Site icon Ullalavani

“ತುಳು ಭಾಷೆ ಉಳಿಸಿ, ಬೆಳೆಸಲು ವಿದ್ಯಾರ್ಥಿಗಳು ಶ್ರಮಿಸ ಬೇಕು”

UN NETWORKS

ತಲಪಾಡಿ: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಪ್ರಾದೇಶಿಕ ದೃಷ್ಟಿಯಲ್ಲಿ ಚಿಕ್ಕದಾದರೂ ಅದರ ಸಾಹಿತ್ಯಕ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅದು ಹಿರಿದಾದ ಭಾಷೆಯಾಗಿದ್ದು, ನಮ್ಮ ತುಳು ಭಾಷೆಯನ್ನು ಉಳಿಸುವ ಬೆಳೆಸುವ ಕೆಲಸ ವಿದ್ಯಾರ್ಥಿ ಸಮೂಹದಲ್ಲಿ ನಡೆಯಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯಪಟ್ಟರು.

ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿದ ತುಳು ಸಾಂಸ್ಕೃತಿಕ ಪರ್ಬ-ಪಿಂಗಾರವನ್ನು ಉದ್ಘಾಟಿಸಿ ಮಾತನಾಡಿದರು.ತುಳುನಾಡಿನ ಕೋಲ, ಕಂಬಳ, ತಿಂಡಿ ತಿನಿಸುಗಳಾದ ನೀರು ದೋಸೆ, ಪತ್ರೊಡೆ, ಮಸಾಲೆ ದೋಸೆ ಇವೆಲ್ಲವೂ ಈ ಮಣ್ಣಿನ ಸಾಂಸ್ಕೃತಿಕ ಹಿರಿಮೆ. ಈ ಮಣ್ಣಿನ ಅಸಂಖ್ಯಾಕ ವರ್ಗ ತುಳುವಿನಲ್ಲೇ ಸಹಿ ಹಾಕುವ ಕ್ರಮವೂ ಇಲ್ಲಿನ ಜನರ ಭಾಷಾ ಪ್ರೇಮವನ್ನು ಪ್ರತಿನಿಧಿಸುತ್ತದೆ ಎಂದರು.

ತುಳುವಿನಲ್ಲೇ ವ್ಯವಹರಿಸಿ
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್‌ ಮಾತನಾಡಿ, ಪ್ರಾಚೀನ ಕನ್ನಡ ಶಬ್ದಗಳು ಇಂದಿನ ತುಳು ಭಾಷಾ ಸಮೃದ್ಧಿಗೆ ಕಾರಣವಾಗಿದೆ. ವ್ಯಾವಹಾರಿಕವಾಗಿಯೂ ಕುಟುಂಬದ ಮಧ್ಯೆ ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಿವೆ. ತುಳುವರು ಕುಟುಂಬದ ಮಧ್ಯದಲ್ಲಿ ತುಳುವಲ್ಲೇ ವ್ಯವಹರಿಸಿದರೆ ಶೋಭೆ ಎಂದರು.
ವಿದ್ಯಾರ್ಥಿಗಳ ಬರಹದ ಗೊಂಚಲು “ಬ್ರಾಹ್ಮ್ಪಿ’ಯನ್ನು ಸುನಂದಾ ಪುರಾಣಿಕರು ಲೋಕಾರ್ಪಣೆ ಮಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ತುಳು ಚಾವಡಿಯಲ್ಲಿ ಶಾರದಾ ವಿದ್ಯಾನಿಕೇತನದ ಆಡಳಿತಾಧಿಕಾರಿ ವಿವೇಕ ತಂತ್ರಿ, ಪ್ರಾಂಶುಪಾಲರಾದ ಸುಷ್ಮಾ ದಿನಕರ್‌, ಲತಾಂಜಲಿ ರೈ, ವಿನಾಯಕ ಬಿ.ಜೆ., ಪ್ರೊ| ಮಾಧವ ಕೆ., ಪಿಂಗಾರ ಸಂಯೋಜಕಿ ವಿದ್ಯಾ ಎಸ್‌. ನಾಯಕ್‌ ಉಪಸ್ಥಿತರಿದ್ದರು.

ಈ ಸಂದರ್ಭ ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರು ವಿ. ವಿ. ನಡೆಸಿದ ಬಿ.ಎಸ್ಸಿ. ಅನಿಮೇಷನ್‌ ಮತ್ತು ವಿಶುವಲ್‌ ಎಫೆಕ್ಟ್ ಪದವಿಯ ಮೂವರು ರ್‍ಯಾಂಕ್‌ ವಿಜೇತರಾದ ರಾಹುಲ್‌ ಪಿ. ಶೆಟ್ಟಿ , ಸುಮುಖ ಪಿ. ಬಾಸ್ರಿ, ಡೀನ್‌ ಪೊನ್ನಮ್ಮ ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್‌ ಸ್ವಾಗತಿಸಿದರು. ಚರಣ್‌ರಾಜ್‌ ವಂದಿಸಿದರು. ಪ್ರೀತಮ್‌ ಶೆಟ್ಟಿ ನಿರೂಪಿಸಿದರು.

Exit mobile version