UN NETWORKS
ತೊಕ್ಕೊಟ್ಟು: ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬವಾಗಲು ಇಲ್ಲಿನ ಶಾಸಕರೇ ನೇರ ಕಾರಣವಾಗಿದ್ದಾರೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಆರೋಪಿಸಿದ್ದಾರೆ.
ಎರಡು ದಿನ ದೆಹಲಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ತಂದಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ಮೋದಿ ಹಾಗೂ ಜಿಲ್ಲೆಯ ಸಂಸದರ ವಿರುದ್ಧ ಅಪಪ್ರಚಾರದಲ್ಲಿ ಜಿಲ್ಲೆಯ ಕಾಂಗ್ರೆಸ್ಸಿಗರು ತೊಡಗಿಕೊಂಡಿದ್ದಾರೆ. ಪ್ರಧಾನಿಯವರ 83 ಯೋಜನೆಗಳು ಯಶಸ್ವಿಯಾಗಿದ್ದು, ಸಂಸದರು ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯಿಯಾದಲ್ಲಿ ಚಪ್ಪಲಿ ಹಾಕದೆ ನಡೆಯುವುದಾಗಿ ಹೇಳಿಕೊಂಡ ಬಿಜೆಪಿ ಕಾರ್ಯಕರ್ತ ನುಡಿದಂತೆ ಒಂದು ವಾರದ ಕಾಲ ನಡೆದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ 50,000 ಮತಗಳ ಅಂತರದಲ್ಲಿ ವಿಜಯಿಯಾಗದೇ ಇದ್ದಲ್ಲಿ, ಕಾಂಗ್ರೆಸ್ಸಿಗೆ ರಾಜೀನಾಮೆ ಕೊಡುವುದಾಗಿ ಹಲವು ಮುಖಂಡರು ಹೇಳಿಕೊಂಡಿದ್ದರು. ಮೊದಲು ಅವರು ನುಡಿದಂತೆ ರಾಜೀನಾಮೆಯನ್ನು ನೀಡಲಿ ಎಂದು ಸವಾಲೆಸೆದರು. ಸ್ವಂತ ಊರು ಬೋಳಿಯಾರು ಮತ ಜಾಸ್ತಿಯೇ ಪಡೆದಿದ್ದೇನೆ. ಪಟ್ಲ ಸೈಟಿನಲ್ಲಿ 198 ಮತಗಳು, ಮುಸ್ಲಿಂ ಬಾಹುಳ್ಯವಿರುವ ಕುರ್ನಾಡು ಶಕ್ತಿಕೇಂದ್ರದಲ್ಲಿ ಶೇ.20 ಪಡೆದುಕೊಂಡಿರುವುದು ಸಮಾಧಾನ ತಂದಿದೆ.
ಮೂಲಭೂತ ಸೌಕರ್ಯಗಳಿಲ್ಲದ ಸರಕಾರಿ ಕಾಲೇಜು : ಮಂಗಳೂರು ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳದ್ದೇ ದರ್ಬಾರು ಹೆಚ್ಚಾಗಿದೆ. ಸರಕಾರಿ ಐಟಿಐ, ಪಾಲಿಟೆಕ್ನಿಕ್ ಕಾಲೇಜು, ಅಗ್ನಿ ಶಾಮಕ ದಳ ಘಟಕ ಸ್ಥಾಪನೆಯನ್ನು ಎರಡು ಬಾರಿ ಸಚಿವರಾದರೂ ತರಿಸುವಲ್ಲಿ ವಿಫಲರಾಗಿದ್ದಾರೆ. ಮುಡಿಪು ಪದವಿಪೂರ್ವ ಕಾಲೇಜಿಗೆ ತಾನು ಜಿ.ಪಂ ಸದಸ್ಯನಾಗಿದ್ದ ಅವಧಿಯಲ್ಲಿ ರೂ.4.5 ಲಕ್ಷದಲ್ಲಿ ಮಂಜೂರಾದ ಅಕ್ಷರದಾಸೋಹ ಕೊಠಡಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಮಂಜೂರಾದ ಐದು ಕೊಠಡಿಗಳಲ್ಲೇ ಪದವಿ ತರಗತಿ ನಡೆಯುತ್ತಿದೆ. ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತಹ ಶೌಚಾಲಯವಿಲ್ಲ, ಕಟ್ಟಡವಿಲ್ಲದೆ ಮೂಲಭೂತ ಸೌಕರ್ಯಗಳಿಲ್ಲದೆ ಕಾಲೇಜು ನಡೆಯುತ್ತಿದೆ. ಕಡಲ್ಕೊರೆತಕ್ಕೆ ಈಗಲೂ ಬಂಡೆಯನ್ನು ಹಾಕಿ ಅದನ್ನು ಸಮುದ್ರಪಾಲನ್ನಾಗಿಸುವ ಕಾಮಗಾರಿ ಮುಂದುವರಿಯುತ್ತಿದೆ. ಸಂತ್ರಸ್ತರಿಗೆ ಗಂಜಿ ಕೇಂದ್ರ ಸ್ಥಾಪಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಶಾಶ್ವತ ಯೋಜನೆಯನ್ನು ರಾಜಕೀಯ ರಹಿತವಾಗಿ ಸ್ಥಾಪಿಸುವ ಕೆಲಸವನ್ನಾದರೂ ಮುಂದಿನ ದಿನಗಳಲ್ಲಿ ಮಾಡಲಿ ಎಂದರು.
ಸುದ್ಧಿಗೋಷ್ಠಿಯಲ್ಲಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ಮುಖಂಡರುಗಳಾದ ಮನೋಜ್ ಆಚಾರ್ಯ, ಹರಿಯಪ್ಪ ಸಾಲ್ಯಾನ್, ರಾಮಕೃಷ್ಣ, ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.
ರಾಜಕೀಯ ನಿವೃತ್ತಿ : ತಾಕತ್ತಿದ್ದಲ್ಲಿ ಸಚಿವ ಖಾದರ್ ತಮ್ಮ ಸ್ವಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲೆಸೆದ ಸಂತೋಷ್ ಬೋಳಿಯಾರ್ ಒಂದು ವೇಳೆ ಗೆದ್ದಲ್ಲಿ ತಾನೂ ಭಾರತೀಯ ಜನತಾ ಪಾರ್ಟಿಯಿಂದ ಸಾಮಾನ್ಯ ಕಾರ್ಯಕರ್ತನ ಸ್ಥಾನಕ್ಕೂ ರಾಜೀನಾಮೆ ನೀಡಿ ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಹೇಳಿದರು.