Site icon Ullalavani

ಗ್ರಾಮದ ಸಮಸ್ಯೆಗಳು ಬಗೆಹರಿದಾಗ ಜನರಿಗೆ ಪಂ.ಮೇಲೆ ಗೌರವವಿರುವುದು : ಟಿ.ಜಿ.ರಾಜಾರಾಂ ಭಟ್

UN NETWORKS

ಮುಡಿಪು: ಪಂಚಾಯಿತಿ ಜನರ ಸಮಸ್ಯೆ ಪರಿಹರಿಸಿದಾಗ ಗ್ರಾಮಸ್ಥರಿಗೆ ಪಂಚಾಯಿತಿ ಮೇಲೆ ಪ್ರೀತಿ ಇರುವುದು. ಬಿಜೆಪಿ ಆಡಳಿತವಿರುವ ಕುರ್ನಾಡು ಗ್ರಾಮ ಪಂಚಾಯಿತಿನಿಲ್ಲಿ ಅದು ಸಾಧ್ಯವಾಗಿದೆ ಎಂದು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ ರಾಜಾರಾಂ ಭಟ್ ಅಭಿಪ್ರಾಯಪಟ್ಟರು.

ಅವರು ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮ ಅಯೋಧ್ಯೆ ನಗರದ ರಸ್ತೆ ಡಾಮರೀಕರಣಕ್ಕೆ ಸೋಮವಾರ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಗ್ರಾಮದ ಅಭಿವೃದ್ಧಿಗೆ ಕುರ್ನಾಡು ಗ್ರಾ.ಪಂ ಆಡಳಿತ ನಿರಂತರ ಶ್ರಮಿಸುತ್ತಿದೆ. ನವಗ್ರಾಮ ಸೈಟುಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದಿನ ಜಿ.ಪಂ ಸದಸ್ಯರು ಹಾಗೂ ಕುರ್ನಾಡು ಪಂ. ಆಡಳಿತ ಸಫಲವಾಗಿದೆ. ಗೇಲ್ ಸಂಸ್ಥೆ ಯಿಂದಲೂ ಪ್ರದೇಶಕ್ಕೆ 20 ಲಕ್ಷ ರೂ.ಗಳಲ್ಲಿ ರಸ್ತೆ ನಿರ್ಮಿಸಿ ಕೊಡುವ ಭರವಸೆ ದೊರೆತಿದೆ ಎಂದರು.

ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ಬೋಳಿಯಾರ್ ಮಾತನಾಡಿ, ಪಂಚಾಯಿತಿ ಆಡಳಿತ ಅಭಿವೃದ್ಧಿಯ ಚಿಂತನೆಯಿಂದಾಗಿ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಪರ ಕಾರ್ಯಗಳು ನಡೆದಿವೆ. ನವಗ್ರಾಮ ಅಯೋಧ್ಯೆನಗರದಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಶೀಘ್ರದಲ್ಲೇ ದೇವಸ್ಥಾನದ ನಿರ್ಮಾಣವೂ ಆಗಲಿದೆ. ಪ್ರದೇಶಕ್ಕೆ ಪ್ರಮುಖ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್ ನಿರಂತರವಾಗಿ ಪೂರೈಕೆಯಾದಲ್ಲಿ ಅದು ರಾಮರಾಜ್ಯ ಆಗಲು ಸಾಧ್ಯ ಎಂದರು.

ಈ ಸಂದರ್ಭ ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಉಪಾಧ್ಯಕ್ಷ ನಿತಿನ್ ಗಟ್ಟಿ ಸದಸ್ಯರುಗಳಾದ ಶಿವಶಂಕರ್ ಭಟ್, ಗೀತಾ, ಗೋಪಾಲ ಬಂಗೇರ, ಗುತ್ತಿಗೆದಾರ ನವೀನ್ ಕುಮಾರ್ ಶೆಟ್ಟಿ ಕೊಡಕ್ಕಲ್, ಸ್ಥಳೀಯರಾದ
ಉಮೇಶ್ ಆಚಾರ್ಯ, ಆನಂದ್, ಸುಂದರ್, ರೇವತಿ, ಸ್ನೇಹ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಸಂತೋಷ್ ಉಪಸ್ಥಿತರಿದ್ದರು.

Exit mobile version