Site icon Ullalavani

ನಿಟ್ಟೆ : ವಿಶ್ವ ತಂಬಾಕು ರಹಿತ ದಿನ ಆಚರಣೆ

UN NETWORKS

ಉಳ್ಳಾಲ: ತಂಬಾಕು ಕುರಿತ ಜನಜಾಗೃತಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ವರ್ಷವಿಡೀ ನಡೆಯುತ್ತಿರಲಿ. ನಿಟ್ಟೆ ವಿ.ವಿ ತಂಬಾಕು ರಹಿತ ಕ್ಯಾಂಪಸ್ ಆಗಿ ಮೂಡಿಸುವಲ್ಲಿ ಸಫಲರಾಗಿದ್ದೇವೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಹೇಳಿದ್ದಾರೆ.

ಅವರು ಕ್ಷೇಮ ಆಸ್ಪತ್ರೆಯ ಮನೋರೋಗ ಚಿಕಿತ್ಸಾ ವಿಭಾಗ, ನಿಟ್ಟೆ ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ತಂಬಾಕು ರಹಿತ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಡಾ.ಯು.ಯಸ್ ಕೃಷ್ಣ ನಾಯಕ್ ಮಾತನಾಡಿ, ತಂಬಾಕು ವಿರೋಧಿಸಿ ಶ್ವಾಸಕೋಶ ಆರೋಗ್ಯ ಕಾಪಾಡುವ ಜಾಗೃತಿ ಪ್ರಸ್ತುತ ದಿನಗಳಲ್ಲಿ ಆಗುತ್ತಿದೆ. ಕ್ಷೇಮ ಆಸ್ಪತ್ರೆ ವತಿಯಿಂದ ಎನ್ ಆರ್ ಟಿ ಥೆರಪಿ ಸೇರಿದಂತೆ ವಿದ್ಯಾರ್ಥಿಗಳಿಂದ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗುತ್ತಿದೆ ಎಂದರು.

ವೈದ್ಯಕೀಯ ಅಧೀಕ್ಷಕ ಮೇ. ಶಿವಕುಮಾರ್ ಹಿರೇಮಠ್, ತಂಬಾಕು ವಿರೋಧಿ ಆಂದೋಲನ ಮೂಡಿಸಿ ತಂಬಾಕು ಕೈ ಸೇರುವ ಮುನ್ನವೇ ಅದನ್ನು ತಡೆಗಟ್ಟುವ ಉದ್ದೇಶ ಎಲ್ಲರಲ್ಲೂ ಮೂಡಬೇಕಿದೆ. ಶಾಲಾ ಕಾಲೇಜುಗಳ ಮುಂದೆ ಗುಟ್ಕಾ, ಸಿಗರೇಟು ಜಾಹೀರಾತು ಪ್ರಚೋದಿಸುತ್ತದೆ. ಇದು ಆಗಬಾರದು ಎಂದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿ.ವಿ ಯ ರಾಷ್ಟ್ರೀಯ ಸೇವಾ ಯೋಜನೆ ಡಾ.ಸುಮಲತಾ ಉಪಸ್ಥಿತರಿದ್ದರು.
ಮನೋರೋಗ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ.ಸತೀಶ್ ರಾವ್ ಸ್ವಾಗತಿಸಿದರು. ಸುಲೋಚನಾ ತಂಬಾಕು ಕೇಂದ್ರದ ಮಾಹಿತಿ ನೀಡಿದರು. ಡಾ.ಶ್ರೀನಿವಾಸ್ ಭಟ್ ವಂದಿಸಿದರು. ಸುಮನ್ ಕಾರ್ಯಕ್ರಮ ನಿರೂಪಿಸಿದರು.

Exit mobile version