UN NETWORKS
ತೊಕ್ಕೊಟ್ಟು : ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರನ್ನು ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವ ಸಲುವಾಗಿ ವರಿಷ್ಠರ ನಿರ್ದೇಶನದಂತೆ ನೂತನ ಕಾರ್ಯತಂತ್ರಗಳನ್ನು ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಸಲುವಾಗಿ ಕಾರ್ಯಕರ್ತರು ಹಾಗೂ ಪೇಜ್ ಪ್ರಮುಖರ ಸಮಾವೇಶ ಮಾ. 30ರಂದು ಗಟ್ಟಿ ಸಮಾಜಭವನದಲ್ಲಿ ನಡೆಯಲಿದೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು.
ರಾಜಕೀಯದಲ್ಲೂ ಸತ್ಯಕ್ಕೆ ಬೆಲೆ ಇದ್ದರೂ ರಾಜಕೀಯ ಧರ್ಮ ಬಿಟ್ಟು ಜೆಡಿಎಸ್ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ರವಾನಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯ ಇತಿಹಾಸ ನಮಗೆ ಗೊತ್ತಿದೆ. ಅವರ ರಾಜಕೀಯ ಅನುಭವ, ಹಿರಿಯರಿಗೆ ಮಾಡಿದ ದ್ರೋಹ ಗೊತ್ತಿದೆ. ಹಾಗೆಯೇ ಕಾಂಗ್ರೆಸ್ಸಿಗರು ಆರೋಪಿಸುವ ಭರದಲ್ಲಿ ಐಟಿ ದಾಳಿ ಮೋದಿ ಮಾಡಿಸಿದ್ದು ಎಂಬ ಉತ್ತರ ಕೊಡುತ್ತಿದ್ದು ಸರ್ಜಿಕಲ್ ಸ್ಟೆವೈಕ್ ಮೋದಿ ಮಾಡಿಸಿದ್ದಲ್ಲ ಎಂದೂ ಹೇಳ್ತಾರೆ. ಸಂಸದರ ವಿರುದ್ಧ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಆರೋಪಿಸುತ್ತಿದ್ದು ಸತ್ಯ ಫಲಿತಾಂಶ ಹೊರಬಂದಾಗ ಜಗತ್ತಿಗೆ ತಿಳಿಯಲಿದೆ ಎಂದರು.ದಿ. ಯು.ಟಿ. ಫರೀದ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಒಂಬತ್ತು ಕೆರೆಯಲ್ಲಿರುವ ಸ್ಕೆಲೆಟಿನ್ ನಂತಹ ವಾಸಯೋಗ್ಯವಲ್ಲದ ನಾಲ್ಕುನೂರು ಮನೆಯನ್ನು ನಿರ್ಮಿಸಿದ್ದು ಆ ಬಗ್ಗೆ ಯಾರೂ ಕೂಡಾ ಚಕಾರ ಎತ್ತುತ್ತಿಲ್ಲ. ಅದರಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಯಾರೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹಾಕೋದಿಲ್ಲ. ಅಲ್ಲಿ ವಾಸಿಸಲು ಸಾಧ್ಯವೇ ಇಲ್ಲ. ಹಂದಿ ಕೋಳಿ ಗೂಡು ಸಹ ಆ ರೀತಿ ಇರದು ಎಂದರು.ಎಡಿಬಿ ಕುಡಿಯುವ ನೀರಿನ ಅವ್ಯವಹಾರ ಯಾರೂ ಮಾತು ಆಡುತ್ತಿಲ್ಲ.ನಾಲ್ಕು ಬಾರಿ ಯು.ಟಿ. ಫರೀದ್ ಹಾಗೂ ನಾಲ್ಕು ಬಾರಿ ಯು.ಟಿ. ಖಾದರ್ ಅವರು ಶಾಸಕರಾದರೂ ಸಮಸ್ಯೆ ಪರಿಹರಿಸದೆ ನಮ್ಮ ಸಂಸದರ ವಿರುದ್ಧ ಆರೋಪಿಸುತ್ತಾರೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಇನ್ನೂ ಆಗಿಲ್ಲ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ದೇಶದಲ್ಲಿ ಎನ್ ಡಿಎ ಬಂದರೆ ಶಾಶ್ವತ ಪರಿಹಾರ ಕೊಡುತ್ತೇವೆ ಎಂದು ನುಡಿದರು.ಕೆರೆಬೈಲ್ ನಗರಸಭೆಯಲ್ಲಿ ಕ್ರಿಯಾಯೋಜನೆಯಾಗಿ ಅನುಮತಿ ಪತ್ರ ಸಿಕ್ಕಿ ಗುದ್ದಲಿ ಪೂಜೆ ಆಗಿದ್ದರೂ ರಾಜಕೀಯ ಮಾಡಿದ ಶಾಸಕರು ಅಲ್ಲಿಗೆ ಮಂಜೂರಾಗಿದ್ದ 60ಲಕ್ಷ ರೂ. ಬೇರೆ ಕಡೆ ಸ್ಥಳಾಂತರಿಸಿದ್ದಾರೆ. ಯುಜಿಡಿ 62ಕೋಟಿ ರೂ. ಮಂಜೂರಾಗಿದ್ದರೂ ಅದರೊಳಗಿನ ಅವ್ಯವಹಾರ ಮಾಧ್ಯಮ, ಅಧಿಕಾರಿಗಳಿಗೂ ಗೊತ್ತಿದ್ದರೂ ಸತ್ಯ ಹೊರಗೆ ಬಂದಿಲ್ಲ.
