Site icon Ullalavani

ಬಾಯಾರ್ ಮುಜಮ್ಮಉ ಸಖಾಫಾತ್ ಸುನ್ನಿಯ್ಯಾದಲ್ಲಿ ಪ್ರಾರ್ಥನಾ ಸಮ್ಮೇಳನ

UN NETWORKS

ಬಾಯಾರ್ : ಉಲೇಮಾಗಳ ಗೌರವವನ್ನು ಉಳಿಸುವ ಕೆಲಸ ಎಲ್ಲಾ ಯುವಸಮುದಾಯದಿಂದ ಆಗಬೇಕಿದೆ. ಅವರ ಹೆಸರಿಗೆ ಕಪ್ಪು ಚುಕ್ಕೆ ತರುವಂತಹ ಕೆಲಸವನ್ನು ಯಾರೂ ಮಾಡದಿರಿ ಎಂದು ರಾಜ್ಯದ ನೂತನ ವಸತಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಅವರು ಕಾಸರಕೋಡುವಿನ ಬಾಯಾರ್ ಮುಜಮ್ಮಉ ಸಖಾಫಾತ್ ಸುನ್ನಿಯ್ಯಾದಲ್ಲಿ ರಮಳಾನಿನ 23ನೇ ರಾತ್ರಿ ಪ್ರಯುಕ್ತ ಗುರುವಾರ ಅಯೋಜಿಸಿದ ಪ್ರಾರ್ಥನಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು, ಯುವಸಮುದಾಯ ಎಲ್ಲರೂ ಉಲೇಮಾ, ತಂಙಳ್ ಅವರಿಂದ ಸಾಧ್ಯವಾದಷ್ಟು ದುಆ ಪಡೆದಲ್ಲಿ ಒಳಿತು. ಈ ಮೂಲಕ ಧಾರ್ಮಿಕ ಶಕ್ತಿ ಅವರಲ್ಲಿ ಜಾಗೃತಿಯಾಗುತ್ತದೆ. ಎರಡನೇ ಬಾರಿ ಸಚಿವನಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಸಿ ತಕ್ಷಣ ಖಾತೆಗೆ ಸಂಬಂಧಿಸಿದ ಸೆಕ್ರೆಟರಿಯನ್ನಾಗಲಿ, ಕಚೇರಿಯನ್ನಾಗಲಿ ಹುಡುಕಲು ಮುಂದಾಗಿಲ್ಲ. ಬದಲಾಗಿ ಪುತ್ರಿಯನ್ನು ಕೇರಳದ ಮಹ್‍ಅದನಿ ಸಂಸ್ಥೆಗೆ ಬಿಟ್ಟು, ಸಯ್ಯದ್ ಖಲೀಲ್ ತಂಙಳ್ ಕಡಲುಂಡಿ ಅವರ ಸಂದರ್ಶನ ನಡೆಸಿ ತೃಪ್ತನಾದೆ. ಅಲ್ಲಿಂದ ಉಳ್ಳಾಲದ ಅಸ್ತಂಗತ ಖಾಝಿ ತಾಜುಲ್ ಉಲೇಮಾ ಅವರ ಮಕ್‍ಬರ ಸಂದರ್ಶನಗೈದು, ನೇರವಾಗಿ ಬಾಯಾರು ತಂಙಳ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ರಾಜಕೀಯದಲ್ಲಿ ಯಾವುದೇ ಸಮಸ್ಯೆಯಾದರೂ ಉಲೇಮಾಗಳು ಹೇಳಿಕೊಟ್ಟ ದಾರಿಯ ಮೂಲಕವೇ ಪರಿಹಾರ ಕಂಡುಕೊಂಡಿದ್ದೇನೆ. ಚುನಾವಣೆ ಮುನ್ನ ಬಾಯಾರ್ ತಂಙಳ್ ಅವರ ಕಾರ್ಯಕ್ರಮದಲ್ಲಿ ಖಾದರ್ ಜಯಿಸುವುದು ಖಂಡಿತ, ಜನ ಅವರನ್ನು ಜಯಿಸಲಿದ್ದಾರೆ ಎಂದು ಆಶೀರ್ವಾದವನ್ನು ನೀಡಿದ್ದರು. ಅಂತಹ ಹಿರಿಯರ ಪ್ರಾರ್ಥನೆಯ ಫಲವಾಗಿ ಇಂದು ಅತ್ಯಧಿಕ ಬಹುಮತ ಹಾಗೂ ಬಹಳಷ್ಟು ಅಂತರದಿಂದ ಗೆಲುವು ಸಾಧಿಸಿ, ಇದೀಗ ಎರಡನೇ ಬಾರಿಯೂ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಇದೀಗ ಅವರ ಎದುರೇ ಸಚಿವ ಸ್ಥಾನ ಸ್ವೀಕರಿಸಿದ ನಂತರ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಾಗಿ ತಿಳಿಸಿದರು.

ಮಂಜನಾಡಿ ಅಲ್-ಮದೀನಾ ವಿದ್ಯಾಸಂಸ್ಥೆಯ ಶಿಲ್ಫಿ ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ಅಲ್-ಬುಖಾರಿ ಬಾಯಾರ್ ತಂಙಳ್ ರಮಳಾನಿನ 23ನೇ ರಾತ್ರಿಯಲ್ಲಿ ವಿಶೇಷ ಪ್ರಾರ್ಥನಾ ಕೂಟಕ್ಕೆ ನೇತೃತ್ವವಹಿಸಿದರು. ಎಸ್‍ವೈಎಸ್ ಮುಖಂಡ ಅಬ್ದುಲ್ ಲತೀಫ್ ಫಯ್ಯಸ್ವಿ ಮುಖ್ಯ ಪ್ರಭಾಷಣಗೈದರು. ಸಯ್ಯದ್ ಅಟ್ಟಕೋಯ ತಂಙಳ್, ಪಾತೂರು ಮುಹಮ್ಮದ್ ಸಖಾಫಿ, ಪಲ್ಲಂಗೋಡು ಅಬ್ದುಲ್ ಖಾದರ್ ಮದನಿ, ಮೊೈಲಾಂಜಿ ಮಾಸಿಕದ ಸಂಪಾದಕ ಕೆ.ಎಂ ಸಿದ್ದೀಕ್ ಮೊಂಟುಗೋಳಿ, ಬಾಯಾರ್ ಅಬ್ದುಲ್ಲಾ ಮುಸ್ಲಿಯಾರ್, ಸ್ವಾದಿಕ್ ಆವಲ್ಲಂ ಉಪಸ್ಥಿತರಿದರು.

ಸಂಸ್ಥೆಯ ಮ್ಯಾನೇಜರ್ ಸಿದ್ದೀಕ್ ಸಖಾಫಿ ಬಾಯಾರ್ ಸ್ವಾಗತಿಸಿದರು. ಪೋಯ್ಯತ್ತಬೈಲ್ ಮಸೀದಿ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ವಂದಿಸಿದರು.

Exit mobile version