Site icon Ullalavani

ಕಲ್ಲಡ್ಕ ಪ್ರಭಾಕರ್ ವಿರುದ್ಧ ಪ್ರಕರಣ ದಾಖಲು

UN NETWORKS

ಕೈರಂಗಳ : ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿ ಆಮರಣಾಂತ ಉಪವಾಸಕ್ಕೆ ಭೇಟಿ ನೀಡಿದ್ದ ಕಲ್ಲಡ್ಕ ಭಟ್ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಧರ್ಮ ವಿರೋಧಿ ಭಾಷಣ ಮಾಡಿರುವುದರ ವಿರುದ್ಧ ಚುನಾವಣಾ ಆಯೋಗ ಮಾಹಿತಿ ಸಂಗ್ರಹಿಸಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.

ಎರಡು ದಿನಗಳ ಕಾಲ ಆಮರಣಾಂತ ಉಪವಾಸದಲ್ಲಿ ಭಾಗಿಯಾಗಿದ್ದ ಸಂದರ್ಭ ಭಟ್ ಅವರು `ದನದ ಮಾಂಸ ತಿನ್ನುವ ಸಚಿವರನ್ನು ದೇವಸ್ಥಾನದೊಳಕ್ಕೆ ಬಿಡಬಾರದು. ಗೋ ದರೋಡೆಗೆ ಕ್ರಮಕೈಗೊಳ್ಳದೆ ಪ್ರೋತ್ಸಾಹಿಸುವಂತಹ ಸರಕಾರದ ಮತ್ತು ಭಾಗದ ಶಾಸಕರ ಬದಲಾವಣೆಯಾಗಬೇಕಿದೆ ಅಂದಿದ್ದರು. ಮರುದಿನ ಅಲ್ಲೇ ಖಾಸಗಿ ಜಾಗದಲ್ಲಿ ಮಾತನಾಡಲು ಅವಾಶವಿದೆ ಎಂದು ಅನ್ನುತ್ತಾ ನೀತಿ ಸಂಹಿತೆಯ ವಿರುದ್ಧ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದರಿಂದ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಲ್ಲಿ ಗೊಂದಲ ಮತ್ತು ಅನುಮಾನ ಹುಟ್ಟಿಸುವಂತೆ ಭಟ್ ಅವರ ಭಾಷಣ ಪ್ರೇರೇಪಿಸಿದೆ ಎಂದು ಚುನಾವಣಾ ಆಯೋಗ ಆರೋಪಿಸಿತ್ತು.

ಅದರಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಐಪಿಸಿ 153 (ಎ) ಮತ್ತು ಆರ್ ಪಿ ಕಾಯ್ದೆ 125ರ ಅಡಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪವಾಸ ನಿರತ ಗ್ರಾಮ ಪಂಚಾಯತ್ ಸದಸ್ಯನ ಮನೆಗೆ ಹಾನಿ
ಆಮರಣಾಂತ ಉಪವಾಸ ನಡೆಸುತ್ತಿದ್ದ ಟಿ.ಜಿ.ರಾಜಾರಾಂ ಭಟ್ ಆಸ್ಪತ್ರೆಗೆ ದಾಖಲಾದ ಬಳಿಕ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ನಾಯಕ ಉಪವಾಸದ ನೇತೃತ್ವ ವಹಿಸಿಕೊಂಡಿದ್ದರು. ಶನಿವಾರ ತಡರಾತ್ರಿ ದುಷ್ಕರ್ಮಿಗಳು ಅವರ ಮನೆಯ ಹೊರಆವರಣಕ್ಕೆ ದುಷ್ಕರ್ಮಿಗಳು ನುಗ್ಗಿ ಹಾನಿಗೈದಿದ್ದಾರೆ.

ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ನಾಯಕ ಕೈರಂಗಳದ ಬೀರೂರಿನ ನಂದರಾಜ ಶೆಟ್ಟಿ ಎಂಬವರ ಮನೆಯ ಸಿಟ್‍ಔಟ್‍ನಲ್ಲಿದ್ದ ಡ್ರಾವರ್ ಪುಡಿಗೈದಿದ್ದಾರೆ. ಅಲ್ಲದೆ ಅದರಲ್ಲಿದ್ದ ನಂದರಾಜ ಅವರ ವೈಯಕ್ತಿಕ ಡೈರಿಯೊಂದನ್ನು ಹಾನಿಗೈದಿದ್ದಾರೆ ಎನ್ನಲಾಗಿದೆ. ಅಲ್ಲದೆ ಮನೆಯ ಬಾಗಿಲಿಗೆ ಹಲವು ಬಾರಿ ಬಡಿದು ವಿಕೃತ ರೀತಿಯಲ್ಲಿ ವರ್ತಿಸಿದ್ದಾರೆ. ಅದೂ ಅಲ್ಲದೆ ಪಿಎ ಎಂಜಿನಿನಿಯರಿಂಗ್ ಕಾಲೇಜಿನ ಎದುರುಗಡೆ ನಂದರಾಜ್ ಅವರಿಗೆ ಸೇರಿದ ಲಾಡ್ಜ್ ಇದ್ದು, ಅದರ ಎದುರುಗಡೆ ಬೀರ್ ಬಾಟಲಿ ಒಡೆದು ಹಾಕಿದ್ದಾರೆ. ಘಟನೆಯ ಬಗ್ಗೆ ನಂದರಾಜ್ ಅವರು ಈಗಾಗಲೇ ಕೊಣಾಜೆ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ನಂದರಾಜ್ ಅವರು ಕೊಣಾಜೆ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ನೀಡಲಿದ್ದಾರೆ. ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೃತಧಾರಾ ಗೋಶಾಲೆಯಿಂದ ಇತ್ತೀಚಿಗೆ ಗೋಕಳವು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗೋಶಾಲೆಯ ಮಾಲಕ ರಾಜಾರಾಂ ಭಟ್ ಅವರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ನಂದರಾಜ್ ಶೆಟ್ಟಿ ಕೂಡ ಸ್ಥಳದಲ್ಲಿದ್ದು, ಅವರಿಗೆ ನೈತಿಕ ಬೆಂಬಲ ನೀಡಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಮನೆಗೆ ಹಾನಿ ಮಾಡಲಾಗಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಅಸ್ಪತ್ರೆಗೆ ದಾಖಲಾದ ಟಿ.ಜಿ. ರಾಜಾರಾಂ ಭಟ್
ಕೈರಂಗಳ ಗ್ರಾಮದ ಪುಣ್ಯಕೋಟಿನಗರದ ಅಮೃತಧಾರ ಗೋಶಾಲೆಯಿಂದ ದನ ಕಳವು ಪ್ರಕರಣದ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಕಳೆದ ಒಂದು ವಾರದಿಂದ ಉಪವಾಸ ಸತ್ಯಾಗ್ರಹದಲ್ಲಿದ್ದ ಗೋಶಾಲೆಯ ಮುಖ್ಯಸ್ಥ ಟಿ.ಜಿ.ರಾಜಾರಾಮ ಭಟ್ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಪೊಲೀಸರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗೋ ಕಳ್ಳರ ಬಂಧನಕ್ಕಾಗಿ ಪುಣ್ಯಕೋಟಿನಗರದ ಗೋಶಾಲೆಯಲ್ಲಿ ಟಿ.ಜಿ.ರಾಜಾರಾಮ ಭಟ್ ಅವರು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಸತ್ಯಾಗ್ರಹಕ್ಕೆ ಹಲವಾರು ಪ್ರಮುಖರು ಬಂದು ಬೆಂಬಲ ವ್ಯಕ್ತಪಡಿಸಿ, ಪ್ರತಿ ದಿನವೂ ಅಪಾರಸ ಸಂಖ್ಯೆಯಲ್ಲಿ ಜನರು ಸತ್ಯಾಗ್ರಹ ಸ್ಥಳದಲ್ಲಿ ಜಮಾಯಿಸಿ ಗೋ ಕಳ್ಳರ ಬಂಧನಕ್ಕಾಗಿ ಆಗ್ರಹಿಸುತ್ತಿದ್ದರು.
ಶನಿವಾರದಂದು ತಡರಾತ್ರಿ ಟಿ.ಜಿ. ರಾಜರಾಮ ಭಟ್ ಅವರ ಆರೋಗ್ಯದಲ್ಲಿ ವೈಪರಿತ್ಯ ಉಂಟಾಗಿತ್ತು. ಬಳಿಕ ಪೊಲೀಸರು ಅವರ ಜೊತೆಗೆ ಮಾತುಕತೆ ನಡೆಸಿ ಅವರನ್ನು ಕೂಡಲೇ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲೂ ಮುಂದುವರಿದ ನಿರಶನ
