Site icon Ullalavani

ಮುಂದುವರಿದ ಆಮರಣಾಂತ ಉಪವಾಸ ಭಟ್ ಆರೋಗ್ಯದಲ್ಲಿ ಏರುಪೇರು

UN NETWORKS

ಕೈರಂಗಳ: ಕೈರಂಗಳದ ಪುಣ್ಯಕೋಟಿನಗರದಲ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಕೈಗೊಳ್ಳಲಾದ ಆಮರಣಾಂತ ಉಪವಾಸ 7ನೇ ದಿನವನ್ನು ಪೂರೈಸಿದ್ದು, ಇದೀಗ 8ನೇ ದಿನಕ್ಕೆ ಕಾಲಿರಿಸುವತ್ತ ಮುಂದಾಗಿದೆ.

ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿಕೊಂಡಿರುವ ಟಿ.ಜಿ.ರಾಜಾರಾಂ ಭಟ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ಮಲಗಿದ ಸ್ಥಳದಿಂದ ಏಳಲಾಗದ ಸ್ಥಿತಿಯಲ್ಲಿದ್ದಾರೆ. ಆರೋಗ್ಯ ಪರೀಕ್ಷೆ ನಡೆಸುತ್ತಿರುವ ಮುಡಿಪು ಸರಕಾರಿ ವೈದ್ಯರು ಆರೋಗ್ಯದಲ್ಲಿ ವ್ಯತ್ಯಾಸ ಇರುವ ಕುರಿತು ತಿಳಿಸಿದ್ದು, ಮುಂಜಾಗ್ರತಾ ವಹಿಸುವಂತೆ ಸೂಚಿಸಿದ್ದಾರೆ.

ಎಸ್‍ಸಿಡಿಸಿಸಿ ನಿರ್ದೇಶಕರಾಗಿರುವ ಟಿ.ಜಿ.ರಾಜಾರಾಂ ಭಟ್ ಅವರನ್ನು ಭೇಟಿ ಮಾಡಿ ಉಪವಾಸ ಕೈಬಿಡಲು ಎಸ್ ಡಿಸಿಸಿ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು ಶನಿವಾರ ಬೆಳಿಗ್ಗೆ ಉಪವಾಸ ಸ್ಥಳಕ್ಕೆ ಭೇಟಿ ನೀಡಿದರೂ, ಭಟ್ ಅವರು ಸತ್ಯಾಗ್ರಹ ಹಿಂಪಡೆಯಲು ಹಿಂದೇಟು ಹಾಕಿದ್ದಾರೆ. ಸಂಜೆ ವೇಳೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸ್ಥಳಕ್ಕಾಗಮಿಸಿ ಭಟ್ ಆರೋಗ್ಯ ಸ್ಥಿತಿಯನ್ನು ಗಮನಿಸಿ ಉಪವಾಸ ಹಿಂಪಡೆಯುವಂತೆ ಕೇಳಿಕೊಂಡರೂ ಅವರು ಒಪ್ಪಲಿಲ್ಲ.

ಬಳಿಕ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ರಾಷ್ಟ್ರೀಯ ವಿಚಾರಧಾರೆಯನ್ನು ಉಳಿಸುವ ಹಿನ್ನೆಲೆಯಲ್ಲಿ ದೊಡ್ಡ ಹೋರಾಟ ನಡೆಯುತ್ತಿದೆ. ಶ್ರದ್ಧಾ ಕೇಂದ್ರಗಳ ಮೇಲಿನ ದಾಳಿಯಿಂದ ಹಿಡಿದು ಪೂಜನೀಯ ಜಾನುವಾರುಗಳ ಮೇಲೆ ನಡೆಯುತ್ತಿರುವ ದಾಳಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಾವಿರಾರು ಮಂದಿಯ ಬೆಂಬಲ ದೊರೆತಿದೆ. ಒಂದು ನಿರ್ಣಯ ಆಗುವವರೆಗೂ ಹೋರಾಟ ಮುಂದುವರಿಯಲಿದೆ. ನಿರಂತರ ಗೋಹತ್ಯೆಯನ್ನು ಹಿಂದೂ ಸಮಾಜದಿಂದ ನೋಡಲು ಅಸಾಧ್ಯ.

ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಟಿ.ಜಿ.ರಾಜಾರಾಂ ಭಟ್ ಆರೋಗ್ಯದಲ್ಲಿ ಹೆಚ್ಚಿನ ಕುಸಿತ ಆಗಿದೆ. ಅದಕ್ಕಾಗಿ ಸತ್ಯಾಗ್ರಹ ಹಿಂಪಡೆಯಲು ಕೇಳಿಕೊಂಡರೂ ಅವರು ನಿರ್ಣಯದಿಂದ ಹಿಂದೆ ಬರಲು ಸಿದ್ಧರಿಲ್ಲ. ನೈಜ ಗೋ ದರೋಡೆಕೋರರನ್ನು ಹಿಡಿದು ಗುರುತು ಹಿಡಿಯುವ ಗೋಶಾಲೆ ಸಿಬ್ಬಂದಿಗೆ ತೋರಿಸಲಿ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿರುವ ಕುರಿತು ರಾಘವೇಶ್ವರ ಶ್ರೀಗಳ ಜತೆಗೆ ತಡರಾತ್ರಿ ಚರ್ಚಿಸಲಿದ್ದೇನೆ. ಇದೊಂದು ನಾಟಕ, ರಾಜಕೀಯ, ಅಥವಾ ಬೇರೆ ಉದ್ದೇಶದ ಹೋರಾಟವಲ್ಲ ಎಂದರು.

`ಜೈಲಿಗೆ ಹಾಕಿದರೂ ನನ್ನ ವಿಚಾರದಲ್ಲಿ ಬದಲಾವಣೆಯಿಲ್ಲ’
ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಕಾಂಗ್ರೆಸ್ ದೂರು ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು ನನ್ನ ವಿರುದ್ಧ ಯಾರು ದೂರು ಕೊಟ್ಟರೂ ತೊಂದರೆಯಿಲ್ಲಕೇಸು ಹಾಕಿ, ಜೈಲಿಗೆ ಹಾಕಿದರೂ ನನ್ನ ವಿಚಾರದಲ್ಲಿ ಬದಲಾವಣೆಯಿಲ್ಲ. ಗಡಿಬಿಡಿಯಲ್ಲಿ ಹೇಳಿಕೆ ನೀಡಿಲ್ಲ, ವಿಚಾರದಲ್ಲಿ ವಿಚಲಿತನಾಗಿಲ್ಲ. ಹತ್ತು ಬಾರಿಯಲ್ಲ, ನೂರು ಬಾರಿಯಾದರೂ ಅದೇ ಮಾತನ್ನು ಪುನರುಚ್ಚರಿಸ್ತೇನೆ. ದೈವಸ್ಥಾನದ ಒಳಗೆ ಹೋದ ಮೇಲೆ ರಕ್ತ ಬೀಳಬಾರದು, ಜಗಳ ಆಗಬಾರದು. ಅಂತಹ ಪವಿತ್ರ ಕ್ಷೇತ್ರಕ್ಕೆ ದನದ ಮಾಂಸ ತಿನ್ನುವವರು ಹೋಗಲೇಬಾರದು. ಈ ವಿಚಾರದಲ್ಲಿ ನಾನು ಸ್ಪಷ್ಟವಿದ್ದು, ಮತ್ತೆ ಪುನರುಚ್ಚರಿಸ್ತೇನೆ. ದೇವಸ್ಥಾನದ ಒಳಗೆ ಅಹಿಂದುಗಳಿಗೆ ಮತ್ತು ಗೋಮಾಂಸ ಭಕ್ಷಕರಿಗೆ ಪ್ರವೇಶವೇ ಇಲ್ಲ. ಕೆಲವರು ಹಣದ ಆಸೆ ಮತ್ತು ಆಮಿಷಗಳಿಗೆ ಬಲಿಬಿದ್ದು ದೇವಸ್ಥಾನಕ್ಕೆ ಕರೆಯುತ್ತಾರೆ.

