Site icon Ullalavani

ಕಾರು ಪಲ್ಟಿ, ಯುವಕ ಸಾವು, ಇಬ್ಬರ ಸ್ಥಿತಿ ಗಂಭೀರ

UN NETWORKS

ತೊಕ್ಕೊಟ್ಟು: ಭೀಕರ ಕಾರು ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಎರ್ನಾಕುಳಂ ನಿವಾಸಿ ಅನೂಪ್ ಆ್ಯಂಟನಿ (35) ಮೃತಪಟ್ಟವರು. ಅನೂಪ್ ಜತೆಗಿದ್ದ ಸಹೋದ್ಯೋಗಿಗಳಾದ ವಿದು ಎಸ್., ಜಾರ್ಜ್, ಆನಂದ್ ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಅನೂಪ್ ಆ್ಯಂಟನಿ ಕಳೆದ ಎರಡು ತಿಂಗಳಿನಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಕೇಂದ್ರದಲ್ಲಿ ಟೆಕ್ನಿಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ ಕೇರಳದ ಊರಿಗೆ ದೂರದಿಂದ ಬಂದ ಸಹೋದರನನ್ನು ಭೇಟಿಯಾಗಲೆಂದು ಒಂದೇ ರೂಮಿನಲ್ಲಿದ್ದ ಐವರು ಸಹುದ್ಯೋಗಿಗಳು ಕಾರಿನಲ್ಲಿ ತೆರಳಿದ್ದರು. ಅಲ್ಲಿಂದ ದೇರಳಕಟ್ಟೆ ಕಡೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ತೊಕ್ಕೊಟ್ಟು ಚಿಲ್ಡ್ರನ್ಸ್ ಕ್ಲಿನಿಕ್ ಮುಂಭಾಗಕ್ಕೆ ತಲುಪುತ್ತಿದ್ದಂತೆಯೇ ಹಠಾತ್ ಬ್ರೇಕ್ ಒತ್ತಿದ ಪರಿಣಾಮ ಕಾರು ರಸ್ತೆಯಲ್ಲಿ ಪಲ್ಟಿಯಾಗಿತ್ತು.

ಪರಿಣಾಮ ಅನೂಪ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರನ್ನು ಗಂಭೀರ ಸ್ಥಿತಿಯಲ್ಲಿದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದು ಎಸ್ ಹಾಗೂ ಜಾರ್ಜ್ ಸ್ಥಿತಿ ಗಂಭೀರವಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

Exit mobile version