Site icon Ullalavani

ಮಂಗಳೂರಿನ ಪ್ರಪ್ರಥಮ ಸುಸಜ್ಜಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ತಲಪಾಡಿಯಲ್ಲಿ ಜ.13 ಕ್ಕೆ ಲೋಕಾರ್ಪಣೆ

UN NETWORKS

ತಲಪಾಡಿ: ನಗರದ ಪ್ರಥಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಜ. 13ರಂದು ತಲಪಾಡಿ ದೇವಿನಗರದಲ್ಲಿರುವ ಶಾರದಾ ಆಯುರ್ಧಾಮ ಕ್ಯಾಂಪಸ್‍ನಲ್ಲಿ ನಡೆಯಲಿದೆ ಎಂದು ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.

ತಲಪಾಡಿ ದೇವಿನಗರದ ಶಾರದಾ ಆಯುರ್ಧಾಮದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆ ಉದ್ಘಾಟಿಸಲಿದ್ದಾರೆ. . ಮಂಗಳೂರು ಕೆಎಂಸಿಯ ಮಾಜಿ ಪ್ರಾಚಾರ್ಯ ಡಾ.ಕೆ.ಆರ್.ಶೆಟ್ಟಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಮಾತನಾಡಿ, ಭಾರತೀಯ ವೈದ್ಯಪದ್ಧತಿಯ ಸಮಗ್ರ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸುಸಜ್ಜಿತ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೊರತೆ ಇರುವುದನ್ನು ಮನಗಂಡ ತುಳುನಾಡು ಎಜ್ಯುಕೇಶನ್ ಟ್ರಸ್ಟ್ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ ಎಂದು ವಿವರಿಸಿದರು.
ಪ್ರಕೃತಿ ಚಿಕಿತ್ಸೆಯು ಆಧುನಿಕ ವೈದ್ಯವಿಧಾನದ ಹಲವು ದೃಷ್ಟಿಕೋನ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳನ್ನು ಸೇರಿಸಿಕೊಂಡಿದ್ದು, ಸೂಜಿಚಿಕಿತ್ಸೆಯಿಂದ ಹಿಡಿದು ಗಿಡಮೂಲಿಕೆ, ಪೌಷ್ಟಿಕತೆಯಂಥ ಅಂಶಗಳನ್ನೂ ಸಮಗ್ರವಾಗಿ ಒಳಗೊಂಡಿದೆ. ಪ್ರಕೃತಿ ಚಿಕಿತ್ಸೆಯ ದೃಷ್ಟಿ ನಿರ್ದಿಷ್ಟ ರೋಗವನ್ನು ಗುಣಪಡಿಸುವುದು ಮಾತ್ರವಲ್ಲದೇ ಇಡೀ ವ್ಯಕ್ತಿಯ ಸಮಗ್ರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡುವುದಾಗಿದೆ. ಅಸ್ವಸ್ಥತೆಯ ಮೂಲ ಕಾರಣವನ್ನು ಪತ್ತೆ ಮಾಡಿ ವ್ಯಕ್ತಿಯ ಸಾಮಾನ್ಯ ಸುಕ್ಷೇಮ ಮತ್ತು ಸ್ವಾಸ್ಥ್ಯವನ್ನು ಸುಧಾರಿಸುವಂತೆ ಮಾಡುವುದು ಈ ಚಿಕಿತ್ಸಾ ವಿಧಾನದ ವಿಶೇಷ.

