ ಮಾಹಿತಿ ನೀಡುವುದರೊಂದಿಗೆ, ವಿಭಾಗದ ಕಾರ್ಯ ಚಟುವಟಿಕೆಗಳು, ಪೋಸ್ಟರ್ಸ್ ಮತ್ತು ದೃಶ್ಯ ಮಾದ್ಯಮದ ಮೂಲಕ ವಿದ್ಯಾರ್ಥಿಗಳಿಗೆ ವಿವರಣೆ ನೀಡುತ್ತಿದ್ದರು.
೩.ಬೆಂಗಳೂರು, ಕಾಸರಗೋಡು, ಉಡುಪಿ, ದ.ಕ.ಜಿಲ್ಲೆ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಸ್ನಾತಕೋತ್ತರ ಕೋರ್ಸುಗಳ ಮಾಹಿತಿ ಪಡೆದುಕೊಂಡರು.
೪. ವಿಜ್ಞಾನ, ವಾಣಿಜ್ಯ ಸ್ನಾತಕೋತ್ತರ ಪದವಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದರೆ, ಕಲಾ ಪದವಿ ವಿಭಾಗಗಳಿಗೆ ಬೇಟಿ ನೀಡಿದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು.


ಪ್ರಥಮ ಪ್ರಯತ್ನ ಸಫಲ :
ವಿದೇಶಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಕೋರ್ಸುಗಳನ್ನು ಆಯ್ಕೆ ಮಾಡಲು ಓಪನ್ ಹೌಸ್‍ನಂತಹ ಕಾರ್ಯಕ್ರಮಗಳನ್ನು ಅಳವಡಿಸುತ್ತಿದ್ದು, ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಿದ್ದು, ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗಗಳನ್ನು ಸಂಪರ್ಕಿಸಿ ಕೋರ್ಸುಗಳ ಕುರಿತು ಮಾಹಿತಿ ಪಡೆಯುತ್ತಿರುವುದು ಕಂಡು ಬಂತು. ವಿ.ವಿ.ಯ ಪ್ರಥಮ ಪ್ರಯತ್ನ ಸಫಲವಾಗಿದ್ದು, ಹೆಚ್ಚಿನ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಕೆಲವೆಡೆ ವಿದ್ಯಾರ್ಥಿಗಳಿಗೆ ಕೆಲವೊಂದು ವಿಭಾಗಗಳು ಯಾವ ಕಡೆ ಇದೆ ಎನ್ನುವ ವಿಚಾರ ತಿಳಿಯದೆ ಗೊಂದಲಕ್ಕೀಡಾದರು.

ಓಪನ್ ಹೌಸ್ ಕಾರ್ಯಕ್ರಮ ಶನಿವಾರವೂ ಮುಂದುವರೆಯಲಿದ್ದು ಸ್ನಾತಕೋತ್ತರ ಶಿಕ್ಷಣ ಆಯ್ಕೆ ನಡೆಸಲು ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.

Exit mobile version