Site icon Ullalavani

ಜ.27: ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಲಿಟ್ಲ್ ಚ್ಯಾಂಪ್ ಫಿನಾಲೆ

UN NETWORKS

ತೊಕ್ಕೊಟ್ಟು: ಆದಿ ಕ್ರಿಯೇಷನ್ಸ್ ಪ್ರಸ್ತುತ ಪಡಿಸಿದ ಅಬ್ಬಕ್ಕ ಟಿ.ವಿ ಪ್ರಸಾರದ ಲಿಟ್ಲ್ ಚ್ಯಾಂಪ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಮತ್ತು ಅಬ್ಬಕ್ಕ ಟಿವಿ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರಧಾನ ಸಮಾರಂಭ ಜ.27 ಭಾನುವಾರ ಸಂಜೆ 5.30 ಕ್ಕೆ ತೊಕ್ಕೊಟ್ಟು ಅಂಬೇಡ್ಕರ್ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ನಿರ್ದೇಶಕ ಪ್ರಕಾಶ್ ಸಿಂಫೋನಿ ತಿಳಿಸಿದ್ದಾರೆ.

ದೇರಳಕಟ್ಟೆ ಅಬ್ಬಕ್ಕ ಟಿ.ವಿ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. 2018 ಜನವರಿಯಲ್ಲಿ ಆರಂಭಗೊಂಡ ಆಡಿಶನ್ ಮೂರು ಸುತ್ತುಗಳನ್ನು ದಾಟಿ ಇದೀಗ ನೃತ್ಯ ಸ್ಪರ್ಧೆಯ ಅಂತಿಮ ಹಣಾಹಣಿ ನಡೆಯಲಿದೆ. 46 ಸ್ಪರ್ಧಿಗಳ ಪೈಕಿ 17 ಪ್ರತಿಭೆಗಳು ಫೈನಲ್ ನಲ್ಲಿ ಭಾಗವಹಿಸುತ್ತಿವೆ ಎಂದರು. ಅಬ್ಬಕ್ಕ ಟಿ.ವಿ ನಿರ್ದೇಶಕ , ಶಶಿಧರ್ ಪೊಯ್ಯತ್ತಬೈಲ್ ಮಾತನಾಡಿ 6ನೇ ವಾರ್ಷಿಕೋತ್ಸವದ ಸಂದರ್ಭ ಹೆಸರಾಂತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಇವರಿಗೆ ಅಬ್ಬಕ್ಕ ಟಿ.ವಿ ಪ್ರಶಸ್ತಿ, ಸ್ವಾವಲಂಬಿ ಮಹಿಳೆ ಕುಸುಮಾ ಹೆಚ್.ದೇವಾಡಿಗ, ಪಾರಂಪರಿಕ ವೈದ್ಯರಾದ ಬ್ರ.ಎಲ್ಡೋ, ಯಕ್ಷಗಾನ ಕಲಾವಿದೆ ವಸುಂಧರಾ ಹರೀಶ್, ಶಿಕ್ಷಣ ಕ್ಷೇತ್ರದಲ್ಲಿ ಸಚಿನ್ ಗಟ್ಟಿ ಪೊಯ್ಯತ್ತಬೈಲ್, ಕ್ರೀಡಾ ಕ್ಷೇತ್ರದಲ್ಲಿ ಪಿ.ಪ್ರಿಯದರ್ಶಿನಿ, ಮಾಧ್ಯಮಕ್ಷೇತ್ರದಲ್ಲಿ ಉದಯವಾಣಿ ವರದಿಗಾರ ವಸಂತ ಕೊಣಾಜೆ ಇವರಿಗೆ ಪುರಸ್ಕಾರ ಪ್ರಧಾನವಾಗಲಿದೆ.

ನಟಿ ಕರೀಷ್ಮಾ ಅಮೀನ್ ಹಾಗೂ ನ್ಯಾಯವಾದಿ ಗಂಗಾಧರ್ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ| ಎ.ಜೆ ಶೆಟ್ಟಿ, ಫಾ| ಜೆ.ಬಿ ಸಲ್ದಾನ, ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್, ಸಚಿವ ಯು.ಟಿ.ಖಾದರ್ , ಸಂಸದ ನಳಿನ್ ಕಟೀಲ್, ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.ಸುದ್ಧಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಸುಪ್ರೀತ್ ಭಂಡಾರಿ,ಲಿಟ್ಲ್ ಚ್ಯಾಂಪ್ ನಿರ್ದೇಶಕಿ ಸವಿತಾ ಜಗದೀಶ್ ಮುಡಿಪು,  ಮಿಥುನ್ ಶೆಟ್ಟಿ, ಸುಧೀರ್ ಶೆಟ್ಟಿ, ಶರ್ಮಿಳಾ ದಿಲೀಪ್ ಉಪಸ್ಥಿತರಿದ್ದರು.

Exit mobile version