ಸಂಸದರು 16ಸಾವಿರ ಕೋಟಿ ರೂ. ಜಿಲ್ಲೆಗೆ ನುದಾನ ತಂದಿದ್ದಾರೆ. ಆ ಅಭಿವೃದ್ದಿ ಅಭ್ಯರ್ಥಿ ಗೆಲುವಿಗೆ ಪೂರಕವಾಗುತ್ತದೆ ಎಂದರು.
ಬಿಜೆಪಿ ಮಂಗಳೂರು ಕ್ಷೇತ್ರದಲ್ಲಿ ಹಂತಹಂತವಾಗಿ ಗಟ್ಟಿಯಾಗಿ ತಳವೂರಿದ್ದು ಈ ಚುನಾವಣೆಯಲ್ಲಿ ಮೋದಿಯವರು ಮತ್ತೆ ಪ್ರಧಾನಿ ಆಗಲಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರಕಾರ ಉರುಳಲಿದೆ. ಮುಂದಿನ ವಿಧಾನ ಸಭೆ ಚುನಾವಣೆಗೂ ಇದು ನಾಂದಿ ಹಾಡಲಿದೆ. ಎಡಿಬಿ ಯೋಜನೆ, ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ರೂಪವಾಗಿ 500ಕೋಟಿ ರೂ. ಅನುದಾನ ಮಂಜೂರಾತಿ ಯತ್ನ ಎಲ್ಲವೂ ಹಳೆಯ ಯೋಜನೆ. ಶಾಸಕ ಯು.ಟಿ. ಖಾದರ್ ಅವರು ತಂದಿರುವ ಹೊಸ ಯೋಜನೆ ಯಾವುದೂ ಇಲ್ಲ ಎಂದು ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಅರೋಪಿಸಿದರು.ಈ ಸಂದರ್ಭ ಮಾಜಿ ಶಾಸಕ ಕೆ. ಜಯರಾಮ ಶೆಟ್ಡಿ ,ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹಾಗೂ ನಮಿತಾ ಶ್ಯಾಂ, ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ. ಅರ್. ಹಾಗೂ ಮನೋಜ್ ಆಚಾರ್ಯ ಹಾಗೂ ಮಾಧ್ಯಮ ಸಂಚಾಲಕ ಜೀವನ್ ಕುಮಾರ್ ತೊಕ್ಕೊಟ್ಟು, ಉಪಸ್ಥಿತರಿದ್ದರು.
*ಮಂಗಳೂರಿನಲ್ಲಿ ಬಿಜೆಪಿ ಮುಖಂಡರು ಎರಡು ಲಕ್ಷ ಮತಗಳ ಅಂತರದ ಗೆಲವು ಎನ್ನುತ್ತಿದ್ದು ಉಳ್ಳಾಲದಲ್ಲಿ ಪ್ರಮುಖರು ಮೂರು ಲಕ್ಷ ಅಂತರ ಹೇಳುತ್ತಿದ್ದು ಬಿಜೆಪಿ ಸರಿಯಾದ ಆಂತರಿಕ ಸಮೀಕ್ಷೆ ಏನು ಹೇಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂತೋಷ್ ಬೋಳಿಯಾರ್ ಸಮೀಕ್ಷೆಗಳು ರಾತ್ರಿ ದಿನಬೆಳಗಾಗುವುದರೊಳಗೆ ಬದಲಾಗುತ್ತಿರುವುದನ್ನು ಗಮನಿಸಬೇಕು ಎಂದರು.
*ಖಾದರ್ ಅವರು ಉಳ್ಳಾಲ ತಾಲೂಕು ತಂದಿರುವುದು ಸಂತಸದ ವಿಷಯ, ಕೇಂದ್ರ ಮಾತ್ರ ಎಲ್ಲರಿಗೂ ಅನುಕೂಲವಾಗುವ ಜಂಕ್ಷನ್ ನಲ್ಲಿದ್ದರೆ ನಮ್ಮ ಸಹಮತವಿದೆ.
ಸಂತೋಷ್ ಬೋಳಿಯಾರ್
ಮೋಹನ್ ರಾಜ್ ಕೆ.ಆರ್