Site icon Ullalavani

ಬೋಳಿಯಾರು: ಮನೆಯಂಗಳದಲ್ಲಿ `ಕಿಸಾನ್ ಗೋಷ್ಠಿ’ ಕೃಷಿ ಮಾಹಿತಿ ಕಾರ್ಯಕ್ರಮ

UN NETWORKS

ಬೋಳಿಯಾರು: ಗ್ರಾಮದ ಧರ್ಮನಗರ ಬರಡು ಭೂಮಿಯಾಗಿದ್ದು, ಕ್ರೈಸ್ತರು ವಾಸ ಆರಂಭಿಸಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದರಿಂದ ಇಂದು ಕೃಷಿಯ ಕರ್ಮಭೂಮಿ ಎನಿಸಿದೆ ಎಂದು ಬೋಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಆಚಾರ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಮತ್ತು ಮಂಗಳೂರು ಕೃಷಿ ಇಲಾಖೆಯ 2018-19ನೇ ಸಾಲಿನ ಆತ್ಮ ಯೋಜನೆಯಡಿ ಬೋಳಿಯಾರು ಗ್ರಾಮದ ಧರ್ಮನಗರದ ಕೃಷಿಕ ವಿನ್ಸೆಂಟ್ ಡಿಸೋಜ ಅವರ ಮನೆಯಂಗಳದಲ್ಲಿ ಶುಕ್ರವಾರ ನಡೆದ `ಕಿಸಾನ್ ಗೋಷ್ಠಿ’ಯ ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿಗೆ ಇರುವ ಅನುದಾನಗಳ ಮಾಹಿತಿ ಸಂಗ್ರಹಿಸಲು ಯಾರಿಗೂ ಸಮಯವಿಲ್ಲದ ಕಾರಣ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೃಷಿಕರು ಮಾಹಿತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸವಲತ್ತುಗಳನ್ನು ಪಡೆಯಬೇಕಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿಗೆ ಸಾಕಷ್ಟು ಅವಕಾಶವಿದ್ದು ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಕೃಷಿ ಇಲಾಖೆಯ ಅಬ್ದುಲ್ ಬಶೀರ್ ಮಾತನಾಡಿ, ಕೃಷಿ ಎಂದರೆ ಲಾಭದಾಯಕವಲ್ಲ ಎನ್ನುವ ಭಾವನೆ ರೈತರಲ್ಲಿದೆ. ಇದೇ ಮನೋಭಾನೆಯಲ್ಲಿ ಪೋಷಕರಿಗೆ ಕೃಷಿ ಕೆಲಸ ಎನ್ನುವುದನ್ನೂ ಹೇಳಲು ಮಕ್ಕಳು ನಾಚಿಕೆ ಪಡುತ್ತಿದ್ದಾರೆ. ವಾಸ್ತವವಾಗಿ ಕೃಷಿ ಇಲ್ಲದೆ ಯಾವ ಉದ್ಯಮವೂ ನಡೆಯದು ಎಂದು ತಿಳಿಸಿದರು.

ತೋಟಗಾರಿಕಾ ಇಲಾಖೆಯ ಮಹೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಪ್ರಗತಿಪರ ಕೃಷಿಕ ದಾಮೋದರ, ರಮೇಶ್ ಶೆಟ್ಟಿ ಕರ್ಮಾರ್, ಪಾವೂರು ಪಶು ಚಿಕಿತ್ಸಾಲಯದ ಡಾ. ರೇಖಾ ಹಾಗೂ ಕೃಷಿ ಮಹಿಳಾಸಕ್ತ ಸಂಘದ ತಾಂತ್ರಿಕ ವ್ಯವಸ್ಥಾಪಕಿ ರಮಿತಾ ಉಪಸ್ಥಿತರಿದ್ದರು.

ಆಶಾ ಡಿಸೋಜ ಸ್ವಾಗತಿಸಿದರು. ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

Exit mobile version