Site icon Ullalavani

ಉಪ್ಪಳದ ಅಪಘಾತದಲ್ಲಿ ಐವರು ಮೃತ್ಯು : ಅಜ್ಜಿನಡ್ಕದ ಮನೆಯಲ್ಲಿ ಶೋಕತಪ್ತ ವಾತಾವರಣ

UN NETWORKS

ಉಳ್ಳಾಲ: ಇನ್ನೇನು 30 ನಿಮಿಷಗಳಲ್ಲಿ ಮನೆ ತಲುಪುವವರಿದ್ದರು. ಆದರೆ ವಿಧಿಲೀಲೆಯೇ ಬೇರೆಯಾಗಿತ್ತು. ಮನೆ ತಲುಪಬೇಕಾದ ಐದು ಮಂದಿಯೂ ರಸ್ತೆಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಉಪ್ಪಳ ನಯಾಬಜಾರಿನಲ್ಲಿ ಬೆಳಿಗ್ಗೆ 6.30ರ ಸುಮಾರಿಗೆ ಲಾರಿ ಮತ್ತು ತೂಫಾನ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಕೆ.ಸಿ ರೋಡ್ ಅಜ್ಜಿನಡ್ಕ ನಿವಾಸಿ ಬಿಫಾತಿಮ (67), ಅವರ ಪುತ್ರಿ ಜೆಪ್ಪು ನಿವಾಸಿ ನಸೀಮಾ (38), ಇನ್ನೋರ್ವ ಪುತ್ರಿ ಸೌದಾ ಎಂಬವರ ಪತಿ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಮುಸ್ತಾಕ್ (41), ಮೊಮ್ಮಗಳು ಉಳ್ಳಾಲ ಮುಕ್ಕಚ್ಚೇರಿಯವರೇ ಆಗಿರುವ ಆಸ್ಮಾ (30) ಹಾಗೂ ಅವರ ಪತಿ ಇಮ್ತಿಯಾಝ್ (35) ದಾರುಣವಾಗಿ ಮೃತಪಟ್ಟವರು. ಮೃತ ಬೀಫಾತಿಮ ಅವರ ಪುತ್ರಿ ಸೌದಾ, ಸೌದಾ ಪುತ್ರ ಫವಾಝ್ (13) ಹಾಗೂ ಮೃತ ನಸೀಮಾ ಅವರ ಮಗು ಫಾತಿಮಾ (1) ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಮಕ್ಕಳಾದ ಫಾರಿಷ್, ಶಾಹೀದ್ ಗಂಭೀರ ಸ್ಥಿತಿಯಲ್ಲಿದ್ದಾರೆ.

ಗೃಹಪ್ರವೇಶದಿಂದ ವಾಪಸ್ಸಾಗುತ್ತಿದ್ದರು !
ಒಂದೇ ಕುಟುಂಬದ ಏಳು ಮಂದಿ ದೊಡ್ಡವರು ಮತ್ತು 11 ಮಂದಿ ಮಕ್ಕಳು ಶನಿವಾರ ರಾತ್ರಿ ಅಜ್ಜಿನಡ್ಕದ ಮನೆಯಿಂದ ಕೇರಳದ ಪಾಲಕ್ಕಾಡ್ ನಲ್ಲಿ ಭಾನುವಾರ ನಡೆಯಲಿರುವ ಗೃಹಪ್ರವೇಶ ಸಮಾರಂಭಕ್ಕೆ ಜೀಪಿನಲ್ಲಿ ತೆರಳಿದ್ದರು. ಬೀಫಾತಿಮ್ಮ ಅವರಿಗೆ 10 ಮಕ್ಕಳು , ಈ ಪೈಕಿ 3 ಪುತ್ರರು ಹಾಗೂ 7 ಮಂದಿ ಪುತ್ರಿಯರು. ಇವರಲ್ಲಿ ಕೊನೆಯ ಪುತ್ರಿ ರುಖಿಯಾ ಎಂಬವರ ಗೃಹಪ್ರವೇಶ ಸಮಾರಂಭವಿತ್ತು. ಸಮಾರಂಭವನ್ನು ಮುಗಿಸಿದ ಮಂದಿ ಪಾಲಕ್ಕಾಡ್ ನಿಂದ ಭಾನುವಾರ ಸಂಜೆ 7 ಗಂಟೆ ಹೊತ್ತಿಗೆ ಹೊರಟು ಸೋಮವಾರ 7 ಗಂಟೆಗೆ ಮನೆಗೆ ತಲುಪುವವರಿದ್ದರು.

