Site icon Ullalavani

ಶೈಕ್ಷಣಿಕ ದತ್ತು ಸ್ವೀಕಾರ ಶ್ಲಾಘನೀಯ ಕಾರ್ಯ: ಪದ್ಮನಾಭ ಕೋಟ್ಯಾನ್

ಉಳ್ಳಾಲ್ ನ್ಯೂಸ್ ಡೆಸ್ಕ್

ಉಳ್ಳಾಲ : ಉಳ್ಳಾಲ ವ್ಯಾಪ್ತಿಯ ೨೩ ಗ್ರಾಮಗಳಿಂದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಶೈಕ್ಷಣಿಕ ದತ್ತು ಸ್ವೀಕಾರದಂತಹ ಕಾರ್ಯ ಶ್ಲಾಘನೀಯವಾಗಿದ್ದು, ಈ ವೇದಿಕೆಯ ಮೂಲಕ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವ ಕಾರ್ಯ ಆಗಬೇಕು ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟುವಿನ ಕ್ಲಿಕ್ ಸಭಾಂಗಣದಲ್ಲಿ ನಡೆದ ಬ್ರಹ್ಮ ಶ್ರೀ ಬಿಲ್ಲವ ಯುವ ವೇದಿಕೆ ಕೇಂದ್ರ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ೧೩ನೇ ವರ್ಷದ ಅರ್ಹ ಬಡ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪಿಕಾಡು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ್ ಉಳ್ಳಾಲ್ ವಹಿಸಿದ್ದರು.
ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೂಕಾಂಬಿಕ ಕನ್ಸ್ಟ್ರಕ್ಷನ್ನ ಮಾಲಕ ಚಂದ್ರಹಾಸ್ ಪಂಡಿತ್ಹೌಸ್, ಬ್ರಹ್ಮ ಶ್ರೀ ಬಿಲ್ಲವ ಯುವ ವೇದಿಕೆ ಉಳ್ಳಾಲ ಇದರ ಗೌರವಾಧ್ಯಕ್ಷ ಕೆ.ಟಿ.ಸುವರ್ಣ, ಉಪಾಧ್ಯಕ್ಷ ಸತೀಶ್ ಕರ್ಕೇರ, ಕೋಶಾಧಿಕಾರಿ ಲಕ್ಷ್ಮಣ್ ಸೋಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಮಾರು ೫೦ ವಿದ್ಯಾರ್ಥಿಗಳ ದತ್ತು ಸ್ವೀಕಾರ ನಡೆಯಿತು. ಸುಮಾರು ೧೦೦ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆಯ ಪ್ರ. ಕಾರ್ಯದರ್ಶಿ ಹರೀಶ್ ಮುಂಡೋಳಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಆನಂದ ಅಸೈಗೋಳಿ ವಂದಿಸಿದರು.

Exit mobile version