Site icon Ullalavani

ನರಿಂಗಾನದಲ್ಲಿ ಜಾಗೃತಿ ಜಾಥದೊಂದಿಗೆ ವಿಶ್ವ ಮಹಿಳಾ ದಿನಾಚರಣೆ

UN NETWORKS

ನರಿಂಗಾನ: ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯಿತಿನಲ್ಲಿ ಜಾಗೃತಿ ಜಾಥದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.

ನರಿಂಗಾನ ಗ್ರಾಮ ಪಂಚಾಯಿತಿ, ಜನಶಿಕ್ಷಣ ಟ್ರಸ್ಟ್, ಸುಗ್ರಾಮ ಜಾಗೃತಿ ವೇದಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಜಾಗೃತಿ ಜಾಥದೊಂದಿಗೆ ಆರಂಭವಾಯಿತು. ಪಂಚಾಯಿತಿ ವಠಾರ ಮತ್ತು ಪೊಟ್ಟೋಳಿಕೆ ಜನವಸತಿ ಪ್ರದೇಶದಲ್ಲಿ ಸಾಗಿದ ಜಾಗೃತಿ ಜಾಥದಲ್ಲಿ ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ, ಗ್ರಾಮ ಸ್ವಚ್ಛತೆ, ಮತದಾನದ ಮಹತ್ವದ ಕುರಿತ ಘೋಷಣೆ, ಭಿತ್ತಿಪತ್ರಗಳ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಳಿನಾಕ್ಷಿ ಮಹಿಳೆಯರು ಜಾಗೃತರಾಗಿ ತಮ್ಮ ಹಕ್ಕುಗಳ ರಕ್ಷಣೆ, ಮಕ್ಕಳ ಶಿಕ್ಷಣ, ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವಾವಲಂಬನೆಯಿಂದ ಬದುಕುವ ಸಂಕಲ್ಪ ಮಾಡಿ ಕಾರ್ಯ ಸಾಧಿಸಲು ಸಿದ್ಧರಾಗಬೇಕು ಎಂದರು.

ಮಹಿಳಾ ಸಾಧಕಿಯರ ಸಂವಾದ ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರುಗಳಾದ ಬೇಬಿ, ಹರಿಣಾಕ್ಷಿ, ಸೆಫಿಯಾ, ಉಷಾ, ಆದಿವಾಸಿ ಸಮುದಾಯದ ಗಿರಿಜಾ, ಬೇಬಿ ತಮ್ಮ ಕಾರ್ಯ ಸಾಧನೆ, ಸವಾಲುಗಳ ಅನುಭವಗಳನ್ನು ಹಂಚಿಕೊಂಡರು. ಅಂಗನವಾಡಿ ಮೇಲ್ವಿಚಾರಕಿ ಸಿಂಧೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಪಿ.ಡಿ.ಓ ರಜನಿ ಘನ ತ್ಯಾಜ್ಯಗಳನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಮಹಿಳೆಯರ ಸಹಕಾರ ಕೋರಿದರು. ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಸದಸ್ಯರುಗಳಾದ ಅಬ್ದುಲ್ ಲತೀಫ್, ಅಬ್ದುಲ್ ರಹಿಮಾನ್, ಅಬ್ದುಲ್ ರಜಾಕ್ ಮಹಿಳಾ ಸಾಧಕಿಯರ ಮಾತುಗಳನ್ನು ಆಲಿಸಿ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ನೀಡಿದರು. ಸಂವಾದ ನಿರ್ವಹಿಸಿದ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿ ಮಹಿಳೆಯರು ಜಾಗೃತರಾಗಿ ತಮ್ಮ ವೈಯುಕ್ತಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾ ಶೋಷಣೆಮುಕ್ತ, ತಾರತಮ್ಯಮುಕ್ತ, ತ್ಯಾಜ್ಯಮುಕ್ತ, ಆದರ್ಶ ಕುಟುಂಬ, ಮಾದರಿ ಗ್ರಾಮ ನಿರ್ಮಾಣ ಕಾರ್ಯದ ನೇತೃತ್ವ ವಹಿಸಲು ಸಿದ್ಧರಾಗಬೇಕೆಂದರು. ಮಹಿಳಾ ದಿನಾಚರಣೆಯ ಕುರಿತು ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಕೃಷ್ಣ ಮೂಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಂಯೋಜಕಿ ಕಾವೇರಿ ಮಹಿಳಾ ಜಾಗೃತಿ ಗೀತೆ ಹಾಡಿದರು. ಸಂಯೋಜಕ ಚೇತನ್ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆಯರು ರೋಶನಿ ನಿಲಯ, ಸೈಂಟ್ ಆಲೋಶಿಯಸ್ ಸಮಾಜ ಕಾರ್ಯ ಕಾಲೇಜಿನ ವಿದ್ಯಾರ್ಥಿಗಳು ಸಂಯೋಜನೆಗೆ ಸಹಕರಿಸಿದರು.

Exit mobile version