Site icon Ullalavani

ಅಖಿಲ ಭಾರತ ಮಹಾಮುಷ್ಕರ ಪ್ರಚಾರಾರ್ಥ ತೊಕ್ಕೊಟ್ಟು ತಲುಪಿದ ವಾಹನ ಜಾಥಾ

UN NETWORKS

ತೊಕ್ಕೊಟ್ಟು: ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಖಾಸಗೀಕರಣ, ಗುತ್ತಿಗೆ ಪದ್ಧತಿ , ನಿಗದಿತ ಅವಧಿ ಉದ್ಯೋಗ ದಂತಹ ಕೇಂದ್ರ ಸರಕಾರದ ಕ್ರಮಗಳನ್ನು ವಿರೋಧಿಸಿ ಜ.8 ಮತ್ತು 9 ರಂದು ಎರಡು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರಕ್ಕೆ ಎಲ್ಲಾ ವರ್ಗದ ಕಾರ್ಮಿಕರು ಬೆಂಬಲಿಸಬೇಕು ಎಂದು ಇಂಟಕ್ ಕಾರ್ಯದರ್ಶಿ ಸುರೇಶ್ ಚಂದ್ರ ಶೆಟ್ಟಿ, ಜ.8 ಮತ್ತು 9 ರಂದು ಎರಡು ದಿನಗಳ ಕಾಲ ಅಖಿಲ ಭಾರತ ಮಹಾಮುಷ್ಕರದ ಯಶಸ್ವಿಗಾಗಿ ದ.ಕ ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾವನ್ನು ತೊಕ್ಕೊಟ್ಟುವಿನಲ್ಲಿ ಸ್ವಾಗತಿಸಿ ಮಾತನಾಡಿದರು.

48 ಗಂಟೆಗಳ ಕಾಲ ದೇಶವನ್ನು ಬಂದ್ ನಡೆಸಿ ಪ್ರಧಾನಿ ಮೋದಿಗೆ ಬಿಸಿ ಮುಟ್ಟಿಸುವ ಕಾರ್ಯ ಕಾರ್ಮಿಕ ವರ್ಗದಿಂದ ಆಗಬೇಕಿದೆ. ಜನಸಾಮಾನ್ಯರು, ರಿಕ್ಷಾ ಚಾಲಕರು ಹಾಗೂ ಮಾಲಕರು ಬೆಂಬಲಿಸಬೇಕಿದೆ. ರೈತರ, ಕಾರ್ಮಿಕರ ಏಳಿಗೆ ಹೆಸರಿನಲ್ಲಿ ಅಧಿಕಾರ ಪಡೆದುಕೊಂಡ ಕೇಂದ್ರ ಸರಕಾರ, ಬಂಡವಾಳಶಾಹಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿಟ್ಟರೂ ಯಾವುದೂ ಈಡೇರಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ಒಗ್ಗಟ್ಟಿನ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಆಗಬೇಕಿದೆ ಎಂದರು.

ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಕಾನೂನು ಬಹುರಾಷ್ಟ್ರೀಯ ಕಂಪೆನಿ ಮತ್ತು ಬಂಡವಾಳಶಾಹಿಗಳ ಪರವಾಗಿಯೇ ಇದೆ. ಜನಸಾಮಾನ್ಯರು ದಿನಬಳಕೆ ವಸ್ತುಗಳಿಂದ ಹಿಡಿದು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಧೋರಣೆ ನೀತಿಗಳ ವಿರುದ್ಧ ಎಲ್ಲರೂ ಹೋರಾಡಬೇಕಿದೆ ಎಂದರು. ಈ ಸಂದರ್ಭ ಎಐಟಿಯುಸಿ ಮುಖಂಡರಾದ ಶೇಖರ್, ಹೆಚ್. ಪಿ.ರಾವ್, ಸುರೇಶ್ ಕುಮಾರ್, ಕರುಣಾಕರ್, ಸಿಐಟಿಯು ನ ಸುನಿಲ್ ಕುಮಾರ್ ಬಜಾಲ್, ಯು.ಬಿ ಲೋಕಯ್ಯ, ರಾಮಣ್ಣ ವಿಟ್ಲ, ಭಾರತಿ ಬೋಳಾರ, ಜಯಂತಿ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ವಿಲಾಸಿನಿ ತೊಕ್ಕೊಟ್ಟು, ಜನಾರ್ದನ ಕೆ, ರೋಹಿದಾಸ್ ತೊಕ್ಕೊಟ್ಟು, ಯೋಗೀಶ್ ಜೆಪ್ಪಿನಮೊಗರು, ಅಶ್ರಫ್ ಕಿನ್ಯಾ, ಇಬ್ರಾಹಿಂ ಮದಕ, ಪುಷ್ಪಾ ಪಿಲಾರ್ ಉಪಸ್ಥಿತರಿದ್ದರು.

ಜಯಂತ್ ನಾಯ್ಕ್ ಸ್ವಾಗತಿಸಿ ದರು. ಪದ್ಮಾವತಿ ಯಸ್. ಶೆಟ್ಟಿ ವಂದಿಸಿದರು.

Exit mobile version