UN NETWORKS
ಪಾತೂರು: ಪಾತೂರು ಶ್ರೀ ಸೂರ್ಯೇಶ್ವರ ದೇಗುಲದಲ್ಲಿ ಶಿವರಾತ್ರಿ ಮಹೋತ್ಸವ, ಸೂರ್ಯೇಶ್ವರ ಕಲಾವೃಂದದ ವಾರ್ಷಿಕೋತ್ಸವ ಸುವರ್ಣ ಸಂಭ್ರಮ, ಸ್ಮರಣ ಸಂಚಿಕೆ ಮುಖಪುಟ ಅನಾವರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸೋಮವಾರ ನಡೆಯಿತು.
ಇದೇ ಸಂದರ್ಭದಲ್ಲಿ ಸೂರ್ಯೇಶ್ವರ ಕಲಾವೃಂದದ ಸುವರ್ಣ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು. ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಪಾತೂರು ಸೂರ್ಯೇಶ್ವರ ಮತ್ತು ಬಜಿಲಾಡಿ ಮಹಿಷಮರ್ಧಿನಿ ಕ್ಷೇತ್ರದ ಮೊಕ್ತೇಸರರಾದ ಬಾಕ್ರಬೈಲ್ ಮಂಜುನಾಥ ಶೆಟ್ಟಿ ಅವರು ಉದ್ಘಾಟಿಸಿದರು.ಹಿರಿಯ ಸಾಹಿತಿಗಳಾದ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು ಸ್ಮರಣ ಸಂಚಿಕೆಯ ಮುಖಪುಟ ಅನಾವರಣಗೊಳಿಸಿ ಮಾತನಾಡಿ, ಸಂಘ ಸಂಸ್ಥೆಗಳು ಹಲವಾರು ಇರುತ್ತವೆ. ಆದರೆ 50 ವರ್ಷ ಪೂರೈಸಿದ ಸಂಘ ಸಂಸ್ಥೆಗಳು ಇರುವುದು ಬಹಳ ಕಡಿಮೆ. ಸೂರ್ಯೇಶ್ವರ ಕಲಾವೃಂದವು 50 ವರ್ಷವನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸಂಘ ಸಂಸ್ಥೆಗಳ ಅಗತ್ಯತೆ ಇದ್ದು ಧರ್ಮಜಾಗೃತಿಯ ಜೊತೆಗೆ ಸಾಮಾಜಿಕ ಜಾಗೃತಿ ಸಂಘ ಸಂಸ್ಥೆಗಳಿಂದ ನಡೆಯಬೇಕು ಎಂದು ಹೇಳಿದರು.
ಶ್ರೀ ಸೂರ್ಯೇಶ್ವರ ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಮಲಾರು ಬೀಡು ರವೀಂದ್ರನಾಥ ಆಳ್ವ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ್ ಕಾಮತ್, ಇತಿಹಾಸ ತಜ್ಞ ಡಾ.ಪುಂಡಿಕಾಯಿ ಗಣಪತಿ ಭಟ್, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಟ್ರಸ್ಟ್ ನ ಕೋಶಾಧಿಕಾರಿ ಕುಶಲಕುಮಾರ ಪಾತೂರಾಯ ಪಾತೂರು ಬೀಡು, ಇರಾ ನೇಮು ಪೂಜಾರಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ಫ್ರೆಂಡ್ಸ್ ಬಾಕ್ರಬೈಲ್ ಇವರ ಪ್ರಾಯೋಜಕತ್ವದಲ್ಲಿ ಭಕ್ತಿ ರಸಮಂಜರಿ ಹಾಗೂ ಸೂರ್ಯೇಶ್ವರ ಕಲಾವೃಂದದ ಸದಸ್ಯರಿಂದ ಪಕಳ ಕಂಠಿ ತುಳು ಹಾಸ್ಯಮಯ ನಾಟಕ ನಡೆಯಿತು.