Site icon Ullalavani

ಆರ್ಯ ಯಾನೆ ಮರಾಠ ಸಮಾಜ ಸಂಘ ಜು. 29ರಂದು ವಿಶೇಷ ಮಹಾಸಭೆ

UN NETWORKS

ಜಪ್ಪಿನಮೊಗರು : ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದೇವೋಜಿ ರಾವ್‍ಜಾಧವ್ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕಕ್ಕೆ ವಿಶೇಷ ಮಹಾಸಭೆಯನ್ನು ಜು. 29ರಂದು ನಡೆಸಲು ತೀರ್ಮಾನಿಸಲಾಯಿತು.

ಜಪ್ಪಿನ ಮೊಗರು ಶಿವಾಜಿ ನಗರದ ಆರ್ಯ ಮರಾಠ ಭವನದಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣ ಧರೇಕರ್ ಅಧ್ಯಕ್ಷತೆಯಲ್ಲಿ ನಡೆದ 2018-19ನೇ ಸಾಲಿನ ದ್ವಿತೀಯ ಮಾಸಿಕ ಸಭೆಯಲ್ಲಿ . ಸಂಘದ ಅಧ್ಯಕ್ಷ ದೇವೋಜಿ ರಾವ್ ಜಾಧವ್ ಅವರು ಸಂಘದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ವಿಶೇಷ ಮಹಾಸಭೆಯ ಚುನಾವಣಾ ಅಧಿಕಾರಿಯಾಗಿ ಸದಾನಂದ ಕಟ್ವಾಟ್ ಅವರನ್ನು ನೇಮಿಸಲಾಯಿತು.ಕಾರ್ಯದರ್ಶಿ ರಾಜೇಶ್ ರಾವ್ ಪಾಟೀಲ್ ಹಿಂದಿನ ಸಭೆಯ ವರದಿ ವಾಚಿಸಿ ಸದಸ್ಯರ ಅನುಮೋದನೆ ಪಡೆದುಕೊಂಡರು. ಕೋಶಾಧಿಕಾರಿ ಶ್ರೀಧರ ಬಹುಮಾನ್ ಸಮುದಾಯ ಭವನದ ಮಾಸಿಕ ಆದಾಯ ಮತ್ತು ಖರ್ಚು ವೆಚ್ಚದ ವಿವರ ನೀಡಿದರು.

ಪ್ರತಿಭಾ ಪುರಸ್ಕಾರ, ಸಹಾಯಧನ ಅರ್ಜಿ ಅಹ್ವಾನ : ಸಂಘದ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದಾದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಸಾಧಕರ ಸನ್ಮಾನ, ವಿಕಲ ಚೇತನ ಸಹಾಯಧನ ಕಾರ್ಯಕ್ರಮ ಆ. 26ರಂದು ನಡೆಸಲು ಸಭೆಯಲ್ಲಿ ತೀರ್ಮಾನಿಸಿದ್ದು, ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಆ. 5 ಕೊನೆಯ ದಿನಾಂಕ ಎಂದು ನಿರ್ಧರಿಸಲಾಯಿತು.

ಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ವಾಮನ ಮುಲ್ಲಂಗೋಡ್, ಸಂಜೀವ ರಾವ್ ಸಿಂಧ್ಯಾ, ಮೋಹನ್ ರಾವ್ ಭೊಂಸ್ಲೇ, ಗಿರೀಶ್ ರಾವ್ ಭೊಂಸ್ಲೆ, ಪ್ರಮೋದ್ ಬಹುಮಾನ್ ಪಿಲಿಕುಂಜೆ, ನೀಳೋಜಿ ರಾವ್ ಭೊಂಸ್ಲೆ, ಬಿ.ಜೆ. ಚಂದ್ರಶೇಖರ್ ಪಾಟೀಲ್, ಯತೀಶ್ ಕುಮಾರ್ ಪಾಟೀಲ್, ಧನುಂಜಯ ಬಹುಮಾನ್, ಪ್ರೇಮಲತಾ ವೈ. ರಾವ್ ಮುಂತಾದವರು ಅಭಿಪ್ರಾಯ ಮಂಡಿಸಿದರು.
ಸಮಿತಿ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ವಲಯ ಸಂಚಾಲಕರು, ಮಹಿಳಾ ಸಂಚಾಲಕರು, ಯುವವೇದಿಕೆ ಸಂಚಾಲಕರು ಹಾಗೂ ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು. ವಲಯ ಸಂಚಾಲಕ ಸಂತೋಷ್ ಮಾವಿನಕಲ್ಲು ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಪ್ರದೀಪ್‍ಚಂದ್ರ ಜಾಧವ್ ವಂದಿಸಿದರು.

Exit mobile version