ರಾಸಾಯನಿಕ ಹಾಗೂ ಕೀಟನಾಶಕಯುಕ್ತವಾದ ಆಹಾರ ಸೇವನೆ, ಹೆಚ್ಚುತ್ತಿರುವ ಮಾಲಿನ್ಯ ಹಾಗೂ ಜಾಗತಿಕ ತಾಪಮಾನದ ಕಾರಣದಿಂದ ಜನರ ಸಾಮಾನ್ಯ ಆರೋಗ್ಯಸ್ಥಿತಿಗೆ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯಂಥ ನಿಸರ್ಗದತ್ತವಾದ ವಿಧಾನಗಳು ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದಿವೆ.ತಲಪಾಡಿಯಿಂದ ಅನತಿ ದೂರದ ದೇವಿನಗರದ ಸ್ವಚ್ಛ, ಸುಂದರ ಪರಿಸರದಲ್ಲಿ ಈ ಸುಸಜ್ಜಿತ ಕೇಂದ್ರ ಅಭಿವೃದ್ಧಿಪಡಿಸಲಾಗಿದೆ. ಉಪವಾಸ ಹಾಗೂ ಪಥ್ಯ ಚಿಕಿತ್ಸೆ, ಮಣ್ಣು ಚಿಕಿತ್ಸೆ, ಹೈಡ್ರೊಥೆರಪಿ, ಮಸಾಜ್ ಥೆರಪಿ, ಅಕ್ಯುಪಂಕ್ಚರ್, ಕ್ರೊಮೊಥೆರಪಿ, ಆಯಸ್ಕಾಂತ ಚಿಕಿತ್ಸೆ, ಯೋಗ ಚಿಕಿತ್ಸೆ, ಫಿಜಿಯೊಥೆರಪಿಯಂಥ ಸೌಲಭ್ಯಗಳು ಇಲ್ಲಿವೆ. ಅನೀಮಿಯಾ, ಆ್ಯಸಿಡಿಟಿ ಸಂಬಂಧಿತ ರೋಗಗಳು, ಶ್ವಾಸಕೋಶದ ಆಸ್ತಮಾ, ಅಲರ್ಜಿ, ಉದ್ವೇಗ, ಬೆಲ್ಸ್ ಪಾಲ್ಸಿ (ಪಾಶ್ರ್ವವಾಯು), ಬೆನ್ನು ನೋವು, ಕತ್ತು ನೋವು (ಸೆರ್ವಿಕಲ್ ಸ್ಪಾಂಡಿಲೋಸಿಸ್), ಮಧುಮೇಹ, ಚರ್ಮರೋಗ, ಖಿನ್ನತೆ, ಇಸುಬು, ಭುಜದ ಸಮಸ್ಯೆ, ಸಂಧಿವಾತ, ಮೂತ್ರಕೋಶದ ಕಲ್ಲು, ಅಧಿಕ ರಕ್ತದ ಒತ್ತಡ, ಹೈಪರ್ ಟೆನ್ಷನ್, ಡಿಸ್ಕ್ ಸಮಸ್ಯೆ, ಸಂತಾನಹೀನತೆ, ಕೀಲು ನೋವು, ನಿದ್ರಾಹೀನತೆ, ಋತುಸ್ರಾವದ ಸಮಸ್ಯೆ, ಮೈಗ್ರೇನ್ ತಲೆನೋವು, ಬೊಜ್ಜು, ಎಲುಬು ಸಾಂದ್ರತೆ ಕಡಿಮೆಯಾಗುವುದು, ಸೊರಿಯಾಸಿಸ್ ಮತ್ತಿತರ ರೋಗಗಳಿಗೆ ಅತ್ಯಾಧುನಿಕ ಹಾಗೂ ಸಮಗ್ರ ಚಿಕಿತ್ಸಾ ಸೌಲಭ್ಯವನ್ನು ತಜ್ಞವೈದ್ಯರು ನೀಡುತ್ತಾರೆ.ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನದಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಇರುವ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಹಾಗೂ ಡಾ.ವಿಜಯಲಕ್ಷ್ಮಿ ರಾಜೇಶ್ ನೇತೃತ್ವದ ಅನುಭವಿ ವೈದ್ಯರು ಮತ್ತು ನುರಿತ ಚಿಕಿತ್ಸಾ ಸಹಾಯಕರ ತಂಡದ ಸೇವೆ ಲಭ್ಯವಿದೆ. ಸಂಪೂರ್ಣ ಹವಾನಿಯಂತ್ರಿತ ಹಾಗೂ ಸಾಮಾನ್ಯ ಕೊಠಡಿಗಳು, ಜನರಲ್ ವಾರ್ಡ್ ಸೇರಿದಂತೆ 100ಕ್ಕೂ ಅಧಿಕ ಬೆಡ್ ಸೇವೆ ಈ ಸುಸಜ್ಜಿತ ಕೇಂದ್ರದಲ್ಲಿದೆ.

ಸುದ್ಧಿಗೋಷ್ಠಿಯಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವಿಗಣೇಶ್, ಆಡಳಿತಾಧಿಕಾರಿ ಡಾ.ವಿವೇಕ್ ತಂತ್ರಿ ಉಪಸ್ಥಿತರಿದ್ದರು.

Exit mobile version