UN NETWORKS
ಉಳ್ಳಾಲ: ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಆರೋಗ್ಯ ಹಾಗೂ ಆಹಾರ ಇಲಾಖೆ ಸಚಿವನಾಗಿ ಸರಕಾರದ ಪ್ರತಿ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ್ದಲ್ಲದೆ ಬಹಳಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರ ಹಾಗೂ ರಾಜ್ಯದ ಜನರ ಪ್ರೀತಿಗೆ ಪಾತ್ರನಾಗಿದ್ದು ಪಕ್ಷದ ಮುಖಂಡರು ನನ್ನ ಸೇವೆಯನ್ನು ಪರಿಗಣಿಸಿ ನೂತನ ಸಮಿಶ್ರ ಸರಕಾರದಲ್ಲಿಯೂ ಜನರ ಸೇವೆ ಮಾಡಲು ಸಚಿವ ಸ್ಥಾನ ನೀಡಿದ್ದಾರೆ. ಅವರ ನಂಬಿಕೆ ವಿಶ್ವಾಸಕ್ಕೆ ತಕ್ಕಂತೆ ಕೊಟ್ಟ ಇಲಾಖೆಯಡಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
ನಾಲ್ಕನೆಯ ಬಾರಿಗೆ ಶಾಸಕನಾಗಿ, ಎರಡನೆಯ ಬಾರಿ ಸಚಿವನಾಗಿ ಮುಂದುವರಿಯಲು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಶ್ರಮ ಸಾರ್ಥಕಗೊಳಿಸುತ್ತೇನೆ. ನನ್ನನ್ನು ನಂಬಿಕೊಂಡು ಕ್ಷೇತ್ರದಲ್ಲಾಗ ಬೇಕಾದ ಅಭಿವೃದ್ದಿ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಜನರ ಮುಂದಿಟ್ಟ ಅವರಿಗೆ ನೀಡಿರುವ ಎಲ್ಲ ಭರವಸೆ ಈಡೇರಿಸಿದ್ದೇನೆ, ಮುಂದೆಯೂ ಈಡೇರಿಸುತ್ತೇನೆ. ಮಂಗಳೂರು ಕ್ಷೇತ್ರದಲ್ಲಿ ಕುಡಿಯುವ ನೀರು ಸೇರಿದಂತೆ ಅತ್ಯಗತ್ಯವಾದ ಎಲ್ಲ ಬೇಡಿಕೆಯನ್ನು ಈಡೇರಿಸುತ್ತೇನೆ. ಹಾಗೆಯೇ ನೂತನ ಇಲಾಖೆಯಲ್ಲಿ ಸಮಗ್ರ ಅಭಿವೃದ್ಧಿ ದಾಖಲಿಸುವೆನು ಎಂದರು.
ಅಧಿಕಾರಕ್ಕಾಗಿ ಯಾರಲ್ಲೂ ಕೇಳಲಿಲ್ಲ. ನನಗೆ ಸಚಿವ ಸ್ಥಾನ ಕೊಡುವುದಕ್ಕೆ ಯಾರದೂ ವಿರೋಧವೂ ಇರಲಿಲ್ಲ. ಸಚಿವನಾಗಿ ರಾಜ್ಯದ ಜನತೆಗೆ ಹತ್ತಿರವಾಗಿದ್ದೇನೆ. ಮುಂದಿನ ದಿನಗಳಲ್ಲಿ ವಸತಿ ಹಾಗೂ ನಗರಾಭಿವೃದ್ಧಿ ಕ್ಷೇತ್ರದಲ್ಲಿ ಮಾದರಿ ಕೆಲಸ ಮಾಡಲು ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯಿಲ್, ಬಾವ ಮುಹಮ್ಮದ್, ಪ್ರದಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಮುಹಮ್ಮದ್ ಹಳೆಕೋಟೆ, ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಯು.ಕೆ.ಇಬ್ರಾಹಿಂ, ಕಾರ್ಯದರ್ಶಿ ಎ.ಕೆ.ಮುಹಿಯುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
‘ರಾಜ್ಯ ಸರ್ಕಾರದ ನೂತನ ಸಚಿವರಾಗಿ ಅಯ್ಕೆಯಾದ ನಮ್ಮ ಕ್ಷೇತ್ರದ ಶಾಸಕರು, ಆರೋಗ್ಯ ಮತ್ತು ಆಹಾರ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಸುಲಲಿತವಾಗಿ ನಡೆಸಿದ್ದು ಅವರು ಎಲ್ಲಾ ಶಾಸಕರಿಗೆ ಮಾದರಿ, ಜಿಲ್ಲೆಯ ಏಕೈಕ ಶಾಸಕ ಸಚಿವರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಲು ಹೆಮ್ಮೆಯಾಗುತ್ತದೆ’
ಅಬ್ದುಲ್ ರಶೀದ್, ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