ಆದರೆ ಹಿಂದೂಗಳಲ್ಲಿ ದಾನ ನೀಡಿ ದೇವಸ್ಥಾನಗಳ ಅಭಿವೃದ್ಧಿ ಮಾಡುವವರು ಹಲವರಿದ್ದಾರೆ. ಅವರಿಂದ ಕೇಳಿ ಪಡೆಯಿರಿ. ದೇವರ ಮೇಲೆ ಭಕ್ತಿಯಿರುವ ಹಿಂದೂಗಳಿಗೆ ಮಾತ್ರ ದೇವಸ್ಥಾನಕ್ಕೆ ಪ್ರವೇಶ. ದೇವಸ್ಥಾನ ಒಳಪ್ರವೇಶಿಸುವವರು ಅಲ್ಲಿ ಕೊಟ್ಟಂತಹ ತೀರ್ಥ ಕುಡಿಯುವುದಿಲ್ಲ, ಹೂವನ್ನು ಕಿವಿಯಲ್ಲಿ ಇಡಲಾರರು , ಗಂಧ ಪ್ರಸಾದವನ್ನು ಹಾಕುವುದಿಲ್ಲ. ಇಂತಹ ಮತಕ್ಕಾಗಿ ನಾಟಕೀಯ ಪ್ರದರ್ಶನ ತೋರಿಸುವವರನ್ನು ದೇವಸ್ಥಾನಕ್ಕೆ ಯಾಕೆ ಬಿಡಬೇಕು. ನಾನು ಎಲ್ಲಾ ದೇವಸ್ಥಾನದ ಸಮಿತಿಯವರ ಬಳಿ ಪ್ರಾರ್ಥನೆ ಮಾಡುತ್ತೇನೆ . ಅವರಿಗೆ ಮಸೀದಿ, ಚರ್ಚ್ ಇದೆ ಅವರು ಅಲ್ಲಿಗೆ ಹೋಗಲಿ. ನಾವು ಹಿಂದೂಗಳು ದೇವರಿದೆ ಅಂತ ಒಪ್ಪಿಕೊಳ್ಳುವ ಕಾರಣ ನಾವು ಮಸೀದಿ, ಚರ್ಚ್ ಗೆ ಹೋಗಬಹುದು. ಆದರೆ ಅಲ್ಲಾ, ಏಸು ಬಿಟ್ಟರೆ ಬೇರೆ ದೇವರಿಲ್ಲ ಅನ್ನುವವರು ದೇವಸ್ಥಾನಕ್ಕೆ ಬರಬಾರದು. ಅವರು ಮುಸಲ್ಮಾನ, ಕ್ರಿಶ್ಚಿಯನ್ ಅಂತ ಒಪ್ಪಿಕೊಂಡರೆ ದೇವಸ್ಥಾನಕ್ಕೆ ಬರಬಾರದು. ಗೋಶಾಲೆ ಇರುವ ಪ್ರದೇಶ ಖಾಸಗಿಯವರಿಗೆ ಸೇರಿರುವುದು. ಅದರೊಳಗೆ ನೀತಿ ಸಂಹಿತೆ ಯಾಕೆ ಅನ್ನುವ ಆಕ್ರೋಶದಲ್ಲಿ ಮಣ್ಣು ಹಾಕಿ ಅಂದಿದ್ದೇನೆ. ಶಬ್ದವನ್ನು ರಾಜಕೀಯವಾಗಿ ದೊಡ್ಡದಾಗಿ ಮಾಡಬಹುದು. ಮಾತಿನಿಂದ ನೀತಿ ಸಂಹಿತೆಯವರಿಗೆ ಬೇಸರವಾಗಿದ್ದಲ್ಲಿ ಅದನ್ನು ವಾಪಸ್ಸು ಪಡೆಯುತ್ತೇನೆ ಎಂದು ಕಲ್ಲಡ್ಕ ಭಟ್ ಹೇಳಿದ್ದಾರೆ.

ಆಸ್ಪತ್ರೆ ಸೇರಿದ ಸತ್ಯಾಗ್ರಹಿ
7ನೇ ದಿನದ ಆಮರಣಾಂತ ಉಪವಾಸದಲ್ಲಿ ಟಿ.ಜಿ.ರಾಜಾರಾಂ ಭಟ್ ಅವರ ಜತೆಗೆ ಕೈಜೋಡಿಸಿದ್ದ ಮೀಯಪದವು ನಿವಾಸಿ ಪ್ರಕಾಶ್ ಭಟ್ ಅವರು ಶನಿವಾರ ಮಧ್ಯಾಹ್ನ ವೇಳೆ ಉಪವಾಸದ ಜಾಗದಲ್ಲಿ ಕುಸಿದುಬಿದ್ದ ಘಟನೆ ನಡೆಯಿತು. ಅವರನ್ನು ಕೂಡಲೇ ಮುಡಿಪು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದೆ.

