UN NETWORKS
ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಕಟ್ಟಡದ ಶೌಚಾಲಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
2017ರ ಆಗಸ್ಟ್ ತಿಂಗಳಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿಗೆ ಪಿಡಿಓ ಆಗಿ ನೇಮಕಗೊಂಡಿದ್ದರು. ಆದರೆ ವಿಪರೀತ ಕುಡಿತವನ್ನು ಅಭ್ಯಾಸ ಮಾಡಿಕೊಂಡಿದ್ದ ಇವರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದೆ ಆಗಾಗ್ಗ ರಜೆ ಮಾಡಿಕೊಳ್ಳುತ್ತಾ ಬಂದಿದ್ದರು. ಮೂರು ತಿಂಗಳ ಹಿಂದೆ ಪತ್ನಿ ಇವರನ್ನು ಮದ್ಯವರ್ಜನ ಶಿಬಿರಕ್ಕೆ ದಾಖಲು ಮಾಡಿದ್ದರು. ಅಲ್ಲಿಂದ ವಾಪಸ್ಸಾಗಿಯೂ ವ್ಯಸನವನ್ನು ಬಿಡದೇ ಇದ್ದಾಗ ಕಂಕನಾಡಿಯ ಕೌನ್ಸಿಲಿಂಗ್ ಕೇಂದ್ರಕ್ಕೂ ದಾಖಲಿಸಿದ್ದರು. ಅಲ್ಲಿಂದ ವ್ಯಸನವನ್ನು ಬಿಟ್ಟಿದ್ದ ಅಭಿವೃದ್ಧಿ ಅಧಿಕಾರಿ ಕೈಕಾಲು ನಡುಕದಿಂದಾಗಿ ಪಂಚಾಯಿತಿನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸಲು ಅಸಾಧ್ಯವಾಗಿದ್ದರು. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ಇತರೆ ಸಿಬ್ಬಂದಿ ಜತೆಗೆ ದೂರಿದ್ದರು. ಸ್ಥಳೀಯ ಜನಪ್ರತಿನಿಧಿಗಳು ಕೂಡಾ ಮೇಲಾಧಿಕಾರಿಗಳಿಗೆ ದೂರು ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಯವರು ಇಂದಿನಿಂದ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದರು. ಆದರೆ ತಾಲೂಕು ಕಚೇರಿಗೆ ತೆರಳದೆ, ಮುನ್ನೂರು ಪಂಚಾಯಿತಿಗೆ ಬೇಗನೇ ಬಂದಿದ್ದ ಪಿಡಿಓ ಆತ್ಮಹತ್ಯೆ ನಡೆಸಿದ್ದಾರೆ.
ತನ್ನ ಕಚೇರಿಯ ಟೇಬಲ್ ನಲ್ಲಿ ಬರೆದಿಟ್ಟಿರುವ ಡೆತ್ ನೋಟಲ್ಲಿ ಸಹೋದರ ಕುಮಾರಸ್ವಾಮಿ ಮತ್ತು ಪತ್ನಿ ಯ ದೂರವಾಣಿ ಸಂಖ್ಯೆಯನ್ನು ಬರೆದಿಟ್ಟು, ಬಳಿಕ ತನ್ನ ಸಾವಿಗೆ ತಾನೇ ಕಾರಣವೆಂದು ಹೇಳಿದ್ದಾರೆ. ತೀರಿಕೊಂಡ ಬಳಿಕ ಸರಕಾರಿ ಕೆಲಸವನ್ನು ಪತ್ನಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅವಳು ಮತ್ತು ಮಗಳು ಬದುಕಲು ದಾರಿಮಾಡಿಕೊಡುವಂತೆ ಕೋರಿದ್ದಾರೆ.