UN NETWORKS
ಕುಂಪಲ: ಮನೆಗಳಲ್ಲಿ ಆಚಾರ ವಿಚಾರಗಳು ಉಳಿಯಬೇಕಾದಲ್ಲಿ ಮಹಿಳೆಯರು ಕೈಯಿಂದ ರಿಮೋಟನ್ನು ಬಿಟ್ಟು ಸೋಫಾದಿಂದ ಎದ್ದು ಕ್ರಿಯಾಶೀಲರಾಗಿ ಬಾಳುವ ವಾತಾವರಣ ನಿರ್ಮಿಸಬೇಕು ಎಂದು ಉದ್ಯಮಿ ದಿನೇಶ್ ಎಂ.ಪಿ ಅಭಿಪ್ರಾಯಪಟ್ಟರು.
ಜೀವನದಲ್ಲಿ ಸಕಾರಾತ್ಮಕ ಗುಣಗಳನ್ನು ಅಳವಡಿಸಲು ಆಚಾರಗಳು, ವಿಚಾರಗಳು ಪ್ರಮುಖವಾಗಿರಬೇಕು. ಆದರೆ ಇಂದು ಆಚಾರಗಳನ್ನು ಉಳಿಸುವ ಪ್ರಯತ್ನವಾಗುತ್ತಿಲ್ಲ. ಸೀರಿಯಲ್ ಗಳನ್ನೊ ನೋಡುತ್ತಾ ಅದರ ಅನುಕರಣೆಯಲ್ಲಿ ವಿಚಾರಗಳನ್ನು ನಶಿಸುತ್ತಾ ಜೀವನ ನಡೆಯುತ್ತಿದೆ. ಅದಕ್ಕಾಗಿ ಮಹಿಳೆಯರು ಸೀರಿಯಲ್ ಗಳಿಂದ ದೂರವಾಗಿ ಹಿಂದಿನವರ ಆಚಾರಗಳನ್ನು ಮತ್ತು ವಿಚಾರಗಳನ್ನು ಎತ್ತಿಹಿಡಿಯಬೇಕಾಗಿದೆ.
ಆಷಾಢಕ್ಕೆ ಒಂದು ದಿನ ಆಚರಿಸಿದ ಮರುದಿನ ಮನಸ್ಥಿತಿ ಯಾವ ರೀತಿಯಲ್ಲಿರುತ್ತದೆ ಅನ್ನುವ ವಿಚಾರದ ಕುರಿತು ವಿಮರ್ಶೆ ಮಾಡಬೇಕಿದೆ. ಜನ ಮಾಯಾಲೋಕದಲ್ಲಿ ಬಾಳುತ್ತಾ ಆಷಾಢದಲ್ಲಿ ಒಂದು ದಿನ ಆಚರಿಸಿಬಿಡುತ್ತಾರೆ. ಆದರೆ ಆಚರಣೆಯಿಂದ ಮನಸ್ಥಿತಿ ಸಕಾರಾತ್ಮಕವಾಗಿ ಆನಂದವಾಗಿರಲು ಪ್ರೇರೇಪಿಸಬೇಕು. ಹಿಂದಿನವರು ತಿಂದು ಬಾಳಿದಂತಹ ವಾತಾವರಣವನ್ನು ಸ್ಮರಿಸುವ ಕ್ಷಣವಾದರೂ, ಅದನ್ನು ಜೀವನದಲ್ಲಿ ಅಳವಡಿಸುವ ಕಾರ್ಯ ಆಗುತ್ತಿಲ್ಲ. ಅವರು ಸೇವಿಸಿದ ಸಾತ್ವಿಕ ಆಹಾರದಿಂದ ದಷ್ಟಪುಷ್ಠವಾಗಿ ಆರೋಗ್ಯವಂತರಾಗಿದ್ದರು. ಇದೀಗ ವಿಚಾರಗಳು ಆಚರಣೆಗೆ ಮಾತ್ರ ಸೀಮಿತವಾಗಿದೆ. ಜೀವನದಲ್ಲಿ ಅಳವಡಿಕೆಯಾಗುತ್ತಿಲ್ಲ. ಸಾತ್ವಿಕ ಆಹಾರವನ್ನು ವರ್ಷವಿಡೀ ಉಪಯೋಗಿಸುವುದರಿಂದ ರೋಗಗಳಿಂದ ದೂರವಿರಬಹುದು. ಈ ಕುರಿತು ವೇದ ಉಪನಿಷತ್ತುಗಳಲ್ಲಿಯೂ ಉಲ್ಲೇಖ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಯ ಮರಾಠ ಸಮಾಜದ ಉಪಾದ್ಯಕ್ಷರಾದ ಪುರುಷೋತ್ತಮ ರಾವ್ ಬಹುಮಾನ್ ವಹಿಸಿದ್ದರು.
