UN NETWORKS
ಉಳ್ಳಾಲ: ಸಮಗ್ರ ಔಷಧ ಪದ್ಧತಿ ಜನರಿಗೆ ಒಂದೇ ಸ್ಥಾನದಲ್ಲಿ ಸಿಗುವಂತಹ ಕೇಂದ್ರಗಳನ್ನು ಸ್ಥಾಪಿಸಲು ಸರಕಾರ ಚಿಂತನೆ ನಡೆಸುತ್ತಿದೆ. ಜನರಿಗೆ ಉಪಯುಕ್ತವಾಗುವ ಉದ್ದೇಶದಿಂದ ಇಂತಹ ಕೇಂದ್ರಗಳ ಸ್ಥಾಪನೆಗೆ ಆಯುಷ್ ಸಚಿವಾಲಯ ಹೆಚ್ಚಿನ ಒತ್ತು ನೀಡಲಿದೆ ಎಂದು ಕೇಂದ್ರ ಆಯುಶ್ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಅಭಿಪ್ರಾಯಪಟ್ಟರು.ತಲಪಾಡಿ ದೇವಿನಗರದಲ್ಲಿ ಭಾನುವಾರ ತುಳುನಾಡು ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಶಾರದಾ ಆಯುರ್ವೇದ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದೊಂದಿಗೆ ಶಾರದಾ ಸಂಸ್ಥೆ ಅಪರೂಪದ ಆಯುರ್ವೇದ ಆಸ್ಪತ್ರೆ ಆರಂಭಿಸಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಯಾವುದೇ ಚಿಕಿತ್ಸೆಯಿಂದ ಆಗದ ಲಾಭ ಆಯುರ್ವೇದ ಚಿಕಿತ್ಸೆಯಿಂದ ಸಾಧ್ಯವಿದೆ. ಈ ವಿಷಯದಲ್ಲಿ ನಿರಂತರ ಸಂಶೋಧನೆ ನಡೆಯಬೇಕು. ಸಂಸ್ಕೃತ ಭಾಷೆಗೆ ವಿನಾಶವಿಲ್ಲ, ಉಳಿಸಿ ಬೆಳೆಸು ಪ್ರಯತ್ನವೂ ನಡೆಯಬೇಕು ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಆಯುರ್ವೇದ ಔಷಧ ಅಲ್ಲ, ಅದೊಂದು ಉತ್ತಮ ಆಹಾರ ಪದ್ದತಿ. ನಮ್ಮ ದೇಶದ ಋಷಿ ಮುನಿಗಳು ವಿಶ್ವಕ್ಕೇ ಕೊಟ್ಟ ಕೊಡುಗೆ. ಇದನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ರೋಗ ಬಂದಾಗ ಆಯುರ್ವೇದ ಮೊದಲ ಆಯ್ಕೆಯಾಗಬೇಕೇ ಹೊರತು ಕೊನೆಯ ಆಯ್ಕೆ ಆಗಬಾರದು ಎಂದು ಹೇಳಿದರು.
ಮನುಷ್ಯನ ಜೀವನ ಪ್ರಕೃತಿ ಜೊತೆ ಹೊಂದಿದ್ದು, ಮನುಷ್ಯನಿಗೆ ಬೇಕಾದ ಔಷಧವೂ ಪ್ರಕೃತಿಯಲ್ಲಿದೆ. ಸ್ತುತ ದಿನಗಳಲ್ಲಿ ಆಯುರ್ವೇದ ಕಾಲೇಜು ಆರಂಭಿಸುವುದು ಅತ್ಯಗತ್ಯ, ಇದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಆಯುರ್ವೇದ ವೈದ್ಯರಿಗೆ ಜರ್ಮನಿಯಲ್ಲಿ ಭಾರೀ ಬೇಡಿಕೆಯಿದೆ. ಅದಕ್ಕಾಗಿ ರಾಜ್ಯ ಸರಕಾರ ಇಲ್ಲಿನ ವೈದ್ಯರನ್ನು ಜರ್ಮನಿಗೆ ಕಳುಹಿಸುವ ಒಪ್ಪಂದವನ್ನು ನಡೆಸುವ ಕುರಿತು ಚಿಂತನೆ ನಡೆಸಿದೆ ಎಂದರು.
