Site icon Ullalavani

ಕೊಣಾಜೆ : ಕುಂಬ್ಳೆ, ಗೋಡೆ ಅವರಿಗೆ ಯಕ್ಷಮಂಗಳ ಪ್ರಶಸ್ತಿ ಪ್ರದಾನ

UN NETWORKS

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2018-19ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ ಕುಂಬ್ಳೆ ಸುಂದರ ರಾವ್‌ ಹಾಗೂ ಬಡಗುತಿಟ್ಟಿನ ಹಿರಿಯ ವೇಷಧಾರಿ ಗೋಡೆ ನಾರಾಯಣ ಹೆಗಡೆ ಹಾಗೂ ಕೃತಿ ಪ್ರಶಸ್ತಿಯನ್ನು ವಿದ್ವಾಂಸ ಪ್ರೊ| ಜಿ.ಎಸ್‌. ಭಟ್ಟ ಸಾಗರ ಅವರ “ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ’ ಕೃತಿಗೆ ನೀಡಿ ಗೌರವಿಸಲಾಯಿತು. ಮಂಗಳೂರು ವಿ.ವಿ.ಯ ಮಂಗಳ ಸಭಾಂಗಣದಲ್ಲಿ ಪ್ರಭಾರ ಕುಲಪತಿ ಪ್ರೊ| ಕಿಶೋರಿ ನಾಯಕ್‌ ಕೆ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಪ್ರೊ| ಎಂ.ಎಲ್‌. ಸಾಮಗ ಅಭಿನಂದನ ಭಾಷಣ ಮಾಡಿದರು. ಕುಂಬ್ಳೆ ಸುಂದರ ರಾವ್‌ ಶಾಸಕರಾಗಿದ್ದ ಸಂದರ್ಭ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಆರಂಭಗೊಂಡಿತ್ತು. ಕಲಾವಿದರಾಗಿ ಅವರದು ಮಹಾ ಸಾಧನೆಯಾಗಿದೆ. ಅವರ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಈಗಲೂ ಭದ್ರವಾಗಿ ನೆಲೆನಿಂತಿವೆ. ಗೋಡೆಯವರು ತನ್ನದೇ ಆದ ಪ್ರತ್ಯೇಕ ಶೈಲಿಯನ್ನು ಸ್ಥಾಪಿಸಿದವರು. ಕುಣಿತ, ನಿಲ್ಲುವ, ವಿಶಿಷ್ಟ ಅರ್ಥಗಾರಿಕೆಯ ಮೂಲಕ ಮೇರು ಕಲಾವಿದ ಅನಿಸಿಕೊಂಡವರು. ಡಾ| ಜಿ.ಎಸ್‌. ಭಟ್‌ ಅವರು ಯಕ್ಷಗಾನವನ್ನೇ ಕೇಂದ್ರವಾಗಿರಿಸಿಕೊಂಡ ವಿದ್ವಾಂಸರು ಎಂದರು.

ಡಾ| ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಯಾಗಿದ್ದರು. ಡಾ| ಧನಂಜಯ ಕುಂಬ್ಳೆ ಸ್ವಾಗತಿಸಿದರು. ಸಮ್ಮಾನ ಪತ್ರವನ್ನು ನಮಿರಾಜ್‌, ದಿವ್ಯಾ ಸಾಲಿಯಾನ್‌, ನಮಿತಾ ವಾಚಿಸಿದರು. ಡಾ| ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು. ಸತೀಶ್‌ ಕೊಣಾಜೆ ವಂದಿಸಿದರು.

Exit mobile version