ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಶಾಲೆಯ 3.5 ಹರೆಯದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದರೂ ಬೇಜವಾಬ್ದಾರಿಯಾಗಿ ವರ್ತಿಸಿದ ಮಂಗಳೂರು ಒನ್ ಶಾಲಾ ಆಡಳಿತ ಶಾಲೆಯನ್ನು ಜೂ.1 ರ ಒಳಗೆ ಮುಚ್ಚದೇ ಇದ್ದಲ್ಲಿ, ನಾವೇ ಮುಚ್ಚುವ ಮೂಲಕ ಕ್ರಾಂತಿಕಾರಿ ಹೋರಾಟಕ್ಕೆ ಬಾಷ್ಯ ಬರೆಯಲಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಸದಸ್ಯರು ಆಶೀಕ್ ಮಾಚಾರ್ ಎಚ್ಚರಿಸಿದ್ದಾರೆ.
ಅವರು ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ಒನ್ ಶಾಲೆಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಶಾಲಾ ಆಡಳಿತ ಮಂಡಳಿ ಬೇಜವಾಬ್ದಾರಿತನ ನಿಲುವು ತಾಳಿದೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಶುಕ್ರವಾರ ಶಾಲೆ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಾಲಕಿ ಮೇಲೆ ನಡೆದ ದೌರ್ಜನ್ಯ ದೃಢಪಟ್ಟರೂ, ಶಾಲಾ ಆಡಳಿತ ಮಂಡಳಿ ಮಾತ್ರ ಕ್ಷುಲ್ಲಕ ಕಾರಣಗಳನ್ನು ಹೇಳುತ್ತಾ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಬೆಂಗಳೂರು, ಬೆಳ್ತಂಗಡಿಯಲ್ಲಿ ಬಾಲಕಿಯರ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿರುವ ಸಿಎಫ್ಐ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಆದರೂ ನ್ಯಾಯ ಸಿಗುವವರೆಗೂ ಸಂಘಟನೆ ಹೋರಾಟ ಮುಂದುವರಿಸುತ್ತದೆ. ಜೂ.1 ರೊಳಗೆ ಶಾಲಾ ಮಂಡಳಿಯಲ್ಲಿರುವವರ ವಿರುದ್ಧ ಪೋಕ್ಸೊ ಕಾಯ್ದೆ, ಶಾಲಾ ಅನುಮತಿ ರದ್ದುಗೊಳಿಸಬೇಕು, ಶಾಲೆಗಳಲ್ಲಿ ಖಾಸಗಿ ವಾಹನಗಳನ್ನು ಉಪಯೋಗ ನಡೆಸದಂತೆ ಕಾನೂನು ಕ್ರಮ ಮೂರು ಬೇಡಿಕೆಗಳ ಈಡೇರಿಕೆಯಾಗದಿದ್ದಲ್ಲಿ ಶಾಲೆಯನ್ನು ಮುಚ್ಚುತ್ತೇವೆ ಎಂದಿದ್ದಾರೆ.
ಈ ವೇಳೆ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷ ಇರ್ಷಾದ್ ಬಜಪೆ, ಜಿಲ್ಲಾ ಪ್ರ. ಕಾ. ಫಯಾಝ್ ಮಂಜನಾಡಿ, ಉಳ್ಳಾಲ ವಲಯ ಅಧ್ಯಕ್ಷ ಇರ್ಷಾದ್ ಮೊದಲಾದವರು ಭಾಗವಹಿಸಿದ್ದರು.
ಸ್ಥಳದಲ್ಲಿ ಕೆಎಸ್ಆರ್ಪಿ ಹೆಚ್ಚುವರಿ ಪೊಲೀಸರು, ಉಳ್ಳಾಲ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.