ತೆಂಗಿನ ಗಿಡಕ್ಕೆ ನೀರೆರೆದು ಆಹಾರೋತ್ಸವವನ್ನು ಅನಾವರಣಗೊಳಿಸಿದ ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ ಮಾತನಾಡಿ ಹಿಂದಿನ ಆಚಾರಗಳನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯ ಆಗಿದೆ. ಮಳೆಗಾಲದ ಸಂದರ್ಭ ಸುತ್ತಮುತ್ತಲಿನ ಸಸ್ಯಗಳನ್ನೇ ಆಹಾರವಾಗಿ ಸೇವಿಸುವ ಸಮಯವಿತ್ತು. ಆದರೆ ಇದೀಗ ಅದನ್ನು ಆಚರಣೆಯ ಮೂಲಕ ತೋರಿಸಲಾಗುತ್ತಿದೆ. ಮಹಿಳೆಯರು ಸಾಧ್ಯವಾದಷ್ಟು ಮಕ್ಕಳಿಗೆ ಮನೆಯಲ್ಲಿಯೇ ಇಂತಹ ಆಹಾರವನ್ನು ಮಾಡಿ ಕೊಡಬೇಕಿದೆ ಎಂದರು.
ಹಿಂದೂ ಯುವ ಸೇನೆ ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶಶಿಕಾಂತ್ ನಾಗ್ವೇಕರ್ ಜ್ಞಾನದೀವಿಗೆ ಪ್ರದಾನಿಸಿ ಮಾತನಾಡಿ ಕಾರ್ಯಕ್ರಮಗಳಿಗೆ ಮಹಿಳೆಯರು ಮಕ್ಕಳನ್ನು ಕರೆದುಕೊಂಡು ಬಂದಾಗ ಸಂಸ್ಕಾರದ ಪರಿಚಯ ಆಗಲು ಸಾಧ್ಯ. ಕುಂಪಲದ ಜನ ಎಲ್ಲಾ ಜಾತಿಯ ಜನರನ್ನು ಪ್ರೀತಿಸುತ್ತಾರೆ ಅನ್ನುವ ಸಂದೇಶ ಕಾರ್ಯಕ್ರಮದಿಂದ ದೊರೆತಿದೆ ಎಂದರು.
ಆಟಿದ ಮಾನಾದಿಗೆ ಸನ್ಮಾನವನ್ನು ಸ್ವೀಕರಿಸಿದ ತುಳುಚಿತ್ರರಂಗದ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಮಾತನಾಡಿ ಫಾಸ್ಟ್ ಫುಡ್ ಯುಗದಲ್ಲಿ ಬಂದ ಹಾದಿಯನ್ನು ಮರೆಯುವಂತಹ ಮನಸ್ಥಿತಿ ಎಲ್ಲರಲ್ಲಿ ಬೆಳೆದಿದೆ. ಹಿಂದಿನ ಕಾಲದಲ್ಲಿ ಆಹಾರ ಸೇವಿಸಿದವರಿಗೆ ರೋಗವಿರಲಿಲ್ಲ. ಆದರೆ ಇಂದು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ರೋಗಿಗಳಾಗಿದ್ದಾರೆ. ಮಕ್ಕಳನ್ನು ಹತೋಟಿ ಮೀರಿ ಪ್ರೀತಿಸದೆ, ಜೀವನದ ನೈತಿಕತೆಗಳನ್ನು ಅಳವಡಿಸಿ ಬೆಳೆಸಲು ಕಲಿಸಿ. ಕುಂಪಲದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜಾತಿ ಬೇಧವಿಲ್ಲದೆ ಸನ್ಮಾನಿಸಲಾಗಿದೆ. ಇದೊಂದು ಸಮಾಜಕ್ಕೆ ಪೂರಕವಾದ ಸಂದೇಶ ಎಂದರು.
`ಮುಖ್ಯ ಅತಿಥಿಯಾಗಿ ಬಗಂಬಿಲ ಸತ್ಯನಾರಾಯಣ ಮಂದಿರದ ಅಧ್ಯಕ್ಷರಾದ ಗಣೇಶ್ ಪೂಜಾರಿ, ಶ್ರೀನಿಧಿ ಜುವೆಲ್ಲರ್ಸ್ ನ ಮಾಲಕ ಜಗದೀಶ್ ಆಚಾರ್ಯ ಆಗಮಿಸಿದ್ದರು.ಮಂದಿರದ ಗೌರವಾದ್ಯಕ್ಷ ಕೇಶವದಾಸ್ ಬಗಂಬಿಲ, ಮಹಿಳಾ ಸಮಿತಿ ಅದ್ಯಕ್ಷೆ ರೇಖಾ ವೆಂಕಟೇಶ್, ಉತ್ಸವ ಸಮಿತಿ ಗೌರವಾದ್ಯಕ್ಷ ಸೋಮಶೇಖರ್ ಜಗತಾಪ್, ಅದ್ಯಕ್ಷ ಪ್ರಕಾಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಕೋಶಾದಿಕಾರಿ ಮಾಧವ ಬಂಗೇರ ಉಪಸ್ಥಿತರಿದ್ದರು.
ಮಂದಿರದ ಅದ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿ ಪ್ರಸ್ತಾವನೆಗೈದರು. ವೆಂಕಟೇಶ್ ಕುಂಪಲ ವಂದಿಸಿ, ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.ಸುಮಾರು 90ಬಗೆಯ ತುಳುನಾಡಿನ ಆಹಾರಖಾದ್ಯಗಳು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ 90% ಅಧಿಕ ಅಂಕಗಳಿಸಿದ ಸೋಮೇಶ್ವರ ಗ್ರಾಮ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಪುರಸ್ಕಾರ ಪ್ರದಾನಿಸಲಾಯಿತು.ಮಹಿಳಾ ಸಮಿತಿ ಮತ್ತು ಯುವ ಮರಾಠದ ಮಹಿಳಾ ಘಟಕದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.