ಕಾಂಗ್ರೆಸ್ ಸದಸ್ಯರೂ ಉಪವಾಸದಲ್ಲಿ ಭಾಗಿ
ಶುಕ್ರವಾರ ಸಂಜೆಯಿಂದ ಪ್ರದೇಶದ ಬಾಳೆಪುಣಿ ಪಂಚಾಯಿತಿ ಸದಸ್ಯ, ಕಾಂಗ್ರೆಸ್ ಬೆಂಬಲಿತ ಹನೀಫ್ ಅವರು ಭಟ್ ಅವರ ಉಪವಾಸದೊಂದಿಗೆ ಕೈಜೋಡಿಸಿದ್ದಾರೆ. ರಾಜಕೀಯ ದುರುದ್ದೇಶದ ಉಪವಾಸವಲ್ಲ, ಈ ಭಾಗದಲ್ಲಿ ಹಲವು ಮನೆಮಂದಿಯ ಜಾನುವಾರುಗಳ ಕಳವು ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕೊನೆ ಹಾಡುವ ಉದ್ದೇಶದಿಂದ ಉಪವಾಸ ಸತ್ಯಾಗ್ರಹದಲ್ಲಿ ಕೈಜೋಡಿಸಿದ್ದೇನೆ ಅಂದಿದ್ದಾರೆ. ಹನೀಫ್ ಅವರ ಜತೆಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುನೀರ್ ಬಾವಾ ಅವರು ಉಪವಾಸದಲ್ಲಿ ಪಾಲ್ಗೊಂಡಿದ್ದಾರೆ.

ಪದ್ಮನಾಭ ಉಚ್ಚಿಲ್ಲಾತ್ತಾಯ ತಂತ್ರಿ ಭೇಟಿ
ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಸತ್ಯಾಗ್ರಹ ಸ್ಥಳಕ್ಕೆ ಬೇಟಿ ನೀಡಿ ನಮ್ಮ ಭೂಮಿ ,ನಮ್ಮ ಸಂಸ್ಕೃತಿ,ಉಳಿಸುವುದು ನಮ್ಮ ಜವಬ್ಧಾರಿ,ಇವತ್ತು ನಾವು ಜಾಗೃತರಾಗದೇ ಇರುವುದರಿಂದ ಇಂತಹ ಘಟನೆ ಗಳು ಮರುಕಳಿಸುತ್ತದೆ. ಸರಕಾರದಿಂದ ಯಾವುದೇ ಅನೂಕಲಗಳು ಸಿಗದಿದ್ದರೆ ,ಈ ಪ್ರತಿಭಟನೆಯನ್ನು ಇಡೀ ಕರ್ನಾಟಕ ಕೇರಳ, ಇಡೀ ದೇಶ ವ್ಯಾಪಿ ಹಮ್ಮಿಕೊಳ್ಳಬೇಕಿದೆ. ಗೋವು ಸಂಸ್ಕೃತಿಯನ್ನು ಕಾಪಾಡಬೇಕು.

ಇಡೀ ಹಿಂದೂ ಸಮಾಜ ಒಂದೇ ಕಡೆ ಸೇರಿದರೆ ,ಒಗ್ಗಾಟಾದರೇ ಮಾತ್ರ ಇಂತಹ ಪರಿಸ್ಥಿತಿಯನ್ನು ಮುಂದಕ್ಕೆ ಎದುರಿಸಲು ಸಾಧ್ಯ. ಈ ಹೋರಾಟಕ್ಕೆ ಸರಕಾರ ಇಲಾಖೆ ಮಣಿಯದೇ ಹೋದಲ್ಲಿ ಮುದಿನ ದಿನಗಳಲ್ಲಿ ಎಲ್ಲರೂ ಸೇರಿ ಒಂದು ದೊಡ್ಡ ಮಟ್ಟದ ಹೋರಾಟವನ್ನು ಮಾಡಲು ಹಿಂಜರಿಯುವುದಿಲ್ಲ ಎಂದ ಅವರು ಮಾಗಣೆಗಳ ಮಹಾ ಮಂಡಳಿ ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

ಸ್ಥಳಕ್ಕೆ ರಾಜ್ಯ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಭೇಟಿ ನೀಡಿ ಬೆಂಬಲ ನೀಡಿದರು.

Exit mobile version