Site icon Ullalavani

ತೊಕ್ಕೊಟ್ಟು: ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿದಾಯ ಸಮಾರಂಭ

UN NETWORKS

ತೊಕ್ಕೊಟ್ಟು: ಶಿಕ್ಷಣ ಸಂಸ್ಥೆಯಲ್ಲಿ ಕರುಣೆಯ ಹಾದಿಯ ಜೊತೆಗೆ ಶಿಸ್ತು, ನೈತಿಕ ಬೋಧನೆಯನ್ನು ಬೋಧಿಸಿದ ದೈಹಿಕ ಶಿಕ್ಷಕ ಉರ್ಬಾನ್ ಮಸ್ಕರೇನಸ್ ಅವರ ಕಾರ್ಯವೈಖರಿ ಸ್ಮರಣೀಯ ಎಂದು ಸಂತ ಸೆಬೆಸ್ತಿಯನ್ನರ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಡಾ.ಜೆ. ಬಿ ಸಲ್ದಾನ್ಹ ಅಭಿಪ್ರಾಯಪಟ್ಟರು.

ಅವರು ಸಂತ ಸೆಬೆಸ್ತಿಯನ್ನರ ಅನುದಾನಿತ ಪ್ರೌಢಶಾಲೆ ಪೆರ್ಮನ್ನೂರು ಇಲ್ಲಿ ಶಿಕ್ಷ ಣ ಕ್ಷೇತ್ರದಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ, ವಯೋ ನಿವೃತ್ತಿಯಾದ ದೈಹಿಕ ಶಿಕ್ಷಣ ಶಿಕ್ಷಕ ಉರ್ಬನ್ ಮಸ್ಕರೇನಸ್ ಇವರಿಗೆ ಶಾಲಾ ವತಿಯಿಂದ ಹಮ್ಮಿಕೊಳ್ಳಲಾದ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಜೀವನವನ್ನೇ ವಿದ್ಯಾರ್ಥಿಗಳಿಗೆ ಸಮರ್ಪಿತವಾಗಿ ಜೀವಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.ದೇವರು ಕೊಟ್ಟ ಅಂತ:ಕರಣದ ಮೂಲಕ ನೈತಿಕ ಬೋಧನೆಯ ಜತೆಗೆ ಸತ್ಯದ ದಾರಿಯಲ್ಲಿ ನಡೆದವರು. ವಿದ್ಯಾರ್ಥಿಗಳಿಗೆ ಕರುಣೆ ತೋರಿಸಿ ವೃತ್ತಿ ಜೀವನ ನಡೆಸಿದವರಾಗಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಕಟಪೂರ್ವ ಪ್ರಾಂಶುಪಾಲ ಫಾ. ಕ್ಲೆಮೆಂಟ್ ಮಸ್ಕರೇನಸ್ ಮಾತನಾಡಿ, ದೈಹಿಕ ಶಿಕ್ಷಕ ಉರ್ಬಾನ್ ಮಸ್ಕರೇನಸ್ ಅವರು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಪ್ರಾಮಾಣಿಕ ವ್ಯಕ್ತಿ. ಪ್ರಾರ್ಥನಾ ಮನೋಭಾವದಿಂದ ಕೃತಾರ್ಥ ಜೀವನ ನಡೆಸಿಕೊಂಡವರು. ಪ್ರೀತಿಪೂರ್ವಕ ಒಡನಾಟ ಇಟ್ಟುಕೊಂಡವರು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉರ್ಬನ್ ಮಸ್ಕರೇನಸ್, ಕುಟುಂಬ , ಶಾಲಾ ಆಡಳಿತ ಸಮಿತಿ ಹಾಗೂ ಸಹೋದ್ಯೋಗಿಗಳ ಸಹಾಯದಿಂದ ಯಶಸ್ವಿಯಾಗಿ ಕರ್ತವ್ಯ ನಿಭಾಯಿಸಲು ಸಾಧ್ಯವಾಗಿದೆ. ಶಾಲಾ ವಿದಾಯ ಸಮಾರಂಭ ಜೀವನದಲ್ಲಿ ಅವಿಸ್ಮರಣೀಯ ಎಂದರು.

ಈ ಸಂದರ್ಭ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಮಂಗಳೂರು ದಕ್ಷಿಣ ವಲಯ ವಿಷ್ಣು.ಎನ್ ಹೆಬ್ಬಾರ್, ಮಂಗಳೂರು ದಕ್ಷಿಣ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ, ಶಾಲಾ ಮುಖ್ಯೋಪಾಧ್ಯಾಯ ರೇಮಂಡ್ ಡಿಸೋಜ ಉಪಸ್ಥಿತರಿದ್ದರು. ಸಂತ ಸೆಬೆಸ್ತಿಯನ್ನರ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಅನಿತಾ ನಥಾಯಸ್ , ಹೋಲಿ ಏಂಜೆಲ್ಸ್ ಕನ್ನಡ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಸೆವರೀನ್ ಫೆರ್ನಾಂಡಿಸ್, ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲೆ ಪ್ರಮೀಳಾ ಡಿಸೋಜ, ಸಿಆರ್ ಪಿ ಆಶಾಲತಾ ಉಪಸ್ಥಿತರಿದ್ದರು.ಶಿಕ್ಷಕ ಸಿರಿಲ್ ವೇಗಸ್ ಸ್ವಾಗತಿಸಿದರು.ಸನ್ಮಾನ ಪತ್ರವನ್ನು ಶಿಕ್ಷಕ ಬಿ.ವೆಂಕಟರಮಣ ಭಟ್ ವಾಚಿಸಿದರು. ಸ್ಟೀಫನ್ ವಂದಿಸಿದರು.

Exit mobile version