UN NETWORKS
ಪಜೀರ್ : ಮತದಾನ ನಮ್ಮ ಹಕ್ಕು, ಭಾಗವಹಿಸುವಿಕೆ ಪ್ರತಿಯೊಬ್ಬರ ಕರ್ತವ್ಯ, ಕ್ರೈಸ್ತರೆಲ್ಲರೂ ಈ ಬಾರಿಯ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರೆ.ಫಾ.ಫ್ರಾನ್ಸಿಸ್ ಆಲ್ಮೇಡ ಹೇಳಿದರು.
ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ 25ನೇ ವರ್ಷದ ಪ್ರಯುಕ್ತ ಕೆಥೊಲಿಕ್ ಸಭಾ ಪಜೀರ್ ಘಟಕದ ಆಶ್ರಯದಲ್ಲಿ ಭಾನುವಾರ ಪಜೀರ್ ಮೆರ್ಸಿಯಮ್ಮನವರ ಇಗರ್ಜಿಯಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನ ಹಕ್ಕಾಗಿದ್ದು ಅಭ್ಯರ್ಥಿ ಆಯ್ಕೆಯೂ ಸ್ವತಂತ್ರವಾಗಿದೆ. ಈ ವಿಷಯದಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ಪ್ರತಿಯೊಬ್ಬರೂ ಗೌಪ್ಯತೆ ಕಾಪಾಡಿಕೊಳ್ಳಬೇಕು. ಈ ವರ್ಷದ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಬೇಕು ಎಂದು ಕರೆ ನೀಡಿದರು.
ಪಜೀರ್ ಚರ್ಚ್ ಧರ್ಮಗುರು ರೆ.ಫಾ.ಸುನಿಲ್ ವೇಗಸ್, ಜೆಪ್ಪು ಸಂತ ಜೋಸೆಫರ ಸೆಮಿನಾರ್ ಆಡಳಿತಾಧಿಕಾರಿ ರೆ.ಫಾ.ಪ್ರವೀಣ್ ಲಿಯೋ ಲಾಸ್ರಾದೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಜೋನ್ ವಿಕ್ಟರ್ ಮೆಂಡೋನ್ಸ, ಕೆಥೊಲಿಕ್ ಸಭಾ ಅಧ್ಯಕ್ಷ ಹಿಲರಿ ಡಿಸೋಜ, ರಾಜಕೀಯ ಸಂಚಾಲಕ ವಲೇರಿಯನ್ ಡಿಸೋಜ, ಕಾರ್ಯದರ್ಶಿ ವಿಲಿತಾ ಲೋಬೋ ಮೊದಲಾದವರು ಉಪಸ್ಥಿತರಿದ್ದರು.