Site icon Ullalavani

ಕೋಕೊ ಕೋಲಾ ಕುಡಿಯುವ ಖಾದರ್ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಸುವಲ್ಲಿ ವಿಫಲ: ಸಂಸದ ನಳಿನ್ ಕಟೀಲ್

UN NETWORKS

ಉಳ್ಳಾಲ: ಆರಾಮವಾಗಿ ಕೋಕೊ ಕೋಲಾ ಕುಡಿಯುವ ಸಚಿವ ಖಾದರ್ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸದ ನಳಿನ್ ಕಟೀಲ್ ಹೇಳಿದ್ದಾರೆ. ತೊಕ್ಕೊಟ್ಟು ವಿನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಚುನಾವಣೆಯ ಕಾವು ರಂಗೇರುತ್ತಿದ್ದು, ರಾಜಕೀಯ ಜಿದ್ದಾಜಿದ್ದಿಯ ಮೇಲಾಟಗಳು ನಡೆಯುತ್ತಿದೆ. ಮಂಗಳೂರು ಕ್ಷೇತ್ರದಲ್ಲಿ ಜನರ ಕೂಗು ಶಾಸಕರ ವಿರುದ್ದವಾಗಿದೆ. ಸಮೀಕ್ಷೆಯಲ್ಲೂ ಬಿಜೆಪಿ ಪರವಾಗಿ ವರದಿಗಳು ಬಂದಿವೆ. ಈ ಭಾಗದ ಶಾಸಕರು ಆಡಳಿತ ನಡೆಸಿದ ಆರಂಭದಿಂದಲೂ ಕ್ಷೇತ್ರ ವ್ಯಾಪ್ತಿಯಲ್ಲಿ ಮತೀಯವಾದಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತಾ ಬಂದಿದ್ದಾರೆ. ಇದು ಜನರ ವಿರೋಧಕ್ಕೆ ಕಾರಣವಾಗಿದೆ.

ದೊರೆಯುವ ಸಾಧನಗಳನ್ನು ಉಪಯೋಗಿಸಲು ವಿಫಲರಾಗಿರುವ ಸಚಿವರಾದ ಖಾದರ್, ಶಾಶ್ವತ ಯಾವುದೇ ಪ್ರಾಜೆಕ್ಟ್ ಗಳ ನಿರ್ಮಾಣಮಾಡಿಲ್ಲ. ರಸ್ತೆ,ಯೇ ಅಭಿವೃದ್ದಿ ಎಂದು ಹೇಳಿಕೊಂಡು ಬರುತ್ತಿರುವ ಅವರು ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಬಹುದೊಡ್ಡ ನೀರಿನ ಸಮಸ್ಯೆಯಿದೆ. ಆದರು ತಾನು ಆರಾಮವಾಗಿ ಕೋಕಾ ಕೋಲಾ ಕುಡಿದರೆ ಹೊರತು, ಜನರಿಗೆ ಕುಡಿಯುವ ನೀರನ್ನು ಪೂರೈಸಿಲ್ಲ. ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ಸಿಗರು ಉಳ್ಳಾಲದಿಂದ ಮುಲ್ಕಿಯವರೆಗೆ ಸಾಮರಸ್ಯದ ನಡಿಗೆ ನಡೆಸಿದರು.

ಆದರೆ ಅವರು ಆಡಳಿತಕ್ಕೆ ಬಂದ ನಂತರ ಉಳ್ಳಾಲದಲ್ಲಿ ಎಂಟು ಚೂರಿ ಇರಿತಗಳು, ರಾಜು ಕೋಟ್ಯಾನ್ ಮತ್ತು ಜುಬೈರ್ ಎಂಬ ಇಬ್ಬರ ಹತ್ಯೆ ನಡೆದಿದೆ. ಆದರೂ ಮತೀಯ ವಾದಕ್ಕೆ ಪ್ರೋತ್ಸಾಹಿಸಿದ ಶಾಸಕರು ಸಾಮರಸ್ಯ ನಡಿಗೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಗಲಭೆಗಳನ್ನು ನಿಯಂತ್ರಿಸಲು ವಿಫಲರಾಗಿರುವ ಅವರು ಗೋಹಂತಕರಿಗೆ ಹಿಂದಿನ ಬಾಗಿಲಿನಿಂದ ಬೆಂಬಲಿಸುವ ಜಾಯಮಾನ ಹೊಂದಿದ್ದಾರೆ. ಕ್ಷೇತ್ರದಲ್ಲಿ ಡ್ರಗ್ ಮಾಫಿಯಾ ಮತ್ತು ಸ್ಯಾಂಡ್ ಮಾಫಿಯಾ ಅಟ್ಟಹಾಸ ಮಿತಿಮೀರಿದೆ. ಜನ ಶಾಸಕರ ಮೇಲಿನ ವಿಶ್ವಾಸ ಕಳಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಜಿ.ಪಂ ಸದಸ್ಯನಾಗಿದ್ದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಜನರ ಮೆಚ್ಚುಗೆಗೆ ಪಾತ್ರರಾದ ಸಂತೋಷ್ ರೈ ಬೋಳಿಯಾರ್ ಅವರನ್ನು ಈ ಬಾರಿ ಜನತೆ ಬೆಂಬಲಿಸಲಿದ್ದಾರೆ.

ತೊಕ್ಕೊಟ್ಟು ಮೆಲ್ಕಾರ್ ರಸ್ತೆಯ ಡಿಪಿಆರ್ ಆಗಿದ್ದರೂ ರಾಜ್ಯ ಸರಕಾರ ಎಲ್ಲಿ ಕೇಂದ್ರ ಸರಕಾರದ ಹೆಸರು ಬರುತ್ತದೋ? ಅನ್ನುವ ಕಾರಣಕ್ಕೆ ರಸ್ತೆ ಕಾಮಗಾರಿಯನ್ನು ವಿಳಂಬ ಮಾಡುತ್ತಿದೆ. ಶಾಶ್ವತವಾದ ಕಡಲ್ಕೊರೆತ ಕಾಮಗಾರಿಯನ್ನು ನಡೆಸುವಲ್ಲಿ ವಿಫಲರಾದ ಖಾದರ್, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲಿನ ಕೊರೆತಕ್ಕೆ ಅವರೇ ಕಾರಣವಾಗಿದ್ದಾರೆ. ಇನ್ಫೋಸಿಸ್ ನಲ್ಲೂ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವಲ್ಲಿಯೂ ವಿಫಲರಾಗಿದ್ದಾರೆ. ಕೇಂದ್ರ ಸರಕಾರ ಮಂಗಳೂರಿನಲ್ಲಿ ಐಟಿ ಪಾರ್ಕ್ ಮಾಡಲು ಉದ್ದೇಶಿಸಿದ್ದು, ರಾಜ್ಯದಲ್ಲೂ ಬಿಜೆಪಿ ಆಡಳಿತ ಬಂದಲ್ಲಿ ಅದು ಶೀಘ್ರವೇ ಆರಂಭವಾಗಿ ಯುವಜನರಿಗೆ ಉದ್ಯೋಗ ಅವಕಾಶಗಳು ಹೆಚ್ಚಾಗಲಿದೆ ಎಂದರು.

ಈ ಸಂದರ್ಭ ಮೀನುಗಾರಿಕಾ ನಿಗಮದ ಮಾಜಿ ಸದಸ್ಯ ನಿತಿನ್ ಕುಮಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ಮಹಿಳಾ ಮುಖಂಡೆ ನಮಿತಾ ಶ್ಯಾಂ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ಮನೋಜ್ ಆಚಾರ್ಯ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಶ್ರಫ್ ಹರೇಕಳ, ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.

ಈ ಸಂದರ್ಭ ಅನಿಲ್ ದಾಸ್ ನೇತೃತ್ವದ 15 ಜನ ಯುವಕರ ತಂಡ ಸಂಸದರ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

Exit mobile version