ರಿಕ್ಷಾ ಚಾಲಕರು
ಮೃತರಲ್ಲಿ ಇಮ್ತಿಯಾಝ್ ಮತ್ತು ಮುಸ್ತಾಕ್ ಇಬ್ಬರು ಉಳ್ಳಾಲದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಇತರೆ ವಾಹನಗಳಲ್ಲಿಯೂ ದುಡಿಯುತ್ತಿದ್ದ ಇಬ್ಬರೂ ಶಾಲಾ ಮಕ್ಕಳನ್ನು ಕರೆತರುವ ವಾಹನದಲ್ಲಿ ದುಡಿಯುತ್ತಿದ್ದರು. ಶ್ರಮಜೀವಿಗಳಾಗಿರುವ ಇಬ್ಬರು ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಸಹೃದಯಿಗಳಾಗಿದ್ದರು. ತಲಪಾಡಿಯಿಂದ ಪಾಲಕ್ಕಾಡಿಗೆ 338 ಕಿ.ಮೀ ಕ್ರಮಿಸಲು ಇರುವುದರಿಂದ ಇಬ್ಬರು ಹಂಚಿ ವಾಹನವನ್ನು ಚಲಾಯಿಸುತ್ತಿದ್ದರು. ಅಪಘಾತ ಸಂದರ್ಭ ಇಮ್ತಿಯಾಝ್ ವಾಹನ ಚಲಾಯಿಸುತ್ತಿದ್ದರೆನ್ನಲಾಗಿದೆ. ಮುಸ್ತಾಕ್ ಮುಂಬದಿ ಸೀಟಿನಲ್ಲೇ ಕುಳಿತ್ತಿದ್ದರು. ಮುಸ್ತಾಕ್ ಸ್ನೇಹಿತನ ಜೀಪನ್ನು ಪಡೆದುಕೊಂಡು, ಅದರಲ್ಲಿ ತೆರಳಿದ್ದರು.

ಶಾಲೆಗಾಗಿ ಆತುರದಲ್ಲಿ ವಾಪಸ್ಸಾಗಿದ್ದರು
ವಾಹನದಲ್ಲಿ 7 ಮಂದಿ ದೊಡ್ಡವರಿದ್ದರೆ, ಉಳಿದ 11 ಮಂದಿ ಮಕ್ಕಳಲ್ಲಿ 9 ಮಂದಿ ಶಾಲೆಗೆ ಹೋಗುವವರಾಗಿದ್ದರು. ಸೋಮವಾರ ದಿನವಾಗಿದ್ದರಿಂದಾಗಿ ಮಕ್ಕಳಿಗೆ ಶಾಲೆಯಿರುವ ಹಿನ್ನೆಲೆಯಲ್ಲಿ ದೂರದ ಪಾಲಕ್ಕಾಡಿಗೆ ತೆರಳಿ ಸಮಾರಂಭದ ದಿನದಂದೇ ವಾಪಸ್ಸಾಗಿದ್ದರು. ಈ ಪೈಕಿ ಮೂರು ಹಾಲುಣಿಸುವ ಮಕ್ಕಳೂ ಇದ್ದರು.

ಮಡುಗಟ್ಟಿದ ಶೋಕ
ಮಂಗಲ್ಪಾಡಿ ಸಿ.ಹೆಚ್.ಸಿ ಆಸ್ಪತ್ರೆಯಲ್ಲಿ ಐದು ಮೃತದೇಹಗಳನ್ನು ಮಹಜರು ನಡೆಸಿದ ಬಳಿಕ ಸಂಜೆ ವೇಳೆಗೆ ಅಜ್ಜಿನಡ್ಕದಲ್ಲಿರುವ ಬೀಫಾತಿಮ್ಮ ಅವರ ಮನೆಗೆ ತರಲಾಯಿತು. ನೂರಾರು ಬಂಧು ಮಿತ್ರರು, ಊರಿನ ಮಂದಿ ಜಮಾಯಿಸಿದ್ದು, ಶೋಕ ಮಡುಗಟ್ಟಿತ್ತು. ಐವರ ದಫನ ಕಾರ್ಯವೂ ಕಲ್ಲಾಪು ಪಟ್ಲ ಮಸೀದಿಯಲ್ಲಿ ನಡೆಯಿತು.

ದು:ಖ ಮಾಸುವ ಮುನ್ನವೇ
ವರ್ಷದ ಹಿಂದೆಯಷ್ಟೇ ಬೀಫಾತಿಮ್ಮ ಅವರ ಇಬ್ಬರು ಅಳಿಯಂದಿರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಘಟನೆ ನಡೆದು ವರ್ಷವಾಗುತ್ತಿದ್ದಂತೆ ಇದೀಗ ಐದು ಮಂದಿ ಸಾವನ್ನಪ್ಪಿರುವುದು ಇಡೀ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ. ನೋವಿನಿಂದ ಹೊರಬರುವ ಸಂದರ್ಭವೇ ಇಂತಹ ಘೋರ ದುರಂತ ಸಂಭವಿಸಿದೆ.

ಹೊಂಡಮಯ ಹೆದ್ದಾರಿ
ಲಾರಿಯ ಮುಂಭಾಗದ ಚಕ್ರ ಸ್ಫೋಟಗೊಂಡು ಅಪಘಾತ ಸಂಭವಿಸಿರುವುದಾಗಿ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲಪಾಡಿಯಿಂದ ಕಾಸರಗೋಡಿಗೆ ತೆರಳುವ ರಸ್ತೆ ಕಿರಿದಾಗಿದ್ದು, ಅದರಲ್ಲೂ ಮಳೆ ನಂತರ ಸಂಪೂರ್ಣ ಹೊಂಡಗಳೇ ಕಾಣುತ್ತಿವೆ. ಇದರಿಂದಲೇ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿವೆ. ಹೆದ್ದಾರಿ ಪ್ರಾಧಿಕಾರದವರ ಬೇಜವಾಬ್ದಾರಿಯೂ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

Exit mobile version