Site icon Ullalavani

ಕಲೆಗೆ ಮಂತ್ರ ನಾಟ್ಯಕಲಾ ಗುರುಕುಲ ಕೊಡುಗೆ ಅಪಾರ : ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್

UN NETWORKS

ಉಳ್ಳಾಲ: ಕಲೆಗೆ ಮಂತ್ರ ನಾಟ್ಯಕಲಾ ಗುರುಕುಲದ ಕೊಡುಗೆ ಅಪಾರ, ದೇವರ ಅನುಗ್ರಹದಿಂದ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶಾಂತಲಾ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.

ಅವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೋಮವಾರ ನಡೆದ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಇದರ ಆರನೇ ವರ್ಷದ ಗುರುಕುಲ ಉತ್ಸವಕ್ಕೆ ಚಾಲನೆ ಮತ್ತು ಕಥಕ್ ಕಲಾವಿದೆ ಸಂಗೀತ ನಾಟಕ್ ಅಕಾಡೆಮಿ ಪುರಸ್ಕೃತೆ ಉಮಾ ದೋಗ್ರ ಇವರಿಗೆ ನಾಟ್ಯ ಮಾಂತ್ರಿಕ ಬಿರುದು ಪ್ರಧಾನ ಮಾಡಿ ಮಾತನಾಡಿದರು. ನಾಟ್ಯ ಮಾಂತ್ರಿಕ ಬಿರುದು ಪಡೆದ ಕಥಕ್ ಕಲಾವಿದೆ ಉಮಾ ದೋಗ್ರಾ ಮಾತನಾಡಿ ಬಡ ಕುಟುಂಬದಿಂದ ಬಂದಾಕೆ. ಎಂಟು ಮಕ್ಕಳಿದ್ದರೂ ಹೆತ್ತವರು ಕಲೆ ಮತ್ತು ಶಿಕ್ಷಣದ ಕೊರತೆ ಮಾಡದೇ ಇರುವುದರಿಂದ ಇಂದು ರಾಷ್ಟ್ರಪತಿಯಿಂದ ಸನ್ಮಾನ ಸ್ವೀಕರಿಸಿದ್ದೇನೆ ಅನ್ನುವ ಹೆಮ್ಮೆಯಿದೆ. ಶ್ರಮ ವಹಿಸಿದಲ್ಲಿ ಯಶಸ್ಸು ಖಂಡಿತ. ಕನಸುಗಳನ್ನು ಬಿಟ್ಟುಕೊಡದಿರಿ. ಹೃದಯಾಂತರಾಳದ ಪ್ರೀತಿ ಮತ್ತು ಗೌರವವನ್ನು ಮಂತ್ರ ನಾಟ್ಯಕಲಾ ಗುರುಕುಲ ನೀಡಿದೆ ಎಂದರು. ಇದೇ ಸಂದರ್ಭ ಉಳ್ಳಾಲ ಮೋಹನ್ ಕುಮಾರ್ ಅವರಿಗೆ ಮಂತ್ರ ನಾಟ್ಯಕಲಾ ಗುರುಕುಲ ತಂಡದಿಂದ ಗುರುವಂದನೆ ನೆರವೇರಿಸಲಾಯಿತು.
ಸಾಧಕ ಪ್ರಶಸ್ತಿಯನ್ನು ಉಪನ್ಯಾಸಕ ಹಾಗೂ ಖ್ಯಾತ ನಿರೂಪಕ ಸುಧಾಕರ್ ರಾವ್ ಪೇಜಾವರ , ಜನಪದ ಕ್ಷೇತ್ರದಲ್ಲಿ ಸಾಧನೆಗೈದ ಉಪನ್ಯಾಸಕಿ ಡಾ. ಲಕ್ಷ್ಮೀ ಜೆ.ಪ್ರಸಾದ್ ಇವರಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಾಡುಗಾರಿಕೆ ವಿದೂಷಿ ಶೀಲಾ ದಿವಾಕರ್, ಮೃದಂಗ ಕಲಾವಿದ ವಿದ್ವಾನ್ ಬಾಲಚಂದ್ರ ಭಾಗವತ್, ಕೊಳಲು ಕಲಾವಿದ ವಿದ್ವಾನ್ ಮುರಳೀಧರ್ ಕುಂಜಿಬೆಟ್ಟು ಎಂಬವರನ್ನು ಸನ್ಮಾನಿಸಲಾಯಿತು. ಹೈದರಾಬಾದಿನ ಜಿ.ರವಿ ಇವರಿಂದ ಕೂಚುಪುಡಿ ನೃತ್ಯ ನಡೆಯಿತು.
ಕೊನೆಯಲ್ಲಿ ಮಂತ್ರ ನಾಟ್ಯಕಲಾ ಗುರುಕುಲದ ವಿದ್ವಾನ್ ಶ್ರವಣ್ ಉಳ್ಳಾಲ ಶಿಷ್ಯರಿಂದ ` ನಾಟ್ಯ ಮಂತ್ರಂ’ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂತ್ರ ನಾಟ್ಯಕಲಾ ಗುರುಕುಲ ಅಧ್ಯಕ್ಷೆ ಶಕೀಲಾ ಜನಾರ್ದನ್ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಹಾಗೂ ನೃತ್ಯ ನಿರ್ದೇಶಕ ವಿದ್ವಾನ್ ಶ್ರವಣ್ ಉಳ್ಳಾಲ್, ಕಾರ್ಯದರ್ಶಿ ಕಿರಣ್ ಉಳ್ಳಾಲ್, ಟ್ರಸ್ಟೀಗಳಾದ ಶೈನಾ ಶ್ರವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು. ಪದ್ಮಿನಿ ಪುರಸ್ಕೃತರ ವಿವರ ನೀಡಿದರು.

Exit mobile version