ಉಪ್ಪಳ ಶ್ರೀ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ‘ಹಿಂದೆ ಮನೆಯ ಅಡುಗೆ ಕೋಣೆ ಔಷಧಾಲಯ ಆಗಿತ್ತು, ಆದರೆ ಇಂದು ಆಸ್ಪತ್ರೆಯೇ ಅಡುಗೆ ಮನೆಯಾಗಿದೆ. ಆಕಾಶದಲ್ಲಿ ಮನೆ ಕಟ್ಟುತ್ತಿರುವ ಇಂದು ಒಂದು ರೋಗದಿಂದ ಹೊರಬರಲು ಇನ್ನೊಂದು ರೋಗ ಆಹ್ವಾನಿಸಬೇಕಿದೆ. ಹಿಂದೆ ಮನೆಯಲ್ಲೇ ಮಣ್ಣಿನ ಸ್ನಾನ, ಎಣ್ಣೆ ಸ್ನಾನ ಸಿಗುತ್ತಿತ್ತು, ಈಗ ಇವುಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದೇವೆ’ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ಮತ್ತು ಸೌಲಭ್ಯಗಳ ಮಾಹಿತಿ ಪತ್ರ ಬಿಡುಗಡೆಗೊಳಿಸಲಾಯಿತು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವಾಸುದೇವ ಅಸ್ರಣ್ಣ, ತುಳುನಾಡು ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಉಪಾಧ್ಯಕ್ಷ ಪ್ರೊ.ಕೆ.ಎಸ್.ಕಲ್ಲೂರಾಯ, ಟ್ರಸ್ಟಿ ಎಚ್.ಸೀತಾರಾಮ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ರವಿ ಗಣೇಶ್ ಸ್ವಾಗತಿಸಿದರು. ತುಳುನಾಡು ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿ ಪ್ರದೀಪ್ ಕುಮಾರ್ ಕಲ್ಕೂರ ವಂದಿಸಿದರು. ಮುಖ್ಯ ಆಡಳಿತಾಧಿಕಾರಿ ವಿವೇಕ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.
ವೈದಿಕ ರೀತಿಯಲ್ಲಿ ಚಿಕಿತ್ಸಾ ವಿಧಾನವನ್ನು ಒಳಗೊಂಡಿರುವ ಆಸ್ಪತ್ರೆಯಲ್ಲಿ ವಯಸ್ಕರಲ್ಲಿ ಕಂಡುಬರುವ ಬಹುಅಂಗಾಂಗ ಅನಾರೋಗ್ಯ, ಬೊಜ್ಜು, ಮಧುಮೇಹ( ಟೈಪ್-2), ಚರ್ಮರೋಗ, ಗ್ಯಾಸ್ಟ್ರೋ ಕರುಳಿನ ರೋಗಗಳಿಗೆ ಕಾಯಾಚಿಕಿತ್ಸೆ, ಜೀವಾನುಗಳ ವಿಷದಿಂದ ಜೀವಕ್ಕೆ ಹಾನಿಯಾಗುವುದನ್ನು ಸರಿಪಡಿಸಲು ಪಂಚಕರ್ಮ ಚಿಕಿತ್ಸೆ, ಪಿಸ್ತೂಲ, ಪೈಲ್ಸ್ ಮುರಿತದ , ಗುಣವಾಗದ ಹುಣ್ಣು, ಕ್ರೀಡಾ ಗಾಯಗಳು, ರಕ್ತನಾಳಗಳ ಉಬ್ಬುವಿಕೆಗೆ ಶಲ್ಯತಂತ್ರ, ಶಾಲಕ್ಯತಂತ್ರ , ತಲೆ, ಕಣ್ಣು, ಕಿವಿ, ಮೋಗು, ಬಾಯಿ , ಹಲ್ಲುಗಳ ಚಿಕಿತ್ಸೆಗೆ ಶಲಕ್ಯತಂತ್ರ , ಗರ್ಭಿಣಿಯರಿಗೆ ಅನುಕೂಲಕರವಾಗಲು ಸಂಗೀತ ಥೆರಪಿ, ಯೋಗ, ಪ್ರಸೂತಿ ಮುನ್ನ ಶಿಕ್ಷಣ, ಸಾಮಾನ್ಯ ಪ್ರಸೂತಿಗಾಗಿ ಪ್ರಸೂತಿತಂತ್ರ, ಉಸಿರಾಟದ ತೊಂದರೆಗಳಿಗೆ ಖೌಮಾರಭೃತ್ಯ, ಲೈಂಗಿಕ ಲೋಪದೋಷಗಳಿಗೆ ವಜೀಕರಣ, ಆಯುರ್ವೇದ ಶೈಲಿಯಲ್ಲಿ ಫಿಸಿಯೋಥೆರಪಿ, ಯೋಗ ಚಿಕಿತ್ಸೆಗಳನ್ನು ಒಳಗೊಂಡಿರುವ ಆಸ್ಪತ್ರೆಯಲ್ಲಿ ಆಯುರ್ವೇದ ಸ್ಪೆಷಾಲಿಟಿ ಕ್ಲಿನಿಕ್, ಎಕ್ಸ್ ರೇ ಕೇಂದ್ರ, ಸ್ಕ್ಯಾನಿಂಗ್, ಲ್ಯಾಬ್, ದಂತ ಕ್ಲಿನಿಕ್, ಪ್ರಸೂತಿ ಕೇಂದ್ರ, ತುರ್ತು ಚಿಕಿತ್ಸಾ ಘಟಕ, ಹವಾನಿಯಂತ್ರಿತ ಕೊಠಡಿಗಳು, ಜನರಲ್ ಮತ್ತು ಸೆಮಿಸ್ಪೆಷಲ್ ವಾರ್ಡುಗಳು, ಪಥ್ಯಾಹಾರ ವಿಭಾಗ, 24 ಗಂಟೆ ಬಿಸಿನೀರು ಹಾಗೂ ವೈಫೈ ಅನ್ನು ಒದಗಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.