Site icon Ullalavani

ಮುಡಿಪು ಭಾಗದಲ್ಲಿ ವ್ಯಾಪಕ ಕಳ್ಳನೋಟು! ಹೂಹಾಕುವಕಲ್ಲಿನಲ್ಲಿ ಓರ್ವನ ಹಿಡಿದುಕೊಟ್ಟ ಸಾರ್ವಜನಿಕರು

UN NETWORKS

ಮುಡಿಪು: ಅಂಗಡಿ ಮಾಲೀಕರೊಬ್ಬರಿಗೆ ಎರಡನೇ ಬಾರಿ ನಕಲಿ ನೋಟು ನೀಡಿ ವಂಚಿಸಲು ಮುಂದಾತನನ್ನು ಸಾರ್ವಜನಿಕರೇ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು ಹೂಹಾಕುವಕಲ್ಲು ಸಮೀಪ ನಡೆದಿದೆ. ಮುಡಿಪು ಭಾಗದಲ್ಲಿ ಅಂಗಡಿ ಮಾಲೀಕರಿಗೆ ನಕಲಿ ನೋಟು ನೀಡಿ ವಂಚಿಸುವ ಜಾಲ ವ್ಯಾಪಕವಾಗಿದೆ‌ ಎಂದು ತಿಳಿದುಬಂದಿದೆ.

ಈ ಹಿಂದೆ ತಿಮ್ಮಪ್ಪ ಅವರ ಅಂಗಡಿಯಲ್ಲಿ ಸಿಕ್ಕಿದ 100 ರ ನಕಲಿ ನೋಟು

ಇರಾ ನಿವಾಸಿ ಅಬ್ಬಾಸ್ (45) ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಈತನ ಬಳಿ ರೂ.500 ರ ನಾಲ್ಕು ಕಲರ್ ಝೆರಾಕ್ಸ್ ನೋಟು ಪತ್ತೆಯಾಗಿದೆ. ಕನ್ಯಾನದ ಅಂಗಡಿಯೊಂದರಲ್ಲಿ ರೂ.2000 ಚಿಲ್ಲರೆ ಕೇಳಿದಕ್ಕೆ ಆತ ಇಂತಹ ನೋಟು ನೀಡಿರುವುದಾಗಿ ತಿಳಿಸಿದ್ದಾನೆ.

ಎರಡನೇ ಬಾರಿ ವಂಚಿಸಲು ಯತ್ನ :
ಹೂಹಾಕುವಕಲ್ಲು ನಿವಾಸಿ ತಿಮ್ಮಪ್ಪ ಎಂಬವರ ಅಂಗಡಿಗೆ ಎರಡು ವಾರಗಳ ಹಿಂದೆಯೂ ರೂ.500 ರ ನೋಟು ನೀಡಿ ವಂಚಿಸಲಾಗಿತ್ತು. ಆತನಿಗಾಗಿ ಕಾಯುತ್ತಲೇ ಇದ್ದ ತಿಮ್ಮಪ್ಪ ಅವರ ಅಂಗಡಿಗೆ ಮತ್ತೆ, ಅಬ್ಬಾಸ್ ಕಲರ್ ಝೆರಾಕ್ಸ್ ನೋಟು ತಂದು ಸಾಮಾನು ಕೇಳಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಅವರು ಸ್ಥಳೀಯರನ್ನು ಕರೆದು ಅಬ್ಬಾಸ್ ನನ್ನು ಹಿಡಿದು, ಕೊಣಾಜೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಕೇರಳ ಗಡಿ ಭಾಗ ಮುಡಿಪು, ನರಿಂಗಾನ, ತೌಡುಗೋಳಿ ಭಾಗದಲ್ಲಿ ಇಂತಹ ಝೆರಾಕ್ಸ್ ನೋಟುಗಳು ಹಲವು ಅಂಗಡಿ ಮಾಲೀಕರ ಕೈ ಸೇರಿ ವಂಚನೆಗೆ ಒಳಗಾದವರು ಅನೇಕರಿದ್ದಾರೆ. ಇಂತಹ ಜಾಲವೊಂದು ಈ ಭಾಗದಲ್ಲಿ ವ್ಯಾಪಕವಾಗಿ ಕಾರ್ಯಾಚರಿಸುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Exit mobile version