Site icon Ullalavani

ಕೋಟೆಪುರ ಜೆಟ್ಟಿ ನಿರ್ಮಾಣಕ್ಕೆ ಶಿಲಾನ್ಯಾಸ

ಉಳ್ಳಾಲ: ಕೋಟೆಪುರ ಜೆಟ್ಟಿ ಅಂತಾರಾಷ್ಟ್ರೀಯ ಮಟ್ಟದ ಜೆಟ್ಟಿಯಾಗಿ ಮಾರ್ಪಾಡಾಗಲು ಎಲ್ಲಾ ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.


ನಬಾರ್ಡ್ ಆರ್‌ಐಡಿಎಫ್ ಯೋಜನೆಯಡಿ ಉಳ್ಳಾಲ ಕೋಟೆಪುರದಲ್ಲಿ ಭಾನುವಾರ ಜೆಟ್ಟಿ ನಿರ್ಮಾಣ ಕಾಮಗಾರಿ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಟೆಪುರದಲ್ಲಿ ಸದ್ಯ ಐದು ಕೋಟಿ ವೆಚ್ಚದಲ್ಲಿ ಜೆಟ್ಟಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದೆ ಅದನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು. ಉಳ್ಳಾಲ ಪ್ರದೇಶದಲ್ಲಿ ಜೆಟ್ಟಿ ನಿರ್ಮಾಣಕ್ಕೆ ಶಿಲಾನ್ಯಾಸ ಐತಿಹಾಸಿಕ ಕಾರ್ಯಕ್ರಮವಾಗಿದೆ. ಚುನಾವಣೆ ಸಂದರ್ಭ ಜೆಟ್ಟಿ, ಸುಸಜ್ಜಿತ ರಸ್ತೆ ಹಾಗೂ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಜನರು ಮನವಿ ಮಾಡಿದ್ದರು. ಅದರಂತೆ ಈಗಾಗಲೇ ೯.೫ ಕೋಟಿ ವೆಚ್ಚದ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ೨೩೦ ಕೋಟಿ ವೆಚ್ಚದ ಶಾಶ್ವತ ಕಡಲ್ಕೊರೆತ ತಡೆ ಕಾಮಗಾರಿಗೆ ಶೀಘ್ರ ಮುಖ್ಯಮಂತ್ರಿ ಚಾಲನೆ ನೀಡಲಿದ್ದು, ಜೆಟ್ಟಿ ನಿರ್ಮಾಣವೂ ನಡೆಯಲಿದೆ. ಈ ನಿಟ್ಟಿನಲ್ಲಿ ಈ ಭಾಗದ ಜನರು ಪ್ರಮುಖ ಮೂರು ಬೇಡಿಕೆಗಳು ಈಡೇರಿಸಿದ ತೃಪ್ತಿ ಇದೆ. ಅಧಿಕಾರಿಗಳು ಕಾನೂನು, ನೀತಿ, ನಿಯಮ ಎಂದು ಹೋಗುವ ಬದಲು ಜನಸಾಮಾನ್ಯರಿಗೆ ಉಪಯೋಗವಾಗುವಂತಹ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಪ್ರಯತ್ನಿಸಬೇಕು. ಹಿಂದಿನ ಮೀನುಗಾರಿಕಾ ಸಚಿವ ಆನಂದ ಆಸ್ನೋಟಿಕರ್ ೧.೫೦ ಕೋಟಿ ಜೆಟ್ಟಿ ನಿರ್ಮಾಣಕ್ಕೆ ಬಿಡುಗಡೆಗೊಳಿಸಿದ್ದು, ಈಗಿನ ಸರ್ಕಾರ ೩.೫೦ಕೋಟಿ ಬಿಡುಗಡೆಗೊಳಿಸಿದೆ ಎಂದರು.
ಜೆಟ್ಟಿ ನಿರ್ಮಾಣದಿಂದ ಮೀನುಗಾರರಿಗೆ ಮಾತ್ರವಲ್ಲದೆ ಕ್ಷೇತ್ರದ ಅಭಿವೃದ್ಧಿಗೂ ಪೂರಕವಾಗಿದೆ. ದೋಣಿ ಮೂಲಕವೇ ಮಂಗಳೂರಿಗೆ ನೇರ ಸಂಪರ್ಕ ಸಿಗುವುದರಿಂದ ಕೇರಳ ಹಾಗೂ ಸ್ಥಳೀಯ ಮೀನುಗಾರರು ಮಂಗಳೂರಿಗೆ ಸುತ್ತು ಬಳಸಿ ಹೋಗುವ ಪ್ರಮೇಯ ತಪ್ಪಲಿದೆ. ಕಾಮಗಾರಿ ಬೇಗ ಮುಗಿಸಬೇಕು ಎನ್ನುವ ಉದ್ದೇಶದಿಂದ ಮಳೆಗಾಲಕ್ಕೆ ಮನ್ನವೇ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಕಳೆದ ೧೭ ವರ್ಷಗಳಿಂದ ಶಾಸಕನಾಗಿದ್ದು ಮೀನುಗಾರಿಕೆ ಸಂಬಂಧಿಸಿ ಕ್ಷೇತ್ರಕ್ಕೆ ನಯಾ ಪೈಸೆ ಅನುದಾನ ಬಂದಿಲ್ಲ. ಈಗಿನ ಸರ್ಕಾರ ಪಿಡಬ್ಲ್ಯುಡಿ ಇಲಾಖೆಯಿಂದ ೩೦ ಕೋಟಿ ಅನುದಾನ ಪಡೆದು ಸಮುದ್ರ ತಟದಲ್ಲಿರುವವರ ಅನುಕೂಲಕ್ಕೆ ಬಳಸಲಾಗಿದೆ. ಮೀನುಗಾರರ ಮನೆ ನಿರ್ಮಾಣಕ್ಕೆ ೧.೨೦ ಲಕ್ಷ ಅನುದಾನ ನೀಡಲು ಸರ್ಕಾರ ಒಪ್ಪಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಮೀನುಗಾರಿಕಾ ಕಿಟ್ ವಿತರಿಸಲಾಯಿತು.
ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಎಂ.ಬಾ, ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಸದಸ್ಯರಾದ ಹನೀಫ್, ಫಾರೂಕ್ ಉಳ್ಳಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮನಪಾ ಸದಸ್ಯ ಅಬ್ದುಲ್ ಲತೀಫ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸುಶ್ಮಿತಾ ರಾವ್, ದಿವ್ಯಾ, ಮೊಗವೀರ ಸಂಘದ ಅಧ್ಯಕ್ಷ ಸದಾನಂದ ಬಂಗೇರ, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.
ಮಂಗಳೂರು ಮೀನುಗಾರಿಕಾ ಉಪನಿರ್ದೇಶಕ ಎಂ.ಡಿ.ಪ್ರಸಾದ್ ಸ್ವಾಗತಿಸಿದರು. ಉಡುಪಿ ಬಂದರು ಮತ್ತು ಮೀನುಗಾರಿಕಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಟಿ.ಎಸ್.ರಾಠೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Exit mobile version