Site icon Ullalavani

ಮುಡಿಪು: ನ್ಯೂಸ್ ಪಾಯಿಂಟ್ ಮಳಿಗೆಗೆ ದುಷ್ಕರ್ಮಿಗಳಿಂದ ಬೆಂಕಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಚಿತ್ರ: ಕಿಶು ಡಿಜಿಟಲ್ಸ್ ಮುಡಿಪು

ಮುಡಿಪು: ಪತ್ರಿಕೆ ಮಾರಾಟ, ಸ್ಟೇಷನರಿ, ಮೊಬೈಲ್ ಮಾರಾಟದಲ್ಲಿ ಮುಡಿಪುವಿನಲ್ಲಿ ಖ್ಯಾತಿ ಗಳಿಸಿರುವ ನ್ಯೂಸ್ ಪಾಯಿಂಟ್ ಮಳಿಗೆಗೆ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಸುಕಿನ ವೇಳೆ ಬೆಳಕಿಗೆ ಬಂದಿದೆ.

ಮುಡಿಪು ನಿವಾಸಿ ವೆಂಕಟೇಶ್ ಮತ್ತು ಜಗದೀಶ್ ಮಾಲೀಕತ್ವದ ಮಳಿಗೆ ಇದಾಗಿದೆ. ಘಟನೆಯಿಂದ ರೂ.7 ಲಕ್ಷ ನಷ್ಟ ಸಂಭವಿಸಿದೆ.

ಮಂಗಳವಾರ ನಸುಕಿನ 5.00 ಗಂಟೆ ಸುಮಾರಿಗೆ ಸಮೀಪದ ಹೊಟೇಲಿನವರು ಮಳಿಗೆಯೊಳಗೆ ಉರಿಯುತ್ತಿರುವ ಬೆಂಕಿಯನ್ನು ಕಂಡು ವೆಂಕಟೇಶ್ ಅವರಿಗೆ ಸುದ್ಧಿ ಮುಟ್ಟಿಸಿದ್ದರು. ಬಳಿಕ ಸ್ಥಳೀಯರೆಲ್ಲರೂ ಸೇರಿಕೊಂಡು ಬೆಂಕಿ ನಂದಿಸಲು ಯಶಸ್ವಿಯಾದರೂ ಮಳಿಗೆಯೊಳಗಿದ್ದ ಸಾಮಗ್ರಿಗಳೆಲ್ಲವೂ ಭಾಗಶ: ಸುಟ್ಟುಹೋಗಿವೆ. 2008 ರ ನ.29 ರಂದು ಇದೇ ಅಂಗಡಿಯಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು.

ಅಂಗಡಿಯೊಳಗಿನಿಂದ ಹೊರಗಿನವರೆಗೂ ಸೀಮೆಎಣ್ಣೆ ಕುರುಹು ಕಂಡುಬಂದಿರುವುದರಿಂದ, ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದು ಖಚಿತವಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಮುಡಿಪು ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಮಳಿಗೆಯ ವ್ಯವಹಾರದ ಮೇಲಿನ ಮತ್ಸರದಿಂದಲೇ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

 

Exit mobile version