Site icon Ullalavani

ಮಂಗಳೂರು ವಿಧಾನ ಸಭಾಕ್ಷೇತ್ರ ಐವರು ನಾಮಪತ್ರ ಸಲ್ಲಿಕೆ: ಹಿಂದೆ ಸರಿದ ಪಕ್ಷೇತರರು

UN NETWORKS

ಉಳ್ಳಾಲ: ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಐವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು ಜೆಡಿಎಸ್‍ನ ಅಶ್ರಫ್, ಎಂಇಪಿ ಅಭ್ಯರ್ಥಿ ಉಸ್ಮಾನ್ ನಾಮಪತ್ರ ಸಲ್ಲಿಸುವುದರೊಂದಿಗೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ತಬೂಕ್‍ದಾರಿಮಿ ಮತ್ತು ಎಸ್ಸೆಸ್ಸೆಫ್ ಮುಖಂಡ ಅಲ್ತಾಫ್ ಕುಂಪಲ ರಾಜಕಾರಣಿಗಳ ಮನವೊಲಿಕೆಗೆ ಮಣಿದು ನಾಮಪತ್ರ ಸಲ್ಲಿಸುವಕಾರ್ಯದಿಂದ ಹಿಂದೆ ಸರಿದಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಒಟ್ಟು ಐದು ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್‍ನಿಂದ ಯು.ಟಿ.ಖಾದರ್, ಬಿಜೆಪಿಯಿಂದ ಸಂತೋಷ್‍ಕುಮಾರ್ ಬೋಳಿಯಾರ್, ಜೆಡಿಎಸ್‍ನಿಂದ ಮಾಜಿ ಮೇಯರ್ ಅಶ್ರಫ್, ಸಿಪಿಐಎಂನಿಂದ ನಿತಿನ್‍ಕುತ್ತಾರ್, ಎಂಇಪಿಯಿಂದ ಉಸ್ಮಾನ್ ನಾಮಪತ್ರ ಸಲ್ಲಿಸಿದ್ದಾರೆ.ಇದರಲ್ಲಿ ಎಷ್ಟು ಮಂದಿ ಕಣದಲ್ಲಿ ಉಳಿಯುತ್ತಾರೆ ಎಂಬುದು ಇನ್ನೆರಡು ದಿನ ಕಾಯಬೇಕಾಗಿದೆ.

ಕಳೆದ ಬಾರಿ ಉಳ್ಳಾಲ ಕ್ಷೇತ್ರದಿಂದ 15 ಮಂದಿ ಕಣದಲ್ಲಿದ್ದರು.ಎಸ್‍ಡಿಪಿಐ ಅಲ್ಪ ಸಂಖ್ಯಾತರ ಮತಗಳನ್ನು ಬುಟ್ಟಿಗೆ ಹಾಕಿ
ಸಚಿವ ಖಾದರ್ ರವರನ್ನು ಭಾರೀ ಅಂತರದಿಂದ ಸೋಲಿಸಲು ಪ್ರಯತ್ನ ಮಾಡಿತ್ತು.ಅಲ್ಪ ಸಂಖ್ಯಾತರ ಬಾಹುಳ್ಯವುಲ್ಲ ಮಂಗಳೂರು ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಪಡಕೊಳ್ಳಲು ಎಸ್‍ಡಿಪಿಐಗೆ ಸಾಧ್ಯವಾಗಲಿಲ್ಲ. ಕಳೆದ ಬಾರಿ ಖಾದರ್ 29 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.ಈ ಬಾರಿ ಮಂಗಳೂರು ಉತ್ತರ, ಬಂಟ್ವಾಳ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಎಸ್‍ಡಿಪಿಐ ಮಂಗಳೂರು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹಿಂದೇಟು ಹಾಕಿದೆ.

ಉಳ್ಳಾಲ ದರ್ಗಾ ಆಡಳಿತ ವಿಚಾರದಲ್ಲಿ ಖಾದರ್ ದರ್ಗಾ ಪರ ಬೆಂಬಲ ನೀಡಿ ಅನ್ಯಾಯ ಎಸಗಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಅವರಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದಅಲ್ತಾಫ್ ಕುಂಪಲ ಕೊನೆಗಳಿಗೆಯಲ್ಲಿ ಸೋಲುವ ಭೀತಿಯಿಂದ ನಾಮಪತ್ರ ಸಲ್ಲಿಸುವ ಕಾರ್ಯದಿಂದ ಹಿಂದೆ ಸರಿದಿದ್ದಾರೆ. ಚುನಾವಣೆಗೆ ನಿಂತರೆ ಎಸ್ಸೆಸ್ಸೆಫ್‍ ನ ಮತಗಳು ಸಿಗಬಹುದು ಎಂಬ ಲೆಕ್ಕಾಚಾರ ಹಾಕಿ ಅವರು ನಾಮಪತ್ರ ಸಲ್ಲಿಸಲು ತಯಾರಾಗಿ ನಿಂತಿದ್ದರು.ಕೊನೆಗಳಿಗೆಯಲ್ಲಿ ನಾಮಪತ್ರ ಸಲ್ಲಿಸುವ ಕಾರ್ಯದಿಂದ ಹಿಂದೆ ಸರಿದರೆ, ನಾಮಪತ್ರ ಸಲ್ಲಿಸಲು ತಯಾರಾಗಿದ್ದ ಇನ್ನೊರ್ವ ಪಕ್ಷೇತರ ಅಭ್ಯರ್ಥಿ ತಬೂಕ್‍ದಾರಿಮಿ ಸೋತರೆ ಪ್ರತಿಷ್ಠೆ ಕಳಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿ ನಾಮಪತ್ರ ಸಲ್ಲಿಸುವಕಾರ್ಯದಿಂದ ಹಿಂದೆ ಸರಿದಿದ್ದಾರೆ.

ನಾನು ನಾಮಪತ್ರ ಸಲ್ಲಿಸಲುತಯಾರಾಗಿ ನಿಂತಿದ್ದೆ.ಬಹಳಷ್ಟು ಬೆಂಬಲ ನನಗಿತ್ತು.ಆದರೆ ನಾನು ಸ್ಪರ್ಧೆಗೆ ಇಳಿದರೆ ಮತಗಳು ಹಂಚಿ ಹೋಗಿ ಕೋಮುವಾದಿ ಪಕ್ಷ ಬರುತ್ತದೆ.ಕೋಮು ವಾದಿ ಪಕ್ಷಕ್ಕೆ ಅವಕಾಶ ಕೊಡುವುದು ಬೇಡ ಎಂಬ ಏಕೈಕ ಕಾರಣದಿಂದ ಹಿಂದೆ ಸರಿದಿದ್ದೇನೆ ಎಂದು ತಬೂಕುದಾರಿಮಿ ತಿಳಿಸಿದ್ದಾರೆ.

ಖಾದರ್ ಸೋಲುತ್ತಾರೆ ಎಂದು ಗೊತ್ತಿದೆ.ರಾಜಕೀಯ ಬದಲಾಗುತ್ತದೆ. ಗೆದ್ದವರ ಪಕ್ಷದೊಂದಿಗೆ ನಾನಿದ್ದೇನೆ. ಕಣಕ್ಕಿಳಿದು ಮತಗಳು ಹಂಚಿಕೆ ಮಾಡುವುದು ನನಗಿಷ್ಟವಿಲ್ಲ ಎಂಬ ಕಾರಣದಿಂದ ನಾಮಪತ್ರ ಸಲ್ಲಿಕೆ ಮಾಡಿಲ್ಲ ಎಂದು ಅಲ್ತಾಫ್ ಕುಂಪಲ ತಿಳಿಸಿದ್ದಾರೆ.

Exit mobile version