UN NETWORKS
ಉಳ್ಳಾಲ: ಅತಂತ್ರ ಸ್ಥಿತಿಯಲ್ಲಿರುವ ಉಳ್ಳಾಲ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ನಿಚ್ಚಳವಾಗಿದ್ದು, ಮೈತ್ರಿ ಉದ್ಧೇಶದಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇದ್ದ ಮೀಸಲಾತಿ ಬದಲಾವಣೆಯಾಗಿದ್ದು, ಹಿಂದುಳಿದ ವರ್ಗ ಬಿ. ಅಧ್ಯಕ್ಷ ಸ್ಥಾನ ಮೀಸಲಾತಿ ಬಂದರೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ.ಮೀಸಲಾತಿ ನಿಗದಿ ಪಡಿಸಿ ಆದೇಶ ಬಂದಿದೆ.
ಬಾಝಿಲ್ ಡಿ.ಸೋಜ ಅಗ್ರಸ್ಥಾನದಲ್ಲಿ : ಉಳ್ಳಾಲ ನಗರಸಭೆಯಲ್ಲಿ ಬಂದಿರುವ ಮೀಸಲಾತಿಯಂತೆ ಸ್ಪರ್ಧೆಗೆ ಇಬ್ಬರು ಸದಸ್ಯರು ಮಾತ್ರ ಅರ್ಹತೆ ಪಡೆಯಲಿದ್ದು ಈ ಹಿಂದೆ ಉಳ್ಳಾಲ ಪುರಸಭೆಯಲ್ಲಿ ಅಧ್ಯಕ್ಷರಾಗಿದ್ದ ಬಾಝಿಲ್ ಡಿ.ಸೋಜ ಅಗ್ರಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ವೀಣಾ ಡಿ.ಸೋಜ ಅವಕಾಶ ಪಡೆಯಲಿದ್ದಾರೆ. ಉಳಿದಂತೆ ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ. ಇನ್ನೊಂದೆಡ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ದಂಡೇ ಇದ್ದು, ಕಾಂಗ್ರೆಸ್ನಲ್ಲಿ 9 ಸದಸ್ಯರಿದ್ದರೆ, ಜೆಡಿಎಸ್ನಲ್ಲಿ 4 ಸದಸ್ಯರು, ಮತ್ತು ಪಕ್ಷೇತರ ಇಬ್ಬರು ಸದಸ್ಯರು ಅರ್ಹತೆಯನ್ನು ಪಡೆಯಲಿದ್ದಾರೆ. ಇದೀಗ ಮೈತ್ರಿಗೆ ಯಾರು ಮುಂದೆ ಬರುತ್ತಾರೋ ಎನ್ನುವುದು ಕಾದು ನೋಡಬೇಕಾಗಿದ್ದು ಉಪಾಧಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಎನ್ನುವುದು ಮೈತ್ರಿಯನ್ನು ಆಧರಿಸಿ ಇದೆ.
ಎಸ್ಡಿಪಿಐ ಮತ್ತು ಬಿಜೆಪಿಯಿಂದ ಸಮಾನ ದೂರ : ಕಾಂಗ್ರೆಸ್ನ ಬಳಿಕ ಉಳ್ಳಾಲದಲ್ಲಿ ಆತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವುದು ಎಸ್ಡಿಪಿಐ ಮತ್ತು ಬಿಜೆಪಿ ಪಕ್ಷ. ಎರಡೂ ಪಕ್ಷಗಳು ತಲಾ 6 ಸದಸ್ಯರ ಬಲವನ್ನು ಹೊಂದಿದ್ದು, ಕಾಂಗ್ರೆಸ್ ಈ ಎರಡೂ ಪಕ್ಷದೊಂದಿಗೆ ಸಮಾನ ಅಂತರನ್ನು ಕಾಯ್ದಿದೆ.
