UN NETWORKS
ಮಂಗಳೂರು: ದ.ಕ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಕಲ್ಕರಬೆಟ್ಟು ಪ್ರದೇಶದಲ್ಲಿ ನೆರೆ ನೀರು ತುಂಬಿ 10 ಮನೆಮಂದಿ ಅಪಾಯದಂಚಿನಲ್ಲಿದ್ದಾರೆ.
ಕಲ್ಕಾರಬೆಟ್ಟು ಕೋಟ್ಯಪ್ಪ ಪೂಜಾರಿ ಎಂಬವರ ಮನೆ ಸದ್ಯ ಅಪಾಯದಂಚಿನಲ್ಲಿದೆ. ಇತರೆ 9 ಮನೆಗಳ ಎದುರಿನಲ್ಲಿ ನೆರೆ ನೀರು ತುಂಬಿ ಮನೆಮಂದಿ ಹೊರಗೆ ಹೋಗಲು ಅಸಾಧ್ಯವಾಗಿದೆ.
ಗ್ರಾಮದಲ್ಲಿರುವ ಕಿರು ಸೇತುವೆಗಳು ಜಲಾವೃತವಾಗಿ ಮಕ್ಕಳು, ಕೆಲಸಕ್ಕೆ ಹೋಗುವವರು, ಗ್ರಾಮಸ್ಥರು ಮನೆಯಲ್ಲೇ ಉಳಿಯುವಂತಾಗಿದೆ. ಗದ್ದೆ ತೋಟಗಳಲ್ಲಿಯೂ ಜಲಾವೃತವಾಗಿದ್ದು, ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ.ಮತ್ತೆ ಎಡಬಿಡದೆ ಮಳೆ ಸುರಿದಲ್ಲಿ ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗುವುದರಲ್ಲಿ ಸಂಶಯವಿಲ್ಲ ಎಂದು ಸ್ಥಳೀಯ ನಿವಾಸಿ ವಿಶ್ವನಾಥ್ ತಿಳಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಗ್ರಾಮದ ಜನರಿಗೆ ಸಹಕರಿಸಬೇಕು ಅನ್ನುವ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.