ಆಸ್ಪತ್ರೆಗೆ ದಾಖಲಾಗಿರುವ ರಾಜಾರಾಮ ಭಟ್ ಅವರು ಅಸ್ಪತ್ರೆಯಲ್ಲಿಯೂ ಕೂಡಾ ಗೋ ಕಳ್ಳರ ಬಂಧನಕ್ಕಾಗಿ ಆಗ್ರಹಿಸಿ ಏನೂ ಆಹಾರವನ್ನು ಸೇವಿಸದೆ ಉಪವಾಸ ಮುಂದುವರಿಸಿದ್ದಾರೆ. ಶನಿವಾರ ತಡರಾತ್ರಿ ನಿರಶನ ಸ್ಥಳಕ್ಕೆ ಬಂದ ಪೊಲೀಸರು ಬಲತ್ಕಾರವಾಗಿ ತನ್ನನ್ನು ಆಸ್ಪತ್ರೆಗೆ ಸೇರಿಸಿರುವುದಾಗಿ ರಾಜಾರಾಮ ಭಟ್ ಅವರು ಆರೋಪಿಸಿದ್ದಾರೆ. ವೈದ್ಯಕೀಯ ತಪಾಸಣೆ ನಡೆದ ಬಳಿಕ ಪೊಲೀಸರು ತಂದಿದ್ದ ಅಂಬ್ಯುಲೆನ್ಸ್‍ನಲ್ಲಿ ಕುಳಿತುಕೊಳ್ಳಲು ಹೇಳಿದಾಗ ಅದನ್ನು ನಿರಾಕರಿಸಿದ ರಾಜಾರಾಮ ಭಟ್ ಅವರು ತನ್ನದೇ ಕಾರಲ್ಲಿಯೇ ಪೊಲೀಸರೊಂದಿಗೆ ತೆರಳಿದ್ದು ಬಳಿಕ ಪೊಲೀಸರು ದೇರಳಕಟ್ಟೆಯ ಕೆ.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿರುವ ರಾಜಾರಾಮ ಭಟ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ಪ್ರಮುಖರು ಭಾನುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ರಾಜಾರಾಮ್ ಭಟ್ ಆಸ್ಪತ್ರೆಯಲ್ಲಿದ್ದರೂ ಗೋಶಾಲೆಯಲ್ಲಿ ಮುಂದುವರಿದ ಸತ್ಯಾಗ್ರಹ
ರಾಜರಾಮ ಭಟ್ ಅವರ ಅನಾರೋಗ್ಯದಿಂದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಭಟ್ ಅವರ ಆಶಯದಂತೆ ಗೋಶಾಲೆಯಲ್ಲಿ ಅವರ ಬೆಂಬಲಿಗರು ಉಪವಾಸ ಸತ್ಯಾಗ್ರಹ ವನ್ನು ಮುಂದುರಿಸಿದ್ದಾರೆ. ಭಾನುವಾರವೂ ಸುಮಾರು 40 ರಷ್ಟು ಜನ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ಅಲ್ಲದೆ ಭಾನುವಾರ ಸಂಜೆ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಮುಖಂಡರಾದ ಪುಂಡರೀಕಾಕ್ಷ, ನಂದರಾಜ ಶೆಟ್ಟಿ ಸೇರಿದಂತೆ ಸನಾತನ ಸಂಸ್ಕಾರ ಭಾರತಿಯ ಕಲಾವಿದರು ಕೂಡಾ ಭಾಗವಹಿಸಿದ್ದರು. ಸಂಜೆ ನಡೆದ ಗೋಪೂಜೆಯಲ್ಲೂ ಅಪಾರಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಯಾವುದೇ ಕಾರಣಕ್ಕೂ ಸತ್ಯಾಗ್ರಹ ಕೈಬಿಡೆವು: ಸಂತೋಷ್ ಬೋಳಿಯಾರ್
ಗೋ ಹಂತಕರನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಕೈರಂಗಳ ಗೋಶಾಲೆಯಲ್ಲಿ ರಾಜಾರಾಮ ಭಟ್ ಅವರ ನೇತೃತ್ವದಲ್ಲಿ ಆಮರಣಾಂತ ಉಪವಾಸ ನಡೆಯುತ್ತಿದ್ದು ಎಲ್ಲರೂ ಜಾತಿ ಬೇಧ ಮರೆತು ಹೋರಾಟಕ್ಕೆ ಕೈ ಜೋಡಿಸಿದ್ದಾರೆ, ಆದರೆ ಪೊಲೀಸರು ಶನಿವಾರ ತಡರಾತ್ರಿ ಬಂದು ರಾಜಾರಾಮ ಭಟ್ ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸತ್ಯಾಗ್ರಹವನ್ನು ಕೈಬಿಡದೆ ಭಟ್ ಅವರ ಆಶಯದಂತೆ ನ್ಯಾಯ ಸಿಗುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತೇವೆ.
ಸಂತೋಷ್ ಕುಮಾರ್ ಬೋಳಿಯಾರ್
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ

Exit mobile version