ತಲಪಾಡಿ: ಗ್ರಾಮೀಣ ಭಾರತದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು ಅದರೊಂದಿಗೆ ಕೃಷಿಜೀವನವೂ ಕಡಿಮೆಯಾಗುತ್ತಿದ್ದು, ಇಂದಿನ ರೋಗಯುಕ್ತ ಸಮಾಜಕ್ಕೆ ನಾವು ಸೇವಿಸುವ ವಿಷಯುಕ್ತ ಆಹಾರವೇ ಕಾರಣವಾಗಿದೆ. ಆರೋಗ್ಯಯುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಕೃಷಿಯತ್ತ ಯುವಜನರು ಆಕರ್ಷಿತರಾಗಬೇಕಾಗಿದೆ ಎಂದು ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.
ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ ಸಭಾಂಗಣದಲ್ಲಿ ಶನಿವಾರ ನಡೆದ ರೈತರ ದಿನಾಚರಣೆಯಲ್ಲಿ ಪ್ರಗತಿಪರ ರೈತ ದಂಪತಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಹಿಂದೆ ದೈನಂದಿನ ವಸ್ತುಗಳನ್ನು ನಾವೇ ಬೆಳೆಸುತ್ತಿದ್ದವು. ಪ್ರತಿಯೊಬ್ಬರ ಮನೆಯಲ್ಲೂ ಗೋ ಸಂತತಿ ಇತ್ತು. ನಮ್ಮ ಹರಿಯರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕೃಷಿಯಿಂದ ವಿಮುಖರಾಗಿಲ್ಲ ಆದ್ದರಿಂದ ಅವರು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬಾಳಿ ಬದುಕಿದ್ದರು. ಆದರೆ ಇಂದು ರೈತರಲ್ಲಿ ಕೃಷಿ ಮಾಡಿದರೆ ಲಾಭವಿಲ್ಲ ಎನ್ನುವ ಮನಸ್ಥಿತಿ ನಿರ್ಮಾಣವಾಗಿದೆ. ಪ್ರತೀ ವಸ್ತುವಿಗೆ ಅಂಗಡಿಗೆ ಹೋಗುವ ಸ್ಥಿತಿಯಿಂದ ನಾವು ವಿಷಯುಕ್ತ ಆಹಾರ ಸೇವಿಸುವಂತಾಗಿದೆ. ಈ ನಟ್ಟಿನಲ್ಲಿ ಯುವಜನತೆ ಕೃಷಯತ್ತ ಮುಖ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಶಾರದಾ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಕೃಷಿಯನ್ನು ಪಠ್ಯಕ್ರಮವಾಗಿ ಅಳವಡಿಸಿ ಮಕ್ಕಳನ್ನು ಕೃಷ ಚಟುವಟಿಕೆಯಲ್ಲಿ ತೊಡಗಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ರವೀಂದ್ರ ಪಕ್ಕಳ ಮತ್ತು ಜಯಂತಿ ಪಕ್ಕಳ ದಂಪತಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾನಿಕೇತನ ಆಡಳಿತ ಅಧಿಕಾರಿ ವಿವೇಕ್ ತಂತ್ರಿ, ಶಾರದಾ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲೆ ಸುಷ್ಮಾದಿನಕರ್, ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ. ಹಾಗೂ ಉಪ ಪ್ರಾಂಶುಪಾಲ ಮೋಹನ್ದಾಸ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕೃಷಿ ಜಾಗೃತಿಯ ಕುರಿತು ಕಿರುಚತ್ರವನ್ನು ಪ್ರದರ್ಶಿಸಲಾಯಿತು. ಕನ್ನಡ ಅಧ್ಯಾಪಕಿ ವೇದಾವತಿ ಸ್ವಾಗತಿಸಿದರು. ಸಮ್ಮಾನಿತರ ವ್ಯಕ್ತಿ ಪರಿಚಯವನ್ನು ಕೃಷಿ ಮೇಲ್ವಿಚಾರಕ ಹರೀಶ್ ನೀಡಿದರು. ಶಿಕ್ಷಕಿ ಶರ್ಮಿಳ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ವೀಕ್ಷಿತಾ ವಂದಿಸಿದರು.
ಹಿಂದಿನ ಕಾಲದಲ್ಲಿ ಮನೆಯ ಕಪಾಟಿನಲ್ಲಿ ತುಪ್ಪ, ಉಪ್ಪಿನಕಾಯಿ, ಹಪ್ಪಳ ಸಂಡಿಗೆ ಸೇರಿದಂತೆ ತಿನ್ನುವ ಪದಾರ್ಥವನ್ನು ಇಡಲಾಗುತ್ತಿತ್ತು. ಆದರೆ ಇಂದು ಅದೇ ಕಪಾಟಿನಲ್ಲಿ ವಿವಿಧ ರೋಗಗಳಿಗೆ ಸಂಬಂಧಿಸಿದ ಔಷಧಿಗಳು, ಮಾತ್ರೆಗಳು ಕಂಡು ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ನಾವು ಸಾಂಪ್ರದಾಯಿಕ ಆಹಾರ ಸೇವನೆಯ ಬದಲು ರಾಸಾಯನಿಕ ಮಿಶ್ರಿತ ಆಹಾರ ಸೇವನೆ ಕಾರಣ. ಪ್ರೊ. ಎಂ.ಬಿ. ಪುರಾಣಿಕ್ ಅಧ್ಯಕ್ಷರು ಶಾರದಾ ಸಮೂಹ ಸಂಸ್ಥೆ ಮಂಗಳೂರು