Site icon Ullalavani

ಕೋಟೆಕಾರು ಪ.ಪಂ ಉಪಾಧ್ಯಕ್ಷೆಯಾಗಿ ಭಾರತಿ ರಾಘವ ಗಟ್ಟಿ ಆಯ್ಕೆ

UN NETWORKS

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಭಾರತಿ ರಾಘವ ಗಟ್ಟಿ ಕೋಟೆಕಾರು ಇವರು 11 ಸದಸ್ಯರ ಮತ್ತು ಒಂದು ಸಂಸದರ ಮತ ಸೇರಿ ಒಟ್ಟು 12 ಮತಗಳಿಂದ ಆಯ್ಕೆಯಾಗಿದ್ದಾರೆ. ಎದುರಾಳಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ 5 ಮತಗಳನ್ನು ಪಡೆದುಕೊಂಡಿದ್ದಾರೆ.

ಕೋಟೆಕಾರು ಪ.ಪಂ ಎರಡೂವರೆ ವರ್ಷದ ಅಧ್ಯಕ್ಷ-ಉಪಾಧ್ಯಕ್ಷ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಕಟಗೊಂಡಿತ್ತು. ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷಕ್ಕೆ ಸಾಮಾನ್ಯ ಮಹಿಳೆ ಆದೇಶ ಬಂದಿತ್ತು. ಆದರೆ ಅಧ್ಯಕ್ಷರ ಹುದ್ದೆಗೆ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳು ಇಲ್ಲದಿರುವುದರಿಂದ ಶನಿವಾರ ಉಪಾಧ್ಯಕ್ಷ ಹುದ್ದೆಗೆ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾರತಿ ರಾಘವ ಗಟ್ಟಿ ಇವರು 9 ಬಿಜೆಪಿ, 2 ಪಕ್ಷೇತರ ಮತ್ತು ಒಂದು ಸಂಸದರು ಸೇರಿದಂತೆ 12 ಮತಗಳನ್ನು ಪಡೆದುಕೊಂಡರು. ಎದುರಾಳಿ ಕಾಂಗ್ರೆಸ್ ಬೆಂಬಲಿತ ಸುಮತಿ 5 ಮತಗಳನ್ನು ಮಾತ್ರ ಪಡೆದುಕೊಂಡರು.

ಒಟ್ಟು 17 ಮಂದಿ ಸದಸ್ಯರಿರುವ ಪಟ್ಟಣ ಪಂಚಾಯಿತಿ ಆಡಳಿತದಲ್ಲಿ 9 ಬಿಜೆಪಿ, 2 ಪಕ್ಷೇತರ , 5 ಕಾಂಗ್ರೆಸ್ ಹಾಗೂ 1 ಎಸ್‍ಡಿಪಿಐ ಬೆಂಬಲಿತ ಸದಸ್ಯರಿದ್ದಾರೆ. ಉಪಾಧ್ಯಕ್ಷೆ ಆಯ್ಕೆ ಪ್ರಕ್ರಿಯೆಯಲ್ಲಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ಅನುಪಸ್ಥಿತಿಯಿಂದ 16 ಮಂದಿ ಸದಸ್ಯರು ಮಾತ್ರ ಭಾಗವಹಿಸಿದ್ದರು. ಎರಡೂವರೆ ವರ್ಷಗಳ ಕಾಲ ಅನಿಲ್ ಬಗಂಬಿಲ ಅವರು ಉಪಾಧ್ಯಕ್ಷರಾಗಿ ಕಾರ್ಯಾಚರಿಸುತ್ತಿದ್ದರು.
ತಿದ್ದುಪಡಿ ಬಳಿಕ ಅಧ್ಯಕ್ಷರ ಆಯ್ಕೆ : ಮೀಸಲಾತಿಯಂತೆ ಅಭ್ಯರ್ಥಿ ಇಲ್ಲದಿರುವುದರಿಂದ ಅದನ್ನು ಮತ್ತೆ ತಿದ್ದುಪಡಿಗೆ ಮನವಿ ಮಾಡಲಾಗುವುದು. ಎರಡು ತಿಂಗಳ ಒಳಗೆ ತಿದ್ದುಪಡಿಯಾದ ಆದೇಶ ಲಭ್ಯವಾಗಬಹುದು . ಆ ಬಳಿಕ ಮತ್ತೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದರು. ಅಲ್ಲಿನವರೆಗೆ ಉದಯ ಕುಮಾರ್ ಶೆಟ್ಟಿ ಸೊಳ್ಳೆಂಜೀರು ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಈ ಸಂದರ್ಭ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ `ಕಾನೂನಿನ ತೊಡಕಿನಿಂದಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಲ್ಪಟ್ಟಿದೆ. ನಗರಸಭೆ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲಾ ಸದಸ್ಯರು ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ. ಹಿಂದಿನ ಆಡಳಿತ ಮತ್ತು ಪ್ರತಿಪಕ್ಷಗಳ ಸಹಕಾರದಿಂದ ಅಭಿವೃದ್ಧಿ ಕಾರ್ಯ ಉತ್ತಮವಾಗಿ ನಡೆದಿದೆ. ಮುಂದಿನ ಆಡಳಿತದ ಅವಧಿಯಲ್ಲೂ ಅದೇ ರೀತಿಯಲ್ಲಿ ಮುಂದುವರಿಯಲಿ ಎಂದು ಹಾರೈಸಿದರು. ಈ ಸಂದರ್ಭ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ , ಮುಖಂಡರುಗಳಾದ ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್ ಉಳ್ಳಾಲ್, ಚಂದ್ರಹಾಸ್ ಪಂಡಿತ್ ಹೌಸ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಮೋಹನರಾಜ್ ಕೆ.ಆರ್, ಹೇಮಂತ್ ಶೆಟ್ಟಿ ದೇರಳಕಟ್ಟೆ, ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ತಹಶೀಲ್ದಾರ್ ಗುರುಪ್ರಸಾದ್, ಚುನಾವಣಾ ಆಯೋಗ ಪ್ರಥಮ ದರ್ಜೆ ಸಹಾಯಕ ರಂಜನ್, ಕಂದಾಯ ನಿರೀಕ್ಷಕ ಚರಣ್‍ರಾಜ್ ಭಾಗವಹಿಸಿದ್ದರು.

Exit mobile version