Site icon Ullalavani

ಉಳ್ಳಾಲ ಉರೂಸಿಗೆ ಪೂಜಾರಿ ನೇತೃತ್ವದಲ್ಲಿ ಹೊರೆಕಾಣಿಕೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ:  ಎಲ್ಲಾ ಧರ್ಮದವರೊಂದಿಗೆ ಮಾನವೀಯತೆಯ ಬಾಳು, ಹೃದಯ ವೈಶಾಲ್ಯತೆ ಮರೆದು, ಬಡ ಮತ್ತು ಶ್ರೀಮಂತ ವರ್ಗದವರೊಂದಿಗೆ  ಬೇಧಭಾವವಿಲ್ಲದೆ ಮಗುವಿನಂತೆ ಬಾಳಿದ ಸೈಯ್ಯದ್ ಮಹಮ್ಮದ್  ಶರೀಫುಲ್ ಮದನಿ ತಂಙಳ್  ಅವರ  ಆದರ್ಶಗಳು ಸ್ಮರಣೀಯ. ಇದನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ದರ್ಗಾ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ  ಎಂದು  ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ  ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.

ಅವರು  ಐದು ವರ್ಷಗಳಿಗೊಮ್ಮೆ  ನಡೆಯುವ ಉಳ್ಳಾಲ ಉರೂಸ್‍ಗೆ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ  ಮಂಗಳೂರಿನ  ನೆಹರೂ ಮೈದಾನದಿಂದ  ಉಳ್ಳಾಲ ದರ್ಗಾದವರೆಗೆ  ಸಾಗಿದ  ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡು ಬಳಿಕ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕುದ್ರೋಳಿ  ಶ್ರೀ ಗೋಕರ್ಣನಾಥ ಕ್ಷೇತ್ರದ  ವತಿಯಿಂದ  ಸೇರಿ ಒಟ್ಟು ಸುಮಾರು  1,000 ಮುಡಿ ಅಕ್ಕಿ ಹಾಗೂ ಇತರ ಸಾಮಾನುಗಳನ್ನು  ಹೊರೆಕಾಣಿಕೆಯಲ್ಲಿ ಅರ್ಪಿಸಲಾಯಿತು.

5 ದಶಕಗಳಿಂದ ಉಳ್ಳಾಲ ಉರೂಸಿಗೆ ಭಕ್ತನಾಗಿ ಬರುತ್ತಿದ್ದೇನೆ. ಸೈಯ್ಯದ್ ಮಹಮ್ಮದ್ ಶರೀಫುಲ್ ಮದನಿ ತಂಙಳ್ ಅವರ ಆದರ್ಶಗಳು ಮತ್ತು ದರ್ಗಾದ ಪಾವಿತ್ರ್ಯತೆಯನ್ನು ಜಗತ್ತಿಗೆ ಸಾರುವ ಕೆಲಸ ದರ್ಗಾ ಕಾರ್ಯಚಟುವಟಿಕೆಗಳಿಂದ ಆಗಬೇಕಿದೆ. ಮುಸ್ಲಿಂ ಬಿಡಾರದಲ್ಲಿ ಹುಟ್ಟಿದವನಾಗಿದ್ದು, ಸಹೋದರೆತಯ ವಾತಾವರಣದಲ್ಲಿ ಬೆಳೆದು ಬಂದಿದ್ದೇನೆ. ಕುದ್ರೋಳಿ ಗೋಕರ್ಣಾಥೇಶ್ವರ ರಥೋತ್ಸವದಲ್ಲಿ ಮುಸ್ಲಿಂ ಬಂಧುಗಳೇ ಭಾಗವಹಿಸುತ್ತಿದ್ದ ಒಂದು ಕಾಲದಲ್ಲಿ ರಥವನ್ನು ಮುಟ್ಟಿ ಬರಲು ಅವರಿಂದಲೇ ಅವಕಾಶ ಪಡೆದಿದ್ದೆ. ಅಂದು ಆತ್ಮಸಮರ್ಪಣೆ ಭಾವನೆಯಿಂದ ರಥೋತ್ಸವ ಕಾರ್ಯಕ್ರಮದಲ್ಲಿ ಮುಸಲ್ಮಾನರು ಭಾಗವಹಿಸುತ್ತಿದ್ದರು. ಆದರೆ ಈಗ ದೇಶದಲ್ಲಿ ದ್ವೇಷ, ಅಸೂಯೆ, ಶಾಂತಿ ಕದಡುವ ಕೆಲಸಗಳು ನಡೆಯುತ್ತಿದೆ. ಪ್ರೀತಿ ನೀಡಿದರೆ, ಜನ ಪ್ರೀತಿ ಕೊಡುತ್ತಾರೆ. ಧೂಷಣೆ ಮಾಡುವವರಿಗೆ ಭಯಪಡದೆ, ದೇವರನ್ನು ಎಲ್ಲರ ಹೃದಯದಲ್ಲಿ ನೋಡಿಕೊಳ್ಳಿ ಎಂದರು.

15 ಕೋಟಿ ಬಿಡುಗಡೆ ಮಾಡಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದಾರೆ. ಅವರೆಲ್ಲರಲ್ಲೂ ಈ ಬಾರಿ ಉಳ್ಳಾಲ ದರ್ಗಾ ಸಮಾಜಸೇವೆಯನ್ನು ಮನಗಂಡು ರೂ.15 ಕೋಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದ ಪೂಜಾರಿ ನಾನು ಎಂ.ಪಿ ಆಗುತ್ತಿದ್ದರೆ ಕಿವಿ ಹಿಂಡಿ ಅನುದಾನವನ್ನು ಬಿಡುಗಡೆ ಮಾಡಿಸುತ್ತಿದ್ದೆ. ಆದರೆ ಅಂತಹ ಅವಕಾಶ ನನ್ನಲ್ಲಿಲ್ಲ ಎಂದರು.

ಈ ಸಂದರ್ಭ ದರ್ಗಾ ಸಮಿತಿ ಅಧ್ಯಕ್ಷ ಯು.ಯಸ್.ಹಂಝ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಯು.ಟಿ.ಇಲ್ಯಾಸ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ಟಿ.ಯಸ್. ಅಬ್ದುಲ್ಲಾ ಮೊದಲಾದವರು ಇದ್ದರು.

Exit mobile version