Site icon Ullalavani

ನಿಟ್ಟೆಯಲ್ಲಿ ಯುನೆಸ್ಕೋ ಬಯೋಎಥಿಕ್ಸ್ ಘಟಕ ಸ್ಥಾಪನೆ

UN NETWORKS

ಉಳ್ಳಾಲ: ವೈದ್ಯಕೀಯ ಕ್ಷೇತ್ರದಲ್ಲಿ ಅನುಭೂತಿ, ಸಹಾನುಭೂತಿ , ಮಾನವೀಯತೆಯನ್ನು ಪ್ರತಿಪಾದಿಸುವುದರ ಜತೆಗೆ ಹಿಂದಿನ ವೈದ್ಯ ವಿಜ್ಞಾನದ ಕಲೆಯನ್ನು ಪುನರ್ ಸ್ಥಾಪಿಸುವ ಉದ್ದೇಶದೊಂದಿಗೆ ಯುನೆಸ್ಕೋ ದ ಜೈವಿಕ ನೀತಿಶಾಸ್ತ್ರ ವಿಭಾಗಗಳನ್ನು ಹುಟ್ಟಿಹಾಕಿಕೊಂಡಿದೆ ಎಂದು ಯುನೆಸ್ಕೋ ಚೇರ್ ಇನ್ ಬಯೋಎಥಿಕ್ಸ್ ಹೈಫಾ ದ ಪ್ರೊ. ರಸ್ಸೆಲ್ ಡಿಸೋಜಾ ಅಭಿಪ್ರಾಯಪಟ್ಟರು.ಅವರು ಹೈಫಾ,ದ ಯುನೆಸ್ಕೋ ಚೇರ್ ಇನ್ ಬಯೋ ಎಥಿಕ್ಸ್ ಇದರ ಅಂತರಾಷ್ಟ್ರೀಯ ನೆಟ್‍ವರ್ಕ್‍ನಡಿ ನಿಟ್ಟೆ (ಸ್ವಾಯುತ್ತೆಗೊಳ್ಳಲಿರುವ ವಿ.ವಿ) ಯಲ್ಲಿ ಆರಂಭಿಸಿದ ಜೈವಿಕ ನೀತಿಶಾಸ್ತ್ರದ ವಿದ್ಯಾರ್ಥಿ ವಿಭಾಗವನ್ನು ಸೋಮವಾರ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.

ದೇಶದಾದ್ಯಂತ 65 ವಿದ್ಯಾರ್ಥಿ ತಂಡಗಳು ಸಕ್ರಿಯವಾಗಿ ಹೈಫಾ ಯುನೆಸ್ಕೋದ ಜೈವಿಕ ನೀತಿಶಾಸ್ತ್ರ ವಿಂಗ್‍ನಡಿ ಕಾರ್ಯಾಚರಿಸುತ್ತಿದೆ. ಶೇ.80-90 ವಿದ್ಯಾರ್ಥಿಗಳು ಜನರ ರಕ್ಷಣೆ, ಆರೈಕೆ, ಜವಾಬ್ದಾರಿಯನ್ನು ಮನದಲ್ಲಿಟ್ಟುಕೊಂಡು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಅದನ್ನು ಸಾಕಾರಗೊಳಿಸುವ ಉದ್ದೇಶದೊಂದಿಗೆ ಯುನೆಸ್ಕೋ ಕಾರ್ಯಾಚರಿಸುತ್ತಿದೆ. ಕೇರಳ ಭಾಗದಲ್ಲಿ ಹಿಂದಿನ ಆರೋಗ್ಯ ನೀತಿಗಳು ಈಗಲೂ ಪಾಲನೆಯಾಗುತ್ತಿದೆ. ಇತರೆಡೆ ಇದನ್ನು ಪಾಲನೆ ಮಾಡುವ ಉದ್ದೇಶದ ಜತೆಗೆ ವೈದ್ಯ ಮತ್ತು ರೋಗಿ ಜತೆಗಿನ ಸಂಬಂಧ, ಮಾನವೀಯತೆ, ಸಹಾನುಭೂತಿಯ ಮನೋಭಾವ ಹಾಗೂ ವೈಜ್ಞಾನಿಕ ಜ್ಞಾನವನ್ನು ವೃದ್ಧಿಸಿಕೊಂಡು ಭರವಸೆಯ ವೈದ್ಯ ವೃತ್ತಿಯಲ್ಲಿ ಮುಂದುವರಿಯಲು ಯುನೆಸ್ಕೋ ವಿಂಗ್ ಸಹಕಾರಿಯಾಗಲಿದೆ . ದೇಶಾದ್ಯಂತ ಸಮಾವೇಶದಲ್ಲಿ ಭಾಗವಹಿಸುವ ಮೂಲಕ, ಜ್ಞಾನವನ್ನು ವೃದ್ಧಿಸುವುದರೊಂದಿಗೆ ಗ್ರಾಮೀಣ ಭಾಗದ ಜನರಿಗೆ ಬೇಕಾದ ರೀತಿಯಲ್ಲಿ ಚಿಕಿತ್ಸೆಯ ಸವಲತ್ತುಗಳನ್ನು ಒದಗಿಸಲು ಸಾಧ್ಯ ಎಂದರು.

ನ್ಯಾಷನಲ್ ಚೇರ್ ಇಂಡಿಯನ್ ಪ್ರೋಗ್ರಾಂ ಯುನೆಸ್ಕೋ ಚೇರ್ ಇನ್ ಬಯೋಎಥಿಕ್ಸ್ ಇದರ ಡಾ| ಮೇರಿ ಮ್ಯಾಥ್ಯು ಮಾತನಾಡಿ ವಿಂಗ್ ಜತೆಗೆ ಕೈಜೋಡಿಸಿಕೊಂಡಿರುವ ವಿದ್ಯಾರ್ಥಿಗಳು ಸಹಪಾಠಿಗಳಿಗೆ, ಸಿಬ್ಬಂದಿಗಳಿಗೆ ಜ್ಞಾನ ವೃದ್ಧಿಸಲು ಸಹಕಾರಿಯಾಗುತ್ತಾರೆ. ಹಲವೆಡೆ ಬೀದಿ ನಾಟಕಗಳು, ಪ್ರತಿಭಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಸಿಗಬೇಕಾದ ಆರೋಗ್ಯ ನೀತಿಯ ಅರಿವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಮೂಡಿಸುವ ಕಾರ್ಯ ದೇಶದಾದ್ಯಂತ ನಡೆದಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ (ಸ್ವಾಯುತ್ತೆಗೊಳ್ಳಲಿರುವ ವಿ.ವಿ) ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ ವಹಿಸಿದ್ದರು. ಕುಲಸಚಿವೆ ಡಾ| ಅಲ್ಕಾ ಕುಲಕರ್ಣಿ, ನಿಟ್ಟೆ ವಿ.ವಿ ಯುನೆಸ್ಕೋ ಬಯೋಎಥಿಕ್ಸ್ ನ ಸದಸ್ಯ ಡಾ| ಶ್ರೀನಿವಾಸ್ ಭಟ್.ಯು, ಡಾ| ಸಿದ್ದಾರ್ಥ್.ಪಿ.ದುಭಾಷಿ ಉಪಸ್ಥಿತರಿದ್ದರು. ಭಟ್ಟಾಚಾರ್ಯ ಸ್ವಾಗತಿಸಿದರು. ವಿದ್ಯಾರ್ಥಿ ವಿಂಗ್ ನ ಅಧ್ಯಕ್ಷೆ ಮನೀಷಾ ರೈ ವಂದಿಸಿದರು.

